ಬೆಂಗಳೂರು: ಮಾಗಡಿ ರಸ್ತೆ ಮಾದಪಟ್ಟಣ ಗ್ರಾಮದ ಬಳಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ದುರಂತದಲ್ಲಿ ಕೂಲಿ ಕಾರ್ಮಿಕರ ಸಾವಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ವಾರಿ ಮಾಲೀಕರಿಗೆ ಬರೀ ದುಡ್ಡು ಮಾಡೋದೇ ಕೆಲಸ,ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಇಂತಹ ಪ್ರಕರಣವನ್ನು ನಾವು ಇಲ್ಲಿಯವರೆಗೆ ನೋಡಿಲ್ಲ. ಈ ಹಿಂದೆ ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ದುರಂತಗಳು ಸಂಭವಿಸಿದಾಗ ಚರ್ಚೆ ಮಾಡಿದ್ದೆವು. ಆದರೆ ಸರ್ಕಾರ ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಸಿಎಂ ಗಣಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಲೈಸೆನ್ಸ್ ತಗೊಂಡು ಇನ್ನೂ ಯಾಕೆ ಕೆಲಸ ಶುರು ಮಾಡಿಲ್ಲ ಅಂತ ಸಭೆಯಲ್ಲಿ ಕೇಳಿದ್ದಾರೆ. ಮೀಟಿಂಗ್ ಮಾಡಿ ಮಾಹಿತಿ ಯಾಕೆ ತಗೊಂಡಿದ್ದಾರೆ ಕೇಳಿ, ಇಂತಹ ಸಮಯದಲ್ಲಿ ಖಾಸಗಿ ಮಾಲೀಕರು ದುಡ್ಡು ಮಾಡ್ತಿದ್ದಾರೆ. ಇದರಲ್ಲಿ ದೊಡ್ಡ ದಂಧೆ ಮಾಡುವವರು ಇದ್ದಾರೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಂಡು ಇದರ ಹಿಂದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಸುತ್ತಮುತ್ತ, ರಾಜ್ಯದಲ್ಲಿ ಸಾಕಷ್ಟು ಕ್ವಾರಿಗಳಿವೆ. ಇಲ್ಲಿ ಕೆಲಸ ಮಾಡಲು ಹೊರ ರಾಜ್ಯಗಳಿಂದ ಸಾಕಷ್ಟು ಜನ ಬರುತ್ತಾರೆ. ಶ್ರಮಿಕ ಜೀವಿಗಳು ಕೆಲಸ ಮಾಡುವ ಸಮಯದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಅದರ ಜವಾಬ್ದಾರಿ ಗಣಿ ಮಾಲೀಕರಿಗೆ ಇರುತ್ತದೆ. ಕಠಿಣ ಕಾನೂನು ಇದ್ದರೂ ಬೇಜವಾಬ್ದಾರಿಯಿಂದ ಕ್ವಾರಿ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
7 ಮಂದಿ ಸಾವನ್ನಪ್ಪಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ. ಇದನ್ನು ನೋಡಿದರೆ ಶೋಚನೀಯ ಎನಿಸುತ್ತದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಯಾರು ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೋ ಅವರನ್ನು ಬ್ಯಾನ್ ಮಾಡಬೇಕು. ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೀತಿಯ ದುರ್ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಈಗ ಮೃತಪಟ್ಟವರು ನಮ್ಮ ರಾಜ್ಯದವರಾಗಿರಬಹುದು ಅಥವಾ ಹೊರ ರಾಜ್ಯದವರಾಗಿರಬಹುದು. ಅವರಿಗೆ ಸರ್ಕಾರ ಪರಿಹಾರ ನೀಡಬೇಕು.ಆಸ್ಪತ್ರೆಯಲ್ಲಿ ರುವವರಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು ಎಂದು ಕೇಂದ್ರ ಹೆಚ್.ಡಿ. ಕೆ ಅಗ್ರಹಿಸಿದರು.
