ಮೈಸೂರು: ನಗರದ ಸರಸ್ವತಿಪುರಂನಲ್ಲಿರುವ ಮಹಾಬೋಧಿ ಕರ್ಲಾ ವಿದ್ಯಾರ್ಥಿ ನಿಲಯದಲ್ಲಿ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಡ್ರೈ ಫ್ರೂಟ್ಸ್,ಹಣ್ಣು, ಲೇಖನಿ ವಿತರಿಸಿ ಸೇವಾ ಕಾರ್ಯ ಮಾಡಲಾಯಿತು.
ಈ ಮೂಲಕ ದೇಶದ ಅಗ್ರಗಣ್ಯ ನಾಯಕ,ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಂ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಪ್ರಕಾಶ್ ಪ್ರಿಯಾದರ್ಶನ್, ಶೋಷಿತರ ಧ್ವನಿಯಾಗಿ ಭಾರತದ ಹಸಿರು ಕ್ರಾಂತಿ ರೂವಾರಿಯಾಗಿ ದೇಶವನ್ನು ಮುನ್ನಡೆಸಿದ ಧೀಮಂತ ರಾಷ್ಟ್ರೀಯ ನಾಯಕ ಡಾ. ಬಾಬು ಜಗಜೀವನ್ ರಾಂ ಅವರ ಜನ್ಮ ದಿನದಂದು ಅವರನ್ನು ಸ್ಮರಿಸುವುದು ಅವರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಸಮಾಜದಿಂದ ನಾವು ಬದಲಾಗುವುದಿಲ್ಲ, ನಮ್ಮಿಂದ ಸಮಾಜ ಬದಲಾಗಬೇಕು ಎಂಬ ಸಿದ್ಧಾಂತದೊಂದಿಗೆ ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು – ಕೀಳು ತಾರತಮ್ಯ,ಜಾತಿ ಪದ್ಧತಿ, ಅಸ್ಪೃಶ್ಯ ಮನೋಭಾವನೆಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಮಹಾನ್ ದಲಿತ ನಾಯಕ ಬಾಬು ಜಗಜೀವನ್ ರಾಮ್ ಎಂದು ತಿಳಿಸಿದರು.
ಪಠ್ಯದ ಜೊತೆಯಲ್ಲಿ ಈ ರೀತಿಯ ದೇಶದ ಮಹಾನ್ ನಾಯಕರಗಳು, ಮಹಾಪುರುಷರುಗಳ ಜೀವನ ಚರಿತ್ರೆಯನ್ನು ಓದುವ ಮೂಲಕ ಅವರಲ್ಲಿ ನಾವು ಒಬ್ಬರಾಗಬೇಕು ಎಂಬ ದೃಷ್ಟಿಕೋನದೊಂದಿಗೆ ಬೆಳೆದು ತಂದೆ ತಾಯಿ ಹಾಗೂ ದೇಶಕ್ಕೆ ಕೀರ್ತಿ ತರುವಂತಹ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಕರೆ ನೀಡಿದರು.
ಪತ್ರಿಕ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಬ್ಲಡ್ ಆನ್ ಕಾಲ್ ಕ್ಲಬ್, ಮೈಸೂರು ಸಂಸ್ಥಾಪಕ ದೇವೇಂದ್ರ ಪರಿಹಾರಿಯಾ, ಸಿಂಚನಗೌಡ, ಸಮಾಜ ಸೇವಕಿ ವಿದ್ಯಾ, ಛಾಯ , ಗಾಯಕ ಯಶವಂತ್ ಕುಮಾರ್,ಹಿರಿಯ ಕ್ರೀಡಾಪಟು ಮಹದೇವ್, ಸುಬ್ರಮಣಿ,ರಾಜೇಶ್ ಕುಮಾರ್,ಮಹೇಶ,ದತ್ತ ಮತ್ತಿತರರು ಹಾಜರಿದ್ದರು.
