ಬೆಂಗಳೂರು: ದೇವನಹಳ್ಳಿ ಚಲೋ ಪ್ರತಿಭಟನೆ ವೇಳೆ ರೈತರನ್ನು ಏಕಾಏಕಿ ಬಂಧಿಸಿರುವ ಪೊಲೀಸರ ಕ್ರಮ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಅಮಾನವೀಯ ನಡೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ನಾಡಿನ ಎಲ್ಲ ಜನತೆ ಖಂಡಿಸಬೇಕಾಗುತ್ತದೆ ಎಂದು ಹೇಳಿದರು.
ದೇವನಹಳ್ಳಿಯಲ್ಲಿ ಸಾವಿರಾರು ರೈತರು ತಮ್ಮ ವಂಶಾನುಗತ ಕೃಷಿ ಭೂಮಿ ಹಕ್ಕಿಗಾಗಿ ಸಾವಿರ ದಿವಸಗಳಿಂದ ಹೋರಾಟ ನಡೆಸುತ್ತಿದ್ದಾರೆ. ಮಹಿಳೆಯರು ವೃದ್ಧರು ಎಂಬುದನ್ನು ಸಹ ಪರಿಗಣಿಸದೆ ಪೊಲೀಸರು ಬಂಧನದ ವೇಳೆಯಲ್ಲಿ ನಡೆಸಿದ ದೌರ್ಜನ್ಯ ಯಾವುದೇ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಚಂದ್ರು ಕಿಡಿಕಾರಿದರು.
ಈ ಹಿಂದೆ ಯಡಿಯೂರಪ್ಪನವರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಸಿದ್ದರಾಮಯ್ಯನವರಿಗೊ ಸಹ ರಾಜ್ಯದ ಜನ ತಕ್ಕಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ. ಈ ಘಟನೆಗೆ ಸರ್ಕಾರ ಉತ್ತರದಾಯಿತ್ವವಾಗಿರುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಎಲ್ಲ ರೈತಾಪಿ ವರ್ಗಗಳ ಮೇಲೆ ಈ ರೀತಿಯ ದೌರ್ಜನ್ಯವನ್ನು ಪಕ್ಷವು ಖಂಡಿಸುತ್ತದೆ ಮತ್ತು ಅವರ ಹೋರಾಟದಲ್ಲಿ ಸದಾಕಾಲ ನಿಲ್ಲುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಭರವಸೆ ನೀಡಿದರು.