ಸರಸ್ವತಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ

Spread the love

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಾರಂಭವಾದಾಗಿನಿಂದ ಮೈಸೂರಿನ ಅಗ್ರಹಾರ‌ದ ನವಗ್ರಹ ದೇವಸ್ಥಾನದಲ್ಲಿ ತಾಯಿ ಪಾರ್ವತಿಗೆ ವಿಶಿಷ್ಟ ಅಲಂಕಾರ ಮತ್ತು ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ‌‌ ನವರಾತ್ರಿಯ ವಿಶೇಷ ಪೂಜಾಕಾರ್ಯಗಳು ನೆರವೇರುತ್ತಿದೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ಪ್ರತಿದಿನ ತಾಯಿ ಪಾರ್ವತಿಗೆ ವಿಶೇಷ ಅಲಂಕಾರಗಳನ್ನು ಮಾಡುತ್ತಿದ್ದಾರೆ.

ನವರಾತ್ರಿ ಏಳನೆ ದಿನವಾದ ಭಾನುವಾರ ರಾತ್ರಿ ತಾಯಿ ಸರಸ್ವತಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.ಅಷ್ಟು ವಿಶೇಷವಾಗಿ ಅಲಂಕಾರ ಮಾಡಿದ್ದಾರೆ ಅಭಿನಂದನ್.

ದೇವಿಯು ಅಪ್ಪಟ ಬಿಳಿ ಬಣ್ಣ‌ದ ಮೈದಾನ ಕೆಂಪು ಬಾರ್ಡರ್ ಉಳ್ಳ ಸೀರೆ ಉಟ್ಟದ್ದಾಳೆ. ಕನಕಾಂಬರ,ಸೇವಂತಿಗೆ, ಮಲ್ಲಿಗೆ,ಗುಲಾಬಿ ಕಮಲದ ಹೂಗಳಿಂದ ಅಲಂಕೃತಗೊಂಡಿದ್ದಾಳೆ.

ವಿದ್ಯಾದಾತೆ,ವೀಣಾಪಾಣಿ ಶಾರದೆಗೆ ನಿಜವಾದ‌ ವೀಣೆಯನ್ನೇ ಇಟ್ಟು ಅಲಂಕರಿಸಿರುವುದು ನಿಜಕ್ಕೂ ವಿಶೇಷ.

ಜತೆಗೆ ಬೆಳ್ಳಿಯ ಕೈಗಳನ್ನು ಅಳವಡಿಸಿದ್ದು,ತಾಯಿ ಶಾಂತ ಮುದ್ರೆಯಲ್ಲಿ ಆಶೀರ್ವದಿಸುತ್ತಿರುವಂತೆ ಗೋಚರಿಸುತ್ತಿದ್ದಾಳೆ.ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.

ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಮಂಗಳಾರತಿ ತೆಗೆದುಕೊಂಡು ಪ್ರಸಾದ ಸ್ವೀಕರಿಸಿದರು.