ಮೈಸೂರು: ಯಾವ ದೇಶದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಹಾದಿ ತುಸು ವಿಚಲಿತಗೊಳ್ಳುತ್ತದೆಯೋ, ಅಲ್ಲಿ ಇಂತಹ ಸಂತರ ತಪಸ್ಸಿನ ಶಕ್ತಿಯಿಂದಲೇ ಸನಾತನ ಧರ್ಮವು ಮತ್ತೆ ಮರಳಲು ಸಾಧ್ಯವಾಗುತ್ತದೆ ಎಂದು ಪ್ರಖ್ಯಾತ ಆಧ್ಯಾತ್ಮಿಕ ಚಿಂತಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಅಭಿಪ್ರಾಯಪಟ್ಟರು.
ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿವಿಧ ರಾಜ್ಯಗಳಿಂದ, ವಿಭಿನ್ನ ಭಾಷೆ ಹಾಗೂ ಸಂಸ್ಕೃತಿಗಳಿಂದ ಬಂದಿರುವ ಸಹಸ್ರಾರು ಭಕ್ತರನ್ನುದ್ದೇಶಿಸಿ ಮಾತನಾಡಿದ ಸೂಲಿಬೆಲೆ,
ಗುರುವಿನ ಆರಾಧನೆ ವಿಭಿನ್ನ ನದಿಗಳು ಸೇರುವ ಸಾಗರವಿದ್ದಂತೆ.
ವಿಭಿನ್ನ ನದಿಗಳು ವೇಗವಾಗಿ ಬಂದು ಸಾಗರವನ್ನು ಸೇರುವಂತೆ, ನಾವೆಲ್ಲರೂ ಇಂದು ಭಾಷೆಗಳ ಗಡಿಯನ್ನು ಮೀರಿ ಗುರುವಿನ ಆರಾಧನೆಗಾಗಿ ಒಂದೇ ಕಡೆ ಸೇರಿರುವುದು ಅತ್ಯಂತ ಅದ್ಭುತ ಸಂಗತಿ. ನಾವೆಲ್ಲರೂ ಭಗವಂತನಿಂದ ಆಯ್ದುಕೊಳ್ಳಲ್ಪಟ್ಟವರಾಗಿದ್ದೇವೆ. ಆ ದೈವೀ ಶಕ್ತಿಯೇ ನಮ್ಮನ್ನು ಇಲ್ಲಿಗೆ ಕರೆತಂದಿದೆ ಎಂದು ಹೇಳಿದರು.
ನಮ್ಮ ಬ್ಯಾಟರಿಗಳನ್ನು ರೀಚಾರ್ಜ್ ಮಾಡುವ ಶಕ್ತಿ ಗುರುಗಳ ನಗುವಿನಲ್ಲಿದೆ:
ಪ್ರಪಂಚದ ಜಂಜಾಟದಲ್ಲಿ ನಮ್ಮಲ್ಲಿರುವ ಸತ್ ಚಿಂತನೆಗಳ ಬ್ಯಾಟರಿ ಬೇಗನೆ ಡಿಸ್ಚಾರ್ಜ್ ಆಗುತ್ತದೆ. ಆದರೆ ಗುರುಗಳ ಕಣ್ಣಿನ ನೋಟ ಮತ್ತು ಅವರ ಮಂದಹಾಸಕ್ಕೆ ನಮ್ಮನ್ನು ಮತ್ತೆ ಚಾರ್ಜ್ ಮಾಡುವ, ರೀಚಾರ್ಜ್ ಮಾಡುವ ಅದ್ಭುತ ಸಾಮರ್ಥ್ಯವಿದೆ. ಗುರುವಿನ ಕರುಣೆ ಅವರ ಆಶೀರ್ವಾದದ ಮೂಲಕ ಸದಾ ಹರಿಯುತ್ತಿರುತ್ತದೆ ಎಂದು ಅವರು ನುಡಿದರು.
ಆಂಜನೇಯನ ಶಕ್ತಿಯನ್ನು ಜಗತ್ತಿಗೆ ಸಾರಿದ ಮಹಾ ಚೇತನ:
ಸ್ವಾಮೀಜಿಯವರ ಜಾಗತಿಕ ಕಾರ್ಯಗಳನ್ನು ಶ್ಲಾಘಿಸಿದ ಚಕ್ರವರ್ತಿ ಸೂಲಿಬೆಲೆ, “ವಿಶ್ವದಾದ್ಯಂತ, ಆಂಜನೇಯನ ಚಿಂತನೆಗಳನ್ನು ಮತ್ತು ದತ್ತನ ವಿಚಾರಗಳನ್ನು ಬಿತ್ತರಿಸುವಲ್ಲಿ ಸ್ವಾಮೀಜಿಯವರ ಶ್ರಮ ಅಪಾರವಾದದ್ದು. ಭಾರತ ಮಾತೆಯ ಹಿರಿಮೆಯನ್ನು ಜಗತ್ತಿಗೆ ಮುಟ್ಟಿಸಲು ಅವರು ನಡೆಸುತ್ತಿರುವ ಪ್ರಯತ್ನಗಳು ಕೇವಲ ವ್ಯಕ್ತಿಗತವಲ್ಲ, ಅದು ದೈವೀ ಸಂಕಲ್ಪ, ಎಂದು ನುಡಿದರು.
ಇದು ಹುಟ್ಟಿದ ದಿನವಲ್ಲ, ‘ಹುಟ್ಟಿದ ಹಬ್ಬದ ಉತ್ಸವ:
ನಾವೆಲ್ಲರೂ ಕೇವಲ ಬರ್ತ್ ಡೇ (ಹುಟ್ಟಿದ ದಿನ) ಆಚರಿಸಿಕೊಳ್ಳುತ್ತೇವೆ. ಆದರೆ ಸಮಾಜಕ್ಕಾಗಿ ಬದುಕುವ ಸಂತರ ಜನ್ಮದಿನವು ‘ಹುಟ್ಟಿದ ಹಬ್ಬದ ಉತ್ಸವ’ವಾಗಿ ಮಾರ್ಪಡುತ್ತದೆ. ಜಗತ್ತು ಧ್ವಂಸದ ಹಾದಿಯಲ್ಲಿ ಸಾಗುತ್ತಿರುವಾಗ ವಿಶ್ವಕ್ಕೆ ಶಾಂತಿಯ ಸಂದೇಶ ನೀಡುವ ಸಾಮರ್ಥ್ಯ ನಮ್ಮ ಹಿಂದು ಧರ್ಮಕ್ಕಿದೆ. ಆ ದಾರಿಯಲ್ಲಿ ನಾವೆಲ್ಲರೂ ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ಹೆಜ್ಜೆ ಇಡಬೇಕಾಗಿದೆ,
ಎಂದು ಕರೆ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಸ್ವಾಮೀಜಿಯವರ ಪಾದಕಮಲಗಳಿಗೆ ತಮ್ಮ ಮಾತಿನ ಪುಷ್ಪಗಳನ್ನು ಸಮರ್ಪಿಸಿದ ಚಕ್ರವರ್ತಿ ಸೂಲಿಬೆಲೆ ಅವರು, ಆಶ್ರಮದೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಹಾಗೂ ಬಾಲಮುರಳಿ ಕೃಷ್ಣ ಅವರಂತಹ ದಿಗ್ಗಜರು ಇದೇ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದನ್ನು ಸ್ಮರಿಸಿದರು.
