ಮೈಸೂರು: ಮೈಸೂರಿನ ವಿಜಯನಗರ ದಲ್ಲಿರುವ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀ ಸ್ವಾಮಿಯ ಕುಂಭಾಭಿಷೇಕ ಮಹೋತ್ಸವ ಪ್ರಯುಕ್ತ ಅಖಂಡ ಮಹಾ ಸುದರ್ಶನ ಹೋಮ, ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ದೇವಾಲಯದ ಸಂಸ್ಥಾಪಕರಾದ ನಾಡೋಜ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ, ಪ್ರಧಾನ ಅರ್ಚಕರಾದ ಶೇಷಾದ್ರಿ ಹಾಗೂ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅವರ ಸಮ್ಮುಖದಲ್ಲಿ ನಡೆದ ಅಖಂಡ ಮಹಾ ಸುದರ್ಶನ ಹೋಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು.
ನಂತರ ಮಹಿಳಾ ಸಂಘದವರಿಂದ ವಿಷ್ಣು ಸಹಸ್ರನಾಮ ಪಾರಾಯಣ ಜರುಗಿತು. ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ ಮಾಡಿ, ಭಕ್ತರಿಗೆ ಪ್ರಸಾದದ ರೂಪದಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು.
ವರನಟ ಡಾ.ರಾಜ್ಕುಮಾರ್ ಅವರ ಅಳಿಯ ಗೋವಿಂದರಾಜು, ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ರಘುಲಾಲ್ ಕಂಪನಿಯ ಮುಖ್ಯಸ್ಥರಾದ ರಾಘವನ್, ಚಾಮುಂಡಿ ಬೆಟ್ಟದ ದೇವಾಲಯದ ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷೀತ್, ಚಾರ್ಟರ್ಡ್ ಅಕೌಂಟೆಂಟ್ ಲಕ್ಷ್ಮೀಶ್ (ಸಿಎ) ಸೇರಿದಂತೆ ಅನೇಕ ಗಣ್ಯರು, ಹಿರಿಯರು ದೇವಾಲಯಕ್ಕೆ ಆಗಮಿಸಿ, ಮಹಾ ಸುದರ್ಶನ ಹೋಮದಲ್ಲಿ ಪಾಲ್ಗೊಂಡು ಪ್ರಸಾದ ಪಡೆದರು.
ಸೋಮವಾರದಿಂದಲೇ ಆರಂಭಗೊಂಡ ಶ್ರೀ ಸ್ವಾಮಿಯ ಕುಂಭಾಭಿಷೇಕ ಮಹೋತ್ಸವವು ೩ ದಿನಗಳ ಕಾಲ ವಿಶೇಷ ಧಾರ್ಮಿಕ ಪೂಜಾ-ಕೈಂಕರ್ಯಗಳೊಂದಿಗೆ ನಡೆಯಿತು.
ಕೊನೆ ದಿನವಾದ ಬುಧವಾರ ಶ್ರೀ ಯೋಗಾನರಸಿಂಹಸ್ವಾಮಿಗೆ ಕುಂಭಾಭಿಷೇಕ ಮತ್ತು ಅಖಂಡ ಮಹಾ ಸುದರ್ಶನ ಹೋಮ ಜರುಗಿತು.
ಈ ಸಂದರ್ಭದಲ್ಲಿ ಡಾ.ಭಾಷ್ಯಂ ಸ್ವಾಮೀಜಿ ಅವರು ಮಾತನಾಡಿ, ಅಖಂಡ ಮಹಾ ಸುದರ್ಶನ ಹೋಮವು ಭಗವಾನ್ ವಿಷ್ಣುವಿನ ಸುದರ್ಶನ ಚಕ್ರಕ್ಕೆ ಸಮರ್ಪಿತವಾದ ಅತ್ಯಂತ ಶಕ್ತಿಶಾಲಿ ಹಾಗೂ ಮಂಗಳಕರವಾದ ವೈದಿಕ ಆಚರಣೆಯಾಗಿದೆ ಎಂದು ತಿಳಿಸಿದರು.
ಇದು ನಕಾರಾತ್ಮಕ ಶಕ್ತಿಗಳ ನಿವಾರಣೆ, ರಕ್ಷಣೆ, ಆರೋಗ್ಯ, ಮತ್ತು ಸಮೃದ್ಧಿಗಾಗಿ ನಡೆಸಲ್ಪಡುವ ಮಹಾಯಜ್ಞವಾಗಿದೆ ಎಂದು ಹೇಳಿದರು.
ಮಹಾ ಸುದರ್ಶನ ಹೋಮವು ೧೦ ಹೋಮಗಳಿಗೆ ಸಮನಾಗಿರುತ್ತದೆ, ಇದು ಜೀವನದ ಹೆಚ್ಚಿನ ಪ್ರಯೋಜನಗಳನ್ನು ಹೇಗೆ ದೃಢೀಕರಿಸುತ್ತದೆ ಎಂಬುದನ್ನು ಪ್ರಾಚೀನ ವೈದಿಕ ಬರಹಗಳಲ್ಲಿ ವಿವರಿಸಲಾಗಿದೆ. ಮಹಾನ್ ದೇವರು, ಭಗವಾನ್ ವಿಷ್ಣು, ಶಾಂತಿಯುತ ಜೀವನವನ್ನು ಸುಲಭಗೊಳಿಸುವ ಗ್ರಹದ ರಕ್ಷಕನಾಗಿ ಪೂಜಿಸಲ್ಪಟ್ಟಿದ್ದಾನೆ. ಅವನು ಇತರ ಶೀರ್ಷಿಕೆಗಳಿಂದ ಕೂಡ ಉಲ್ಲೇಖಿಸಲ್ಪಟ್ಟಿದ್ದಾನೆ, ವಿರೋಧಿಗಳು ಮತ್ತು ದುಷ್ಟ ಶಕ್ತಿಗಳನ್ನು ರಕ್ಷಿಸುವಲ್ಲಿ ನಿರ್ಣಾಯಕನಾಗಿರುತ್ತಾನೆ. ಭಗವಾನ್ ವಿಷ್ಣುವಿನ ಸುದರ್ಶನ ಚಕ್ರವು ಪ್ರಬಲವಾಗಿದೆ, ಹೆಚ್ಚಾಗಿ ರಾಕ್ಷಸರು ಮತ್ತು ದುಷ್ಟ ಶಕ್ತಿಗಳನ್ನು ನಾಶಮಾಡಲು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.
