ಮೈಸೂರು: ಕೆ ಆರ್ ಮೊಹಲ್ಲಾ ತೊಗರಿ ಬೀದಿಯಲ್ಲಿ ಪಂಚಮುಖಿ ವಿನಾಯಕ ಯುವಕರ ಬಳಗದ ಯುವಕರು ಮುಸಲ್ಮಾನ್ ಸ್ನೇಹಿತರ ಜೊತೆಗೂಡಿ ಗಣೇಶ ಹಬ್ಬ ಆಚರಿಸಿ ಮಾಧರಿಯಾಗಿದ್ದಾರೆ.
ಹಿಂದೂ ಮುಸಲ್ಮಾರು ಒಟ್ಟಾಗಿ ಸೇರಿ ವಿಘ್ನ ವಿನಾಶಕನಿಗೆ ಒಟ್ಟಾಗಿ ಪೂಜೆ ಸಲ್ಲಿಸಿದರಲ್ಲದೆ, ಪ್ರಸಾದ ಹಾಗೂ ನೈವೇದ್ಯವನ್ನು ಪರಸ್ಪರ ತಿನ್ನಿಸಿ ಖುಷಿಪಟ್ಟರು.
ಪರಸ್ಪರ ಗಣೇಶ ಹಾಗೂ ಮೊಹರಂ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಹಿಂದೂ ಮುಸ್ಲಿಂ ಭಾಯಿ,ಭಾಯಿ ಎಂಬ ಸಂದೇಶವನ್ನು ರವಾನಿಸಿದರು.

ಈ ವೇಳೆ ಮಾತನಾಡಿದ ಪಂಚಮುಖಿ ವಿನಾಯಕ ಯುವಕರ ಬಳಗದ
ಅಧ್ಯಕ್ಷ ರವಿನಂದನ್, ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ ಎಂದು ಹೇಳಿದರು.
ಆದರೆ ಕೆಲವು ಕಿಡಿಗೇಡಿಗಳಿಂದ ಎರಡೂ ಸಮಾಜದಲ್ಲಿ ಶಾಂತಿ ಕದಡುವ ಯತ್ನಗಳು ನಡೆಯುತ್ತಿದೆ,ಆದ್ದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಒಟ್ಟಾಗಿ ಸೇರಿ ಆಚರಣೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ನಮ್ಮ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಸೌಹಾರ್ದತೆಯ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದು ರವಿನಂದನ್ ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಮುಸಲ್ಮಾನ್ ಬಾಂಧವರಾದ ಗುಲ್ಸಿಯನ್ ಪಾಷಾ, ಅಮೀನ್, ಕೊಹಿಲ್, ಅಹಮದ್ ಜೂನಿಯರ್, ಮುಶೀರ್,ಸಲ್ಮಾನ್ ಪಾಷಾ, ಸಮೀರ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ಜಿ ರಾಘವೇಂದ್ರ,ಶ್ರೀ ಪಂಚಮುಖಿ ವಿನಾಯಕ ಯುವಕರ ಬಳಗದ ರವಿತೇಜ, ಗಿರೀಶ್, ಹರ್ಷ, ಸುಭಾಷ್, ಉಮೇಶ್ ಮತ್ತು ಇನ್ನಿತರ ಯುವಕ ಮಿತ್ರರು ಹಾಜರಿದ್ದರು.