ಮೈಸೂರು: ಶೋಷಿತ ದಲಿತ ಹಾಗೂ ಹಿಂದುಳಿದ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ನಿಜವಾದ ಸಮಾನತೆ ಸಾಧ್ಯ ಎಂದು ಸಚಿವ ಡಾ.ಯತೀಂದ್ರ ತಿಳಿಸಿದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಬಾಬು ಜಗಜೀವನ್ ರಾಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ
ಪರಿಶಿಷ್ಟ ಜಾತಿ ಭೋವಿ ಜನಾಂಗದ ನಿರುದ್ಯೋಗ ಯುವತಿಯರಿಗೆ ಉಚಿತ ಟೈಲರಿಂಗ್ ಯಂತ್ರೋಪಕರಣ ಮತ್ತು ತರಬೇತಿ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲೇ ಬೋವಿ ಮತ್ತಿತರ ಶೋಷಿತ ಸಮುದಾಯಗಳನ್ನು ಗುರುತಿಸಿ, ಕೆಆರ್ಎಸ್ ಅಣೆಕಟ್ಟು ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಅವಕಾಶ ನೀಡಿ ಅವರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಪ್ರಕ್ರಿಯೆಗೆ ನಾಂದಿ ಹಾಡಲಾಗಿತ್ತು ಎಂದು ಹೇಳಿದರು.
ಸಮಾಜದಲ್ಲಿ ಹುಟ್ಟಿನಿಂದಲೇ ವೃತ್ತಿ ಮತ್ತು ಸ್ಥಾನಮಾನಗಳನ್ನು ನಿರ್ಧರಿಸುವ ದೋಷಪೂರಿತ ಜಾತಿ ವ್ಯವಸ್ಥೆ ಇದೆ. ಇದರಿಂದಾಗಿ ಶ್ರಮಿಕರು ಮತ್ತು ದಲಿತರು ಶತಮಾನಗಳಿಂದ ವಿದ್ಯೆ, ಅಧಿಕಾರ ಹಾಗೂ ಸಂಪತ್ತಿನಿಂದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಲು ಸಂವಿಧಾನದ ಮೂಲಕ ಮೀಸಲಾತಿ ಹಾಗೂ ವಿಶೇಷ ಕಾನೂನುಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಶೇ. 24.10ರಷ್ಟು ಅನುದಾನವನ್ನು ಕಡ್ಡಾಯಗೊಳಿಸಿ ಕಾನೂನು ತರಲಾಗಿದೆ. ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ 1 ಕೋಟಿ ರೂ.ವರೆಗಿನ ಕಾಮಗಾರಿಗಳಲ್ಲಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಲಾಗಿದೆ.ಕೇವಲ ಮೀಸಲಾತಿ ಅಥವಾ ಸರ್ಕಾರದ ಸೌಲಭ್ಯಗಳಷ್ಟೇ ಸಾಲದು. ಮಹಿಳೆಯರು ಮತ್ತು ಯುವಕರು ಸ್ವಯಂ ಉದ್ಯೋಗ, ಸಣ್ಣ ಪ್ರಮಾಣದ ಜವಳಿ ಉದ್ಯಮ, ಹೈನುಗಾರಿಕೆ ಹಾಗೂ ಉದ್ಯಮಶೀಲತೆಯತ್ತ ಗಮನಹರಿಸಿ ಸ್ವಾವಲಂಬಿಗಳಾಗಬೇಕು ಎಂದು ಡಾ.ಯತೀಂದ್ರ ಕರೆ ನೀಡಿದರು.
ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ ಅವರು ಮಾತನಾಡಿ,ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2016-17ರಲ್ಲಿ ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರು. ಪ್ರತಿಯೊಂದು ಸಮಾಜದ ಕಷ್ಟ-ಸುಖಗಳನ್ನು ಅರಿತು, ಎಲ್ಲರಿಗೂ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ಈ ನಿಗಮವನ್ನು ರೂಪಿಸಿದ ಏಕೈಕ ನಾಯಕ ಎಂದು ಬಣ್ಣಿಸಿದರು.
ಮೈಸೂರು ಮತ್ತು ಚಾಮರಾಜ ಕ್ಷೇತ್ರದಲ್ಲಿರುವ ಭೋವಿ ಸಮುದಾಯದ ಜನರಿಗೆ ದ್ವಿಚಕ್ರ ವಾಹನಗಳು, ಕಾರುಗಳು ಮತ್ತು ಆಟೋಗಳನ್ನು ಓಡಿಸಲು ಅಗತ್ಯ ಸಾಲ ಮತ್ತು ತರಬೇತಿ ವ್ಯವಸ್ಥೆ ಮಾಡಲಾಗುತ್ತಿದೆ.ಮೇಸ್ತ್ರಿ ಮತ್ತು ಕಾಂಟ್ರಾಕ್ಟ್ ಕೆಲಸ ಮಾಡುವವರಿಗೆ ಉಚಿತವಾಗಿ ಉಪಕರಣಗಳು ಮತ್ತು ಸೆಂಟ್ರಿಂಗ್ ಸಾಮಗ್ರಿಗಳ ಟೂಲ್ ಕಿಟ್ಗಳನ್ನು ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಸುಮಾರು 150 ಅರ್ಹ ಫಲಾನುಭವಿ ಮಹಿಳೆಯರಿಗೆ ಪ್ರತಿಯೊಂದಕ್ಕೂ 15,000 ಮೌಲ್ಯದ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ ಅವರು ಮಾತನಾಡಿ ಕಲ್ಲು ಕುಟ್ಟುವ ಕಾಯಕ ಅತ್ಯಂತ ಕಠಿಣವಾದದ್ದು. ಇಂತಹ ಕಠಿಣ ಸವಾಲುಗಳನ್ನು ಎದುರಿಸಿ ಸಮಾಜಕ್ಕೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸುವ ಪ್ರತಿಯೊಬ್ಬ ಕಾಯಕಯೋಗಿಯ ಕೊಡುಗೆ ಶ್ಲಾಘನೀಯ ಎಂದು ಹೇಳಿದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ ಎಂ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ನೀಡಿದ 5 ಪ್ರಮುಖ ಗ್ಯಾರಂಟಿ ಯೋಜನೆಗಳ ಜೊತೆಗೆ, ಭೋವಿ ಅಭಿವೃದ್ಧಿ ನಿಗಮದ ವತಿಯಿಂದ 6 ಪ್ರಮುಖ ಕಲ್ಯಾಣ ಯೋಜನೆಗಳನ್ನು ಸೇರಿಸಿ ಒಟ್ಟು 11 ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎನ್ ರಂಗಸ್ವಾಮಿ, ಕರ್ನಾಟಕ ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಚಂದ್ರನಾಯಕ್ ಯು , ಕಾಡ ಅಧ್ಯಕ್ಷರಾದ ಮುನಿಸ್ವಾಮಿ, ಕರ್ನಾಟಕ ಭೂಮಿ ನಿಗಮದ ಮಾಜಿ ಅಧ್ಯಕ್ಷರಾದ ಸೀತಾರಾಮ್, ಬೋವಿ ನಿಗಮದ ಜಿಲ್ಲಾಧ್ಯಕ್ಷರಾದ ಜಯಕುಮಾರ್ ಹಾಗೂ ಮಾಜಿ ಅಧ್ಯಕ್ಷರಾದ ನಾಗರಾಜು, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
