ಕೆ.ಆರ್.ನಗರ: ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿಗೆ ಕೆ.ಆರ್.ನಗರ ತಾಲೂಕಿನ ಅಡಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.
೨೦೨೫-೨೬ನೇ ಸಾಲಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯ ವೈಖರಿಯನ್ನು ಪರಿಗಣಿಸಿ ಅತ್ಯುತ್ತಮ ಪ್ರಶಸ್ತಿ ನೀಡಿದೆ.
ಈ ಶಾಲೆ ೧೯೩೪ರಲ್ಲಿ ಪ್ರಾರಂಭವಾಗಿದ್ದು, ಶತಮಾನೋತ್ಸವದ ಅಂಚಿನಲ್ಲಿದೆ. ಶಾಲೆ ಆರಂಭದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿತ್ತು. ಪ್ರಸ್ತುತ ಒಂದರಿಂದ ಏಳನೇ ತರಗತಿವರೆಗೆ ೩೭ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮುಖ್ಯ ಶಿಕ್ಷಕ ಹಾಗೂ ಇಬ್ಬರು ಸಹ ಶಿಕ್ಷಕರು ಇದ್ದಾರೆ. ಒಂದು ಎಕರೆ ವಿಸ್ತೀರ್ಣದಲ್ಲಿ ಮಕ್ಕಳ ಕಲಿಕೆಗೆ ಅನುಕೂಲಕರವಾದ ವಾತಾವರಣವನ್ನು ಕಟ್ಟಿಕೊಡಲಾಗಿದೆ.
ಜತೆಗೆ ಅಂಗನವಾಡಿ ಕೇಂದ್ರ ಕೂಡ ನಡೆಯುತ್ತಿದೆ ಯುಕೋ ಕ್ಲಬ್, ಚಿತ್ರಕಲೆ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಚಟುವಟಿಕೆ ಕ್ರಿಯಾಶೀಲವಾಗಿವೆ.
ತಂತ್ರಜ್ಞಾನದ ಬಳಕೆಯಲ್ಲಿ ಮುಂದುವರಿದಿದ್ದು, ಪ್ರೊಜೆಕ್ಟರ್, ಕಂಪ್ಯೂಟರ್ ಉಪಯೋಗಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ.
ಶಾಲಾ ಆವರಣದಲ್ಲಿ ಅತ್ಯುತ್ತಮ ಕೈತೋಟ ನಿರ್ಮಿಸಲಾಗಿದೆ. ಆಯುರ್ವೇದ ಔಷಧಿಗಳಿಗೆ ಸಂಬಂಧಿಸಿದ ವಿವಿಧ ಬಗೆಯ ಸಸ್ಯಗಳನ್ನು ಬೆಳೆಸಿ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಎಸ್ಡಿಎಂಸಿ ಅಧ್ಯಕ್ಷ ಎ.ಸಿ.ಮಹೇಶ್ ಹಾಗೂ ಉಪಾಧ್ಯಕ್ಷೆ ರಮ್ಯ ಅವರು ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗಿದೆ. ಶಾಲೆಯ ವಾತಾವರಣದಲ್ಲಿ ಮತ್ತಷ್ಟು ಸೃಜನಶೀಲತೆಯನ್ನು ತರುವ ಪ್ರಯತ್ನದಲ್ಲಿ ಸಮಿತಿ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.
ಶಾಲೆಯಲ್ಲಿ ಸಮರ್ಪಕ ನಿರ್ವಹಣೆಯ ಜೊತೆಗೆ ಸ್ಥಳೀಯ ದಾನಿಗಳು ಮತ್ತು ಪಂಚಾಯಿತಿಯವರ ಸಹಕಾರದೊಂದಿಗೆ ಶಾಲೆಯ ವಾತಾವರಣವನ್ನು ಕಲಿಕೆಯ ಪ್ರಯೋಗಕ್ಕೆ ವಿಸ್ತರಿಸಲಾಗಿದೆ ಎಂದು ಶಾಲೆಯ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕತ ಮುಖ್ಯ ಶಿಕ್ಷಕ ಬ್ಯಾಡರಹಳ್ಳಿ ಭಾಸ್ಕರ್ ತುಂಬು ಹೃದಯದಿಂದ ಹೇಳಿದ್ದಾರೆ.
