ಮೈಸೂರು: ಭಾರತ ದೇಶ ಜಗತ್ತಿಗೆ ಕೊಟ್ಟತಂಹ ಕೊಡಗೆಗಳಲ್ಲಿ ಯೋಗವೂ ಒಂದು ಎಂದು ಸುತ್ತೂರು ಮಠಾದೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದ್ದಾರೆ.
ನಮ್ಮ ದೇಶದಲ್ಲಿ ಗುರುಪರಂಪರೆಯಿಂದ ಬಂದಂತಹ ಅಷ್ಟಾಂಗ ಯೋಗ, ಪ್ರಾಣಯಾಮ, ಸಂಗೀತ, ಕಲೆ ಇವುಗಳು ವೈಜ್ಞಾನಿಕ ಹಿನ್ನೆಲೆಯಿಂದ ರೂಪಿತವಾಗಿದೆ ಎಂಬುದು ಎಲ್ಲರೂ ಹೆಮ್ಮೆ ಪಡುವಂತಹದ್ದು ಎಂದು ಹೇಳಿದರು.
ವೈಜ್ಞಾನಿಕ ಪ್ರಾಣಾಯಾಮ ಫೌಂಡೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ 2 ದಿನಗಳ ವೈಜ್ಞಾನಿಕ ಪ್ರಾಣಾಯಾಮ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು.
ಅಷ್ಟಾಂಗ ಯೋಗದಲ್ಲಿ ಪ್ರಾಣಯಾಮ ಪ್ರಮುಖವಾದದ್ದು. ನಿರಂತರ ಪ್ರಾಣಾಯಾಮ ಅಭ್ಯಾಸದಿಂದ ಮನಸ್ಸನ್ನು ಹತೋಟಿಗೆ ತರಲು ಸಾಧ್ಯ ಹಾಗೂ ರೋಗ ಮುಕ್ತ ಜೀವನ ನಡೆಸಲು ವೈಜ್ಞಾನಿಕ ಪ್ರಾಣಾಯಾಮ ಇಂದಿನ ಜೀವನದಲ್ಲಿ ಅತ್ಯಗತ್ಯ ಎಂದು ಸ್ವಾಮೀಜಿ ತಿಳಿಸಿದರು.
ಭಾರತದ ಪ್ರಾಚೀನ ಯೋಗ ಮತ್ತು ಪ್ರಾಣಾಯಾಮ ವಿದ್ಯೆಯನ್ನು ಆಧುನಿಕ ವೈಜ್ಞಾನಿಕ ಸಂಶೋಧನೆಗಳೊಂದಿಗೆ ಸಂಯೋಜಿಸುವುದು ಇಂದಿನ ಅಗತ್ಯವಾಗಿದೆ ಎಂದು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ
ಅಭಿಪ್ರಾಯಪಟ್ಟರು.
ಇದೇ ವೇಳೆ ಡಾ. ದೇವಕಿ ಮಾಧವ್ ಅವರ ಸಮಾಜಮುಖಿ ಸೇವೆ ಹಾಗೂ ದೃಢ ಸಂಕಲ್ಪವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ಲಾಘಿಸಿದರು.
ಯೋಗ-ಪ್ರಾಣಾಯಾಮವನ್ನು ಸರಳೀಕರಿಸಿ ವೈಜ್ಞಾನಿಕ ವಿಧಾನದ ಮೂಲಕ ಜನಸಾಮಾನ್ಯರಿಗೆ ತಲುಪಿಸುತ್ತಿರುವ ಅವರ ಕಾರ್ಯ ಮಾನವ ಕಲ್ಯಾಣಕ್ಕೆ ದೊಡ್ಡ ಕೊಡುಗೆ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ರಾಜಶೇಖರ ಪೋರೆಡ್ಡಿ ಅವರು ಮಾತನಾಡಿ, ಸಮ್ಮೇಳನದಲ್ಲಿ ನಡೆದ ವೈಜ್ಞಾನಿಕ ಚರ್ಚೆಗಳ ಆಳ ಮತ್ತು ವಿವಿಧ ಕ್ಷೇತ್ರಗಳ ತಜ್ಞರ ಭಾಗವಹಿಸುವಿಕೆ ಸ್ತುತ್ಯರ್ಹ ಎಂದು ಪ್ರಶಂಸಿಸಿದರು.
ಕೈವಲ್ಯಧಾಮ ಸಂಸ್ಥೆಯ ಶರಶ್ಚಂದ್ರ ಬಾಳೇಕರ್ ಹಾಗೂ ಡಾ. ಪ್ರಹ್ಲಾದ್ ರಾವ್ ಗೌರವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಶೋಧನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ವಿಭಾಗಗಳಲ್ಲಿ ನಗದು ಬಹುಮಾನಗಳನ್ನು ವಿತರಿಸಲಾಯಿತು.
ಕಳೆದ ಒಂದು ದಶಕದಿಂದ ವೈಜ್ಞಾನಿಕ ಪ್ರಾಣಾಯಾಮದ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಸೀತಾ ರಮೇಶ್ ಅವರಿಗೆ ‘ಸೇವಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
