ನಟಿ ಸೌಂದರ್ಯ ಸಾವು ಆಕಸ್ಮಿಕವಲ್ಲ! ನಟ ಮೋಹನ್ ಬಾಬು ವಿರುದ್ಧ ದೂರು

Spread the love

ಬೆಂಗಳೂರು,ಮಾ.12: ಕನ್ನಡದ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿ ಎರಡು ದಶಕಗಳು ಕಳೆದಿವೆ. ಆದರೆ, ಇದೀಗ ಹಿರಿಯ ತೆಲುಗು ನಟ ಮೋಹನ್ ಬಾಬು ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ಈ ಸಂಬಂಧ ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದು, ನಟಿಯ ಅಕಾಲಿಕ ಸಾವು ಆಕಸ್ಮಿಕವಲ್ಲ, ಬದಲಾಗಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಡಿರುವ ಕೊಲೆ ಎಂದು ದೂರು ನೀಡಲಾಗಿದೆ.

ಶಂಶಾಬಾದ್‌ನ ಹಳ್ಳಿಯೊಂದರಲ್ಲಿದ್ದ ಆರು ಎಕರೆ ಜಮೀನನ್ನು ಮಾರಾಟ ಮಾಡುವಂತೆ ಸೌಂದರ್ಯ ಮತ್ತು ಅವರ ಸಹೋದರನ ಮೇಲೆ ಮೋಹನ್ ಬಾಬು ಒತ್ತಡ ಹೇರಿದ್ದರು. ಆದರೆ, ಅವರು ಇದಕ್ಕೆ ನಿರಾಕರಿಸಿದ್ದರು. ಇದರಿಂದ ಇಬ್ಬರ ನಡುವೆ ಸಂಘರ್ಷ ಉಂಟಾಗಿತ್ತು. ಸೌಂದರ್ಯ ಅವರ ಮರಣದ ನಂತರ, ಮೋಹನ್ ಬಾಬು ಅವರು ಬಲವಂತವಾಗಿ ಆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ದೂರುದಾರ ಚಿಟ್ಟಿಮಲ್ಲು ಎಂಬವರು ಆರೋಪಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ದೂರುದಾರರು ಈ ಇಬ್ಬರು ನಟರೊಂದಿಗೆ ಹೇಗೆ ಸಂಬಂಧ ಎಂಬುದು ಕೂಡಾ ತಿಳಿದುಬಂದಿಲ್ಲ.

ಕನ್ನಡದ ಪ್ರಸಿದ್ದ ನಟಿ ಸೌಂದರ್ಯ, 1999ರಲ್ಲಿ ಬಾಲಿವುಡ್ ‌ಬಾದ್ ಶಾ ಅಮಿತಾಬ್ ಬಚ್ಚನ್ ಅಭಿನಯದ ‘ಸೂರ್ಯವಂಶಂ’ ಚಿತ್ರದಲ್ಲಿ ರಾಧಾ ಪಾತ್ರವನ್ನು ನಿರ್ವಹಿಸಿದ್ದರು.

ಅವರು ಮತ್ತು ಅವರ ಸಹೋದರ ಏಪ್ರಿಲ್ 17 ರಂದು ರಾಜಕೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೀಂನಗರಕ್ಕೆ ಹೋಗುತ್ತಿದ್ದಾಗ ಅವರ ಖಾಸಗಿ ಜೆಟ್ ಅಪಘಾತಕ್ಕೀಡಾಗಿ ನಿಧನರಾಗಿದ್ದರು. ಅವರಿಗೆ ಆಗ 31 ವರ್ಷ ವಯಸ್ಸಾಗಿತ್ತು, ಸಮಯದಲ್ಲಿ ಅವರು ಗರ್ಭಿಣಿಯಾಗಿದ್ದರು. ಅಪಘಾತದ ಸ್ಥಳದಿಂದ ಅವರ ದೇಹವನ್ನು ಪಡೆಯಲು ಸಾಧ್ಯವಾಗಿರಲಿಲ್ಲ.

ಭೂಕಬಳಿಕೆಯಲ್ಲಿ ಮೋಹನ್ ಬಾಬು ಪಾತ್ರದ ಬಗ್ಗೆ ಹೊಸದಾಗಿ ತನಿಖೆ ನಡೆಸಬೇಕು ಹಾಗೂ ಅವರಿಂದ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ದೂರುದಾರ ಚಿಟ್ಟಿಮಲ್ಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಖಮ್ಮಂ ಸಹಾಯಕ ಪೊಲೀಸ್ ಆಯುಕ್ತ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ತಮ್ಮ ಜೀವಕ್ಕೆ ಬೆದರಿಕೆ ಇದೆ ತಮಗೆ ಪೊಲೀಸ್ ರಕ್ಷಣೆ ಬೇಕೆಂದು ಅವರು ಮನವಿ ಮಾಡಿದ್ದಾರೆ.