ಮೈಸೂರು: ಬಸವಣ್ಣರ ನೇರ ಕಾಯಕವನ್ನು ಕಾರ್ಯರೂಪಕ್ಕೆ ತಂದ ಮಹಾನ್ ತಪಸ್ವಿ ಶಿವಕುಮಾರ ಸ್ವಾಮೀಜಿಗಳು ಎಂದು ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ ತಿಳಿಸಿದರು.
ನಗರದ ಕೆ ಆರ್ ಆಸ್ಪತ್ರೆ ಮುಂಭಾಗ ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ನಡೆದ ಡಾ.ಶಿವಕುಮಾರ ಮಹಾಸ್ವಾಮೀಜಿಗಳವರ 119ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅನ್ನದಾಸೋಹ ಮಾಡಿ ಅವರು ಮಾತನಾಡಿದರು.
ಶ್ರೀಗಳು ನಿಜಕ್ಕೂ ಪವಾಡ ಪುರುಷರು. ತ್ರಿವಿಧ ದಾಸೋಹದ ಮೂಲಕ ಪ್ರಪಂಚದ ಮೂಲೆ ಮೂಲೆಯಲ್ಲಿ ಬಸವ ತತ್ವ ಬಿತ್ತಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವಂತಹ ಸಾಧನೆ ಮಾಡಿರುವ ಶಿವಕುಮಾರ ಸ್ವಾಮೀಜಿಗಳು ಮಾನವ ಜನಾಂಗಕ್ಕೆ ಮಾದರಿ ಎಂದು ಅವರು ತಿಳಿಸಿದರು.
ಶ್ರೀಗಳು ತಮ್ಮ ಜೀವಿತಾವಧಿಯನ್ನು ಸಮಾಜಕ್ಕೆ ಮೀಸಲಿಟ್ಟರು.ಅವರು ಎಂದೂ ಜಾತಿ, ಧರ್ಮ ನೋಡದೆ ಸಮಾಜದ ಎಲ್ಲರಿಗೂ ವಿದ್ಯೆ ನೀಡಿದರು. ಶಿಕ್ಷಣದ ಮಹತ್ವ ತಿಳಿದು ರಾಜ್ಯದಲ್ಲಿ ಎಲ್ಲ ವರ್ಗದ ಜನರಿಗೆ ಅಕ್ಷರ ಕಲಿಸುವ ಮೂಲಕ ಆದರ್ಶವಾದರು ಎಂದು ರಾಘವೇಂದ್ರ ನುಡಿದರು.
ಕಾರ್ಯಕ್ರಮದಲ್ಲಿ ಜೀವದಾರ ಗಿರೀಶ್, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಕಲಾಉತ್ಸವ ಟ್ರಸ್ಟ್ ಅಧ್ಯಕ್ಷ ಅಮಿತ್, ಹರೀಶ್ ನಾಯ್ಡು, ಎಸ್ ಎನ್ ರಾಜೇಶ್, ರಾಕೇಶ್, ದುರ್ಗಾ ಪ್ರಸಾದ್, ಹೇಮಂತ್ ಮತ್ತಿತರರು ಹಾಜರಿದ್ದರು.
