ರಾಯಚೂರು: ದೇಶದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಕಠಿಣ ಕಾಲದಲ್ಲೂ ದೃಢ ಸಂಕಲ್ಪದಿಂದ ದೇಶವನ್ನು ಕಟ್ಟಿದ ಹಾಗೂ ಸಮಾನತೆಯ ದಾರಿದೀಪವಾದ ಸಂವಿಧಾನವನ್ನು ತಂದುಕೊಟ್ಟ ಮಹತ್ತರ ಹಿರಿಮೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಸಚಿವ ಡಾ. ಯತೀಂದ್ರ ತಿಳಿಸಿದರು.
ರಾಯಚೂರಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಗೆ ಭೇಟಿ ನೀಡಿ, ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಹತ್ವದ ಸಭೆಯಲ್ಲಿ ಮಾತನಾಡಿದರು.
ಶತಮಾನಗಳಿಂದ ಸಮಾಜದಲ್ಲಿ ಬೇರೂರಿದ್ದ ಅಸಮಾನತೆಯ ವ್ಯವಸ್ಥೆಯನ್ನು ಸಂವಿಧಾನದ ಮೂಲಕ ಯಶಸ್ವಿಯಾಗಿ ಹೋಗಲಾಡಿಸಿದ ಹೆಮ್ಮೆ ಕಾಂಗ್ರೆಸ್ ಪಕ್ಷಕ್ಕಿದೆ. ಅಂತಹ ತತ್ವಾಧಾರಿತ ಪಕ್ಷದ ಕಾರ್ಯಕರ್ತರಾಗಿರುವುದಕ್ಕೆ ನಮಗೆಲ್ಲರಿಗೂ ಸದಾ ಹೆಮ್ಮೆ ಇದೆ ಎಂದು ತಿಳಿಸಿದರು.
ದೇಶವನ್ನು ಒಗ್ಗೂಡಿಸಲು ಹಾಗೂ ಸಾರ್ವಜನಿಕರ ಧ್ವನಿಯಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಐತಿಹಾಸಿಕ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿಯವರಂತಹ ದೂರದೃಷ್ಟಿಯುಳ್ಳ ನಾಯಕತ್ವ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ರಾಜ್ಯದಲ್ಲಿನ ಸರ್ಕಾರವು ಯುವಜನತೆಯಲ್ಲಿ ಹೊಸ ಚೈತನ್ಯ ಹಾಗೂ ಸಾಮಾಜಿಕ ಬದ್ಧತೆ ಮೂಡಿಸುವ ನಿಟ್ಟಿನಲ್ಲಿ ‘ಭಾರತ್ ಜೋಡೋ’ ಸಂಘಗಳನ್ನು ಸ್ಥಾಪಿಸಿ ಮುನ್ನಡೆಸುತ್ತಿದೆ ಎಂದು ಡಾ.ಯತೀಂದ್ರ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ್, ಮಾಜಿ ಸಚಿವರಾದ ಎನ್.ಎಸ್. ಬೋಸರಾಜು, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ್ ರಾಮಸ್ವಾಮಿ, ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಕೆ. ಶಾಂತಪ್ಪ, ಕೆಪಿಸಿಸಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಪಾಟೀಲ ಇಟಿಗಿ, ಮುಖಂಡರಾದ ಮೊಹಮ್ಮದ್ ಶಾಲಾನ್ ಮತ್ತಿತರರು ಉಪಸ್ಥಿತರಿದ್ದರು.
