ಬೆಂಗಳೂರು: ಕರ್ನಾಟಕದ ನೀರಿನ ಹಕ್ಕಿಗಾಗಿ ಹೋರಾಡುತ್ತಿದ್ದೇನೆ ಎಂದು ಪಾದಯಾತ್ರೆಯ ಬೀದಿನಾಟಕ ನಡೆಸಿದ ಡಿ.ಕೆ.ಶಿವಕುಮಾರ್ ಅವರು ಇಂದು ಎಲ್ಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ
ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಮೇಕೆದಾಟು ಯೋಜನೆ ವಿರುದ್ಧ ನಿರ್ಣಯ ಅಂಗೀಕರಿಸುತ್ತಿದೆ,ಅಲ್ಲಿನ ಕಾಂಗ್ರೆಸ್ ನಾಯಕರು ಕೂಡ ಕರ್ನಾಟಕದ ಹಕ್ಕಿನ ವಿರುದ್ಧ ನಿಂತಿದ್ದಾರೆ,ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ ಬಾಯಿ ಮುಚ್ಚಿಕೊಂಡು ಕುಳಿತಿದೆ ಎಂದು ಅಶೋಕ್ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ ಅವರೇ,
ಅಂದು ನೀವು ನಡೆಸಿದ್ದು ಮೇಕೆದಾಟು ಪಾದಯಾತ್ರೆಯೋ ಅಥವಾ ಮುಖ್ಯಮಂತ್ರಿ ಕುರ್ಚಿಗಾಗಿ ಪಾದಯಾತ್ರೆಯೋ ಎಂದು ಪ್ರಶ್ನಿಸಿರುವ ಅವರು,ಅಂದು ಮೇಕೆದಾಟು ಹೆಸರಲ್ಲಿ ರಾಜಕೀಯ ಮೈಲೇಜ್ ಪಡೆದುಕೊಂಡಿರಿ,ಇಂದು ನಿಮ್ಮದೇ ಪಕ್ಷದವರು ಕರ್ನಾಟಕದ ಹಕ್ಕಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದರೂ ಒಂದು ಮಾತು ಮಾತನಾಡುವ ಧೈರ್ಯ ಇಲ್ಲವಲ್ಲಾ,ಇದೇನಾ ನಿಮ್ಮ ಕನ್ನಡ ಪ್ರೇಮ,ಇದೇನಾ ನಿಮ್ಮ ನೀರಿನ ಹೋರಾಟ,ಇದೇನಾ ನಿಮ್ಮ ನಾಯಕತ್ವ ಎಂದು ಖಾರವಾಗಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ರಾಹುಲ್ ಗಾಂಧಿ ಅವರೇ,
ಒಂದು ರಾಜ್ಯದಲ್ಲಿ ಮೇಕೆದಾಟು ಪರ,
ಇನ್ನೊಂದು ರಾಜ್ಯದಲ್ಲಿ ಮೇಕೆದಾಟು ವಿರೋಧ.ಅಸಲಿಗೆ ಕಾಂಗ್ರೆಸ್ ಪಕ್ಷದ ನಿಲುವು ಯಾವುದು,ಕರ್ನಾಟಕದ ಜನರ ಜೊತೆಯೇ? ಅಥವಾ ತಮಿಳುನಾಡಿನ ಮೈತ್ರಿ ರಾಜಕಾರಣದ ಜೊತೆಗೊ ಎಂದು ವ್ಯಂಗ್ಯವಾಡಿದ್ದಾರೆ.
ನಿಮ್ಮ ಮೈತ್ರಿಕೂಟದ ರಾಜಕೀಯಕ್ಕಾಗಿ ಕರ್ನಾಟಕವನ್ನು ಮತ್ತೆ ಬಲಿಕೊಡಲು ಹೊರಟಿದ್ದೀರಾ,ಕಾಂಗ್ರೆಸ್ಗೆ ಮೇಕೆದಾಟು ಎಂದರೆ ಚುನಾವಣೆ ಬಂದಾಗ ಮಾತ್ರ ನೆನಪಾಗುವ ಘೋಷಣೆ.
ಅಧಿಕಾರ ಬಂದ ಮೇಲೆ ಕರ್ನಾಟಕದ ಹಕ್ಕು, ರೈತರ ಭಾವನೆ, ಕುಡಿಯುವ ನೀರಿನ ಭದ್ರತೆ ಎಲ್ಲವೂ ಮರೆತುಹೋಗುತ್ತದೆ.ಅಂದು ಪಾದಯಾತ್ರೆ,ಇಂದು ಮೌನಯಾತ್ರೆ.
ಅಂದು ಕನ್ನಡಿಗರ ಹೆಸರಿನಲ್ಲಿ ರಾಜಕೀಯ.
ಇಂದು ಹೈಕಮಾಂಡ್ ಮುಂದೆ ಶರಣಾಗತಿ ಎಂದು ಪ್ರಾಸಬದ್ದವಾಗಿ ಟೀಕಿಸಿದ್ದಾರೆ
ಕರ್ನಾಟಕದ ಜನರು ಕೇಳುತ್ತಿದ್ದಾರೆ
ಮೇಕೆದಾಟು ಉಳಿಸೋದು ಮುಖ್ಯವೋ, ಮೈತ್ರಿ ಉಳಿಸೋದು ಮುಖ್ಯವೋ ಅಂತಾ ನೀವು ಉತ್ತರಿಸಲೇಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.
