ಪ್ರೇಮಿಗಳ ದಿನದಂದು ಪೋಷಕರಿಗೆ ಪಾದಪೂಜೆ ಮಾಡಿದ ಮಕ್ಕಳು

Spread the love

ಮೈಸೂರು: ನಗರದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ಮಕ್ಕಳು ಪೋಷಕರಿಗೆ ಪಾದಪೂಜೆ ಮಾಡುವ ಮೂಲಕ ಪ್ರೇಮಿಗಳ ದಿನದಂದು ನಮ್ಮ ಸಂಸ್ಕೃತಿಯನ್ನು ಮೆರೆದರು.

ನಮ್ಮ ಹಿಂದುತ್ವದ ಸಂಸ್ಕಾರ ಸಂಸ್ಕೃತಿ ಹಿರಿಯರನ್ನು ಪ್ರೀತಿಸೋಣ ಎನ್ನುವ ಘೋಷ ವಾಕ್ಯದೊಂದಿಗೆ ಪೋಷಕರ ಪಾದ ತೊಳೆದು ಕುಂಕುಮ, ಅರಿಶಿಣ ಹಚ್ಚಿ ಪೂಜೆ ಮಾಡಿ ಮಂಗಳಾರತಿ ಮಾಡಿ ಮಕ್ಕಳು ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಶಾಲೆಯ ಸಿ ಇ ಒ ತೇಜಸ್ ಶಂಕರ್ ಮಾತನಾಡಿ,ಪ್ರತಿ ವರ್ಷ ಫೆ. 14 ರಂದು ತಂದೆ-ತಾಯಿ ಪೂಜೆ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ತಂದೆ-ತಾಯಿ ಕಣ್ಣಿಗೆ ಕಾಣುವ ದೇವರು. ಮಕ್ಕಳು ನಿತ್ಯ ಪಾಲಕರ ಪೂಜೆ ಮಾಡಬೇಕು. ಅವರ ಆಜ್ಞೆ ಪಾಲಿಸಬೇಕು. ಅವರನ್ನು ಗೌರವದಿಂದ ಕಾಣಬೇಕು ಎಂದು ತಿಳಿಹೇಳಿದರು.

ತಂದೆ-ತಾಯಿ ಮಕ್ಕಳನ್ನು ಸಲಹುತ್ತಾರೆ. ಉತ್ತಮ ಸಂಸ್ಕಾರ ನೀಡುತ್ತಾರೆ. ಅವರಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ ಎಂದು ತಿಳಿಸಿದರು.

ಸಣ್ಣ ಮಕ್ಕಳು ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಮೂಲಕ ಅವರ ಋಣ ತೀರಿಸಬೇಕು. ಯಾವುದೇ ಕಾರಣಕ್ಕೂ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಬಾರದು ಎಂದು ಹೇಳಿದರು.

ಶಾಲೆಯ ಮುಖ್ಯಸ್ಥರಾದ ತೇಜಸ್ ಶಂಕರ್, ರಾಘವೇಂದ್ರ, ರೇಖಾ ಶ್ರೀನಿವಾಸ್, ಖುಷಿ,ಸವಿತಾ ಘಾಟ್ಕೆ, ಜಯಶ್ರೀ ಶಿವರಾಂ, ಅಪೂರ್ವ ಸುರೇಶ್, ಜೇತ್ತಿ ಪ್ರಸಾದ್,
ಅನಿತಾ, ಶೈಲಜಾ, ಪ್ರಿಯಾಂಕ , ಅಂಕಿತ, ಮತ್ತಿತರರು ಹಾಜರಿದ್ದರು.