ಬೆಂಗಳೂರು: ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿದ್ದ 2026ರ ಅವಳ ಹೆಜ್ಜೆ ಮಹಿಳಾ ಕನ್ನಡ ಕಿರುಚಿತ್ರೋತ್ಸವದಲ್ಲಿ ನಿರ್ದೇಶಕಿ ಸುಪ್ರಿಯಾ ಶಂಕರ ನಿಪ್ಪಾಣಿ ಅವರ ರೊಟ್ಟಿ ಚಿತ್ರ 1 ಲಕ್ಷ ರೂ ಬಹುಮಾನ ಗೆದ್ದುಕೊಂಡಿದೆ.
ಜತೆಗೆ ಅವಳ ಹೆಜ್ಜೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಸುಪ್ರಿಯಾ ಶಂಕರ ನಿಪ್ಪಾಣಿ ಅವರು ಚಲನಚಿತ್ರ ನಿರ್ದೇಶಕಿ, ಕಲಾವಿದೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ತಮ್ಮ ಪ್ರಶಸ್ತಿ ವಿಜೇತ ಕಿರುಚಿತ್ರಗಳಾದ ‘ಅಪ್ಪ ಬೆಳ್ಳಿ ಅಲ್ಲ’ ಮತ್ತು ‘ರಾಜಿ’ ಮೂಲಕ ಗುರುತಿಸಿಕೊಂಡಿದ್ದಾರೆ.
ವಿವಿಧ ಭಾಷೆಗಳಲ್ಲಿ ಸಹ-ನಿರ್ದೇಶಕಿಯಾಗಿ ವ್ಯಾಪಕ ಅನುಭವ ಹೊಂದಿರುವ ಅವರು, ತಮ್ಮದೇ ಬ್ಯಾನರ್ ಅಡಿಯಲ್ಲಿ ‘ಚುರುಮುರಿಯಾ’ ಎಂಬ ಕಲಾತ್ಮಕ ಪ್ರಭಾವಶಾಲಿ ಚಿತ್ರ ನಿರ್ಮಿಸಿದ್ದಾರೆ.
‘ಅವಳ ಹೆಜ್ಜೆ’ ಪ್ರಶಸ್ತಿಯ ಜೊತೆಗೆ, ವಿವಿಧ ವಿಶೇಷ ವಿಭಾಗಗಳಲ್ಲಿ ತಲಾ 10,000 ನಗದು ಬಹುಮಾನವನ್ನು ನಾಲ್ಕು ಕಿರುಚಿತ್ರಗಳಿಗೆ ನೀಡಲಾಯಿತು.
ಬೆಂಗಳೂರಿನ ಖ್ಯಾತ ಮಾಧ್ಯಮ ವೃತ್ತಿಪರರು, ಕಾಸ್ಟಿಂಗ್ ಡೈರೆಕ್ಟರ್ ಹಾಗೂ ಸ್ಕ್ರಿಪ್ಟ್ ಮೆಂಟರ್ ಆದ ಸುನಯನಾ ಸುರೇಶ್ ಅವರ ಚೊಚ್ಚಲ ನಿರ್ದೇಶನದ ‘ಮೌನ ರಾಗ’ ಚಿತ್ರಕ್ಕೆ ‘ಗೂಡಿನಿಂದ ಗಗನದೆಡೆಗೆ’ ವಿಶೇಷ ವಿಭಾಗದ ಬಹುಮಾನ ಮತ್ತು ಶ್ರೇಯಾ ಸುನಿಲ್ ಅವರ ‘ಆ ಮಾಡಿ’ ಚಿತ್ರಕ್ಕೆ ‘ಹಾಸ್ಯ ಮತ್ತು ವಿಡಂಬನೆ’ ವಿಭಾಗದ ನಗದು ಬಹುಮಾನ ನೀಡಲಾಯಿತು.
‘ಸಾಮಾಜಿಕ ಬದಲಾವಣೆಯ ಕಥಾವಸ್ತು’ ವಿಶೇಷ ವಿಭಾಗದಲ್ಲಿ, ಬಾಲ್ಯದ ಆಘಾತವನ್ನು ಮೆಟ್ಟಿ ನಿಲ್ಲುವ ಕಥಾಹಂದರ ಹೊಂದಿರುವ ವನು ಪಾಟೀಲ್ ಅವರ ‘ನಿತ್ಯ’ ಚಿತ್ರ ಮತ್ತು ಮಾನವ-ವನ್ಯಜೀವಿ ಸಹಬಾಳ್ವೆಯನ್ನು ಬಿಂಬಿಸುವ ಸೌರಭ್ ರಾವ್ ಅವರ ‘ಹುಲಿಯಪ್ಪ’ ಸಾಕ್ಷ್ಯಚಿತ್ರಕ್ಕೆ ನಗದು ಬಹುಮಾನ ನೀಡಲಾಯಿತು.
ಹುಲಿಯಪ್ಪ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿಯನ್ನು ವನ್ಯಜೀವಿಗಳ ರಕ್ಷಣೆ ಮತ್ತು ಪುನರ್ವಸತಿಗೆ ಮೀಸಲಾಗಿರುವ ಸಂಸ್ಥೆಯಾದ ‘ಏವಿಯನ್ ಮತ್ತು ರೆಪ್ಟೈಲ್ ಪುನರ್ವಸತಿ ಕೇಂದ್ರ’ ಪ್ರಾಯೋಜಿಸಿದೆ.
ಚಿತ್ರ ಪ್ರದರ್ಶನದ ನಂತರ, “ಸಿನೆಮಾದಲ್ಲಿ ಅವಳ ಹೆಜ್ಜೆ : ‘ಅ – ಅಃ’ ವರೆಗೆ” ಎಂಬ ವಿಷಯದ ಕುರಿತು ಗಂಭೀರ ಚರ್ಚಾಗೋಷ್ಠಿ ನಡೆಯಿತು.
ಚಿತ್ರೋತ್ಸವದ ನಿರ್ದೇಶಕಿ ಶಾಂತಲಾ ದಾಮ್ಲೆ ಅವರು ನಡೆಸಿಕೊಟ್ಟ ಈ ಗೋಷ್ಠಿಯಲ್ಲಿ ಖ್ಯಾತ ನಟಿಯರಾದ ನೀತು ಶೆಟ್ಟಿ (ಗಾಳಿಪಟ), ಗ್ರೀಷ್ಮಾ ಶ್ರೀಧರ್ (‘ನಾನು ಕುಸುಮ’), ಚಿತ್ರ ನಿರ್ದೇಶಕಿ ಸಂಜೋತಾ ಭಂಡಾರಿ (ಪೆನ್ ಟು ಪ್ರೀಮಿಯರ್ ಯೋಜನೆಯ ರೂವಾರಿ) ಮತ್ತು ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ ಸಂಗೀತಾ ನಂಜುಂಡಸ್ವಾಮಿ (‘ಬೆಳಗುತಿರಲಿ ಬೆಳ್ಳಿತೆರೆ’ ವೇದಿಕೆ) ಪಾಲ್ಗೊಂಡಿದ್ದರು.
ಕಳೆದ 15 ವರ್ಷಗಳಲ್ಲಿ ಉದ್ಯಮದಲ್ಲಿ ಮಹಿಳೆಯರ ಪಾತ್ರಗಳ ವಿಕಸನವನ್ನು ಚರ್ಚಿಸಿದ ಸದಸ್ಯರು, ಭವಿಷ್ಯದ ಬೆಳವಣಿಗೆಗೆ ಮಾರ್ಗದರ್ಶನ ಮತ್ತು ಮಹಿಳಾ ಒಗ್ಗಟ್ಟು ಪ್ರಮುಖವಾಗಿದೆ ಎಂದು ಒತ್ತಿ ಹೇಳಿದರು.
ತಮ್ಮ ಸ್ವಂತ ಅನುಭವಗಳನ್ನು ಆಧರಿಸಿ, ಅವರು ಆಕಾಂಕ್ಷಿ ವೃತ್ತಿಪರರಿಗೆ ತಾಳ್ಮೆ, ಶಿಸ್ತು ಮತ್ತು ಸಂಪೂರ್ಣ ದೃಢತೆಯಿಂದ ಉದ್ಯಮವನ್ನು ಪ್ರವೇಶಿಸಲು ಸಲಹೆ ನೀಡಿದರು.
ಚಿತ್ರೋತ್ಸವದ ಮೂಲ ಆಶಯದ ಕುರಿತು ಮಾತನಾಡಿದ ಗುಬ್ಬಿವಾಣಿ ಟ್ರಸ್ಟ್ನ ಸ್ಥಾಪಕ ಟ್ರಸ್ಟೀ ಮಾಲವಿಕ ಗುಬ್ಬಿವಾಣಿ ಅವರು, ಇದು ಕೇವಲ ಒಂದು ಕಿರುಚಿತ್ರೋತ್ಸವವಲ್ಲ, ಇದು ಮಹಿಳೆಯರ ಅನುಭವಗಳು ಮತ್ತು ದೃಷ್ಟಿಕೋನಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಹಾಗೂ ಲಿಂಗ ಸಮಾನತೆಯನ್ನು ಉತ್ತೇಜಿಸುವ ಒಂದು ಚಳವಳಿಯಾಗಿದೆ. ಈ ಕಾರ್ಯಕ್ರಮದ ಯಶಸ್ಸಿನ ಆಧಾರದ ಮೇಲೆ, ನಮಗೆ ಮರುಪ್ರದರ್ಶನಕ್ಕಾಗಿ ವಿನಂತಿಗಳು ಬರುತ್ತಿವೆ. ಎಂದು ತಿಳಿಸಿದರು.
