ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ.
ಈವರೆಗೆ ಕುಲಸಚಿವರಾಗಿದ್ದ ಪ್ರೊ.ಎಸ್.ಕೆ.ನವೀನ್ಕುಮಾರ್ ಅವರನ್ನು ವರ್ಗ ಮಾಡಿ, ಮಂಗಳೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಮರು ನಿಯೋಜಿಸಲಾಗಿದೆ.
ಈ ಹಿಂದಿನ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ್ ವಿರುದ್ಧ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಏಳು ತಿಂಗಳ ಹಿಂದೆ ನವೀನ್ಕುಮಾರ್ ಅವರನ್ನು ನೇಮಕ ಮಾಡಲಾಗಿತ್ತು.
ಈಗ ವಿಶ್ವವಿದ್ಯಾಲಯದ ನೇಮಕಾತಿ ಸಂಬಂಧ ಆರೋಪಗಳ ಕುರಿತು ನ್ಯಾ.ಪಾಟೀಲ ಅವರ ನೇತೃತ್ವದ ಸಮಿತಿ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲೇ ಈ ವರ್ಗಾವಣೆ ನಡೆದಿದೆ.
2006ನೇ ಬ್ಯಾಚ್ನ ಕೆಎಎಸ್ ಅಧಿಕಾರಿಯಾಗಿರುವ ಎಸ್.ಕುಸುಮಾಕುಮಾರಿ ಅವರು, ಮೈಸೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ನಗರಪಾಲಿಕೆ ವಲಯ-6ರ ಸಹಾಯಕ ಆಯುಕ್ತರಾಗಿ, ಕಬಿನಿ ಭೂಸ್ವಾಧಿನಾಧಿಕಾರಿ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ಒಂದು ತಿಂಗಳ ಹಿಂದೆ ಹೆಚ್ಚುವರಿ ಆಯುಕ್ತ ಹುದ್ದೆಯಿಂದ ಬಿಡುಗಡೆಯಾಗಿ ಹುದ್ದೆ ನಿರೀಕ್ಷೆಯಲ್ಲಿದ್ದರು. ಸರ್ಕಾರದ ಆದೇಶ ಶನಿವಾರವೇ ತಲುಪಿದ್ದು, ಭಾನುವಾರ ರಜೆ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
