ಮೈಸೂರು: ಸಾಧನೆಗೆ ದೈಹಿಕ ನ್ಯೂನತೆ ಎಂದಿಗೂ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ, ನಿರಾಮಯ ಫೌಂಡೇಶನ್ ವತಿಯಿಂದ ದೃಷ್ಟಿ ವಿಶೇಷಚೇತನ ಮಹಿಳೆಯರಿಗಾಗಿ ಏ.5 ರಂದು ‘ಹೆರಿಟೇಜ್ ಕಪ್’ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಈ ಬಹುನಿರೀಕ್ಷಿತ ‘ಹೆರಿಟೇಜ್ ಕಪ್’ ಕ್ರಿಕೆಟ್ ಪಂದ್ಯಾವಳಿಯು ನಾಳೆ ಭಾನುವಾರ ನಗರದ ಬನ್ನಿಮಂಟಪದಲ್ಲಿರುವ ಜೆ.ಎಸ್.ಎಸ್ ವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ನಿರಾಮಯ ಫೌಂಡೇಶನ್ ಸಂಸ್ಥಾಪಕರಾದ ಆರ್. ರಕ್ಷಿತಾ ತಿಳಿಸಿದರು.
ನಾಳೆ ಬೆಳಿಗ್ಗೆ 7 ಗಂಟೆಗೆ ಇನ್ನರ್ ವೀನಿರಾಮಯ ಫೌಂಡೇಶನ್ ಸಂಸ್ಥಾಪಕ ಆರ್. ರಕ್ಷಿತಾ,ಲ್ ಕ್ಲಬ್ ಮೈಸೂರು, ವಿದ್ಯಾ ವೈ – ಸಹ-ಸಂಸ್ಥಾಪಕ ವಿಷನ್ ಎಂಪವರ್ ಟ್ರಸ್ಟ್ ಬೆಂಗಳೂರು , ಮುರಳಿ ಶ್ರೀನಿವಾಸಯ್ಯ ಅಧ್ಯಕ್ಷರು – ಗೋಪಯ್ಯ, ಮೈಸೂರು , ಹವಾಯ್ ಸ್ಟೀಲ್ ಡೋರ್ಸ್, ಡೆಕಾಥ್ಲಾನ್ ಮೈಸೂರು ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ವಿಶೇಷ ಅತಿಥಿಗಳಾಗಿ ಸುನಿತಾ ಎನ್ ದೊಡ್ಡಪ್ಪನವರ್ ಪಾಲ್ಗೊಳ್ಳಲಿದ್ದಾರೆ.
ಮೈಸೂರಿನ ‘ನಿರಾಮಯ’ ತಂಡ ಸೇರಿದಂತೆ, ಬೆಂಗಳೂರಿನ ‘ದೀಪಾ ಅಕಾಡೆಮಿ’ ಮತ್ತು ‘ಸ್ನೇಹಜೀವಿ’ ಸಂಸ್ಥೆ, ರಂಗರಾವ್ ಸ್ಕೂಲ್ಸ್ ಮೈಸೂರು, ಆಶಾದೀಪ ತಂಡ ಮೈಸೂರು, ತಂಡಗಳು ಈ ಪ್ರತಿಷ್ಠಿತ ಕಪ್ಗಾಗಿ ಸೆಣಸಾಡಲಿವೆ ಎಂದು ಹೇಳಿದರು.
ದೃಷ್ಟಿ ವಿಶೇಷಚೇತನ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮತ್ತು ಅವರಲ್ಲಿ ಆತ್ಮಸ್ಥೈರ್ಯದ ಬೆಳಕು ಮೂಡಿಸುವುದು ಈ ಕ್ರೀಡಾಕೂಟದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ನಮಗೆ ಸಮಾಜದ ಅನುಕಂಪದ ನೋಟಕ್ಕಿಂತ, ಸಾಧನೆ ಮಾಡಲು ಸಮಾನ ಅವಕಾಶಗಳ ಬೆಂಬಲ ಅಗತ್ಯ ಎಂಬ ಸಂದೇಶವನ್ನು ಈ ಪಂದ್ಯಾವಳಿ ಸಾರಲಿದೆ ಎಂದು ಆರ್. ರಕ್ಷಿತಾ ತಿಳಿಸಿದರು.
ಕತ್ತಲ ಹಾದಿಯಲ್ಲೂ ಬೌಂಡರಿ ಬಾರಿಸುವ ಛಲ ಹೊಂದಿರುವ ಈ ಕ್ರೀಡಾಪಟುಗಳ ಕೌಶಲ್ಯ ಪ್ರದರ್ಶನಕ್ಕೆ ಜೆ.ಎಸ್.ಎಸ್ ವೈದ್ಯಕೀಯ ಕಾಲೇಜು ಮೈದಾನ ಸಾಕ್ಷಿಯಾಗಲಿದೆ. ಇದು ಕೇವಲ ಸೋಲು-ಗೆಲುವಿನಾಟವಲ್ಲ, ಇದು ಮಾನವೀಯತೆ ಮತ್ತು ಕ್ರೀಡಾ ಸ್ಫೂರ್ತಿಯ ಮಹಾಸಂಗಮ ಎಂದು ತಿಳಿಸಿದರು.
ವಿಶೇಷಚೇತನ ಕ್ರೀಡಾಪಟುಗಳ ಅಭ್ಯಾಸಕ್ಕಾಗಿ ಮತ್ತು ಅವರ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರವು ಪ್ರತ್ಯೇಕ ಆಟದ ಮೈದಾನಗಳನ್ನು ಕಾಯ್ದಿರಿಸಬೇಕು ಅಥವಾ ಈಗಿರುವ ಮೈದಾನಗಳಲ್ಲಿ ಅವರಿಗೆ ವಿಶೇಷ ಆದ್ಯತೆ ನೀಡಬೇಕು. ಈ ಮೂಲಕ ಅವರಲ್ಲಿರುವ ಪ್ರತಿಭೆ ಜಗತ್ತಿಗೆ ಪರಿಚಯವಾಗಲು ಸಾಧ್ಯ ಎಂದು ಒತ್ತಾಯಿಸಿದರು.
ಈ ವಿಶಿಷ್ಟ ಕ್ರೀಡಾ ಸಂಭ್ರಮಕ್ಕೆ ಮೈಸೂರಿನ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿಶೇಷಚೇತನ ಕ್ರೀಡಾಪಟುಗಳನ್ನು ಹುರಿದುಂಬಿಸಬೇಕೆಂದು ವಿನಂತಿಸಿದರು.
ಸಂಜೆ 4 ಗಂಟೆಗೆ ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ರಕ್ಷಿತಾ ತಿಳಿಸಿದರು.
ಸುದ್ದಿಗೋ಼ಷ್ಠಿಯಲ್ಲಿ ನಿರಾಮಯ ಫೌಂಡೇಶನ್ ಅಧ್ಯಕ್ಷರಾದ ಗುರುಪ್ರೀತ್ ಎಂ ಆರ್, ಅಂಧ ರಾಷ್ಟ್ರೀಯ ಆಟಗಾರರಾದ ನಿತಿನ್, ಸ್ವಚ್ಛಂದ ತಂಡದ ಸಂದೀಪ್ ಉಪಸ್ಥಿತರಿದ್ದರು.
