ಮೈಸೂರು: ವಿಪ್ರ ಸಮಾಜದ ಶಕ್ತಿಯನ್ನು ಗುರುತಿಸಿ, ತ್ರಿಮತಸ್ಥರು ಎಂಬ ಭಿನ್ನತೆಯನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಮುನ್ನಡೆದರೆ ಸಮುದಾಯ ಬಹಳ ಬಲಿಷ್ಠವಾಗಲಿದೆ ಎಂದು ವಿಪ್ರ ಪ್ರೊಫೆಷನಲ್ ಫೋರಂ(ವಿಪಿಎಫ್)ನ ಹಿರಿಯರು ಮತ್ತು ನೂತನ ಪದಾಧಿಕಾರಿಗಳು ತಿಳಿಸಿದರು.
ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ವಿಪಿಎಫ್ನ ಹತ್ತು ವರ್ಷಗಳ ಪಯಣ ಹಾಗೂ 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಸಾಧಕರಿಗೆ ‘ವಿಪ್ರರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಶಿಕ್ಷಣ – ಅನುಪಮಾ ಬಿ. ಪಂಡಿತ್, ಧಾರ್ಮಿಕ – ವೇದಬ್ರಹ್ಮ ಡಾ.ಎನ್. ಶಶಿಶೇಖರ ದೀಕ್ಷಿತ್, ಸಿನಿಮಾ – ವಸಿಷ್ಠ ಸಿಂಹ, ಸಂಗೀತ – ವಿದ್ವಾನ್ ಆರ್.ಎಸ್. ನಂದಕುಮಾರ್, ಮಾಧ್ಯಮ – ಕುಂದೂರು ಉಮೇಶ್ ಭಟ್, ಅಡುಗೆ – ನಾರಾಯಣ ಕೆ.ಭಟ್, ಗಾಯನ – ನಿತಿನ್ ರಾಜಾರಾಮ್ ಶಾಸ್ತ್ರಿ, ಆಧ್ಯಾತ್ಮಿಕ – ಪಂಡಿತ್ ಅನಿರುದ್ದಾಚಾರ್ಯ ಪಾಂಡುರಂಗಿ, ಗುರುಕುಲ – ಡಾ. ಕೆ.ಎಲ್. ಶಂಕರ ನಾರಾಯಣ ಜೋಯಿಸ್, ಭರತನಾಟ್ಯ – ವಿದುಷಿ ಡಾ. ಕೃಪಾ ಫಡ್ಕೆ, ವೈದ್ಯಕೀಯ – ಡಾ. ಎನ್. ಚಂದ್ರಶೇಖರ್, ಉದ್ಯಮ – ತ್ರಿವಿಕ್ರಮ್ ನಾಗೇಶ್, ಇತಿಹಾಸ – ಡಾ. ಶೆಲ್ವಪಿಳ್ಳೈ ಅಯ್ಯಂಗಾರ್, ಸಮುದಾಯ- ಎಚ್. ರಾಮಚಂದ್ರ, ನೈಸರ್ಗಿಕ ಕೃಷಿ – ಎ.ಪಿ. ಚಂದ್ರಶೇಖರ ಅವರು ಪ್ರಶಸ್ತಿಗೆ ಭಾಜನರಾದರು.
ನಿಕಟಪೂರ್ವ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್ ಅವರು ನೂತನ ಅಧ್ಯಕ್ಷ ಡಾ. ಎಸ್. ಮುರುಳಿ ಅವರಿಗೆ ದಂಡ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಉಪಾಧ್ಯಕ್ಷರಾಗಿ ಎ. ಸುಧೀಂದ್ರ, ಕೆ.ಆರ್. ಸತ್ಯನಾರಾಯಣ, ಕೆ.ಆರ್. ಪ್ರಭಾಕರ ರಾವ್, ಕಾರ್ಯದರ್ಶಿ ಆರ್. ಮಂಜುನಾಥ್ ಶ್ರೀವತ್ಸ, ಖಜಾಂಚಿ ಸಿ ಎ ಎಸ್. ಅಚ್ಯುತ, ಜಂಟಿ ಕಾರ್ಯದರ್ಶಿ ಎಸ್. ಶ್ರೀನಾಥ್ ಹಾಗೂ 18 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್,ವಿಪ್ರ ಎಂದರೆ ಒಂದು ಗುರುತಲ್ಲ, ಒಂದು ಶಕ್ತಿ. ನಾವು ವಿಪ್ರರು, ಹಿಂದೂಗಳು, ಭಾರತೀಯರು ಎಂಬ ಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ಹೇಳಿದರು.
ನಟ ವಸಿಷ್ಠ ಸಿಂಹ ಮಾತನಾಡಿ, ಶಂಕರ, ರಾಮಾನುಜ ಮತ್ತು ಮಧ್ವರ ಪರಂಪರೆಗಳು ಭಿನ್ನವಾಗಿದ್ದರೂ ಸನಾತನ ಧರ್ಮದ ಸಂರಕ್ಷಣೆಯ ಉದ್ದೇಶ ಒಂದೇ. ಒಗ್ಗಟ್ಟಿನಲ್ಲಿ ನಮ್ಮ ಭವಿಷ್ಯವಿದೆ ಎಂದು ನುಡಿದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ ಸಮುದಾಯದ ಉದ್ಯಮಿಗಳು, ವೃತ್ತಿಪರರು ಪರಸ್ಪರ ಆದ್ಯತೆ ನೀಡಬೇಕು. ಶಿಕ್ಷಣ, ಉದ್ಯೋಗ, ಉದ್ಯಮದಲ್ಲಿ ವಿಪಿಎಫ್ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ಡಾ. ಎಸ್. ಮುರುಳಿ ಮಾತನಾಡಿ, ನಗರದಲ್ಲಿ 65ಕ್ಕೂ ಹೆಚ್ಚು ವಿಪ್ರ ಸಂಘಟನೆಗಳಿವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಕಳೆದ 10 ವರ್ಷದಲ್ಲಿ ಅರ್ಚಕರ ಕುಟುಂಬಗಳಿಗೆ 17 ಲಕ್ಷ ರೂ ನೆರವು ನೀಡಲಾಗಿದೆ. ಮುಂದೆ ಉದ್ಯೋಗ, ಶಿಕ್ಷಣ, ವೃತ್ತಿ ಮಾರ್ಗದರ್ಶನ ಸೇವೆಗಳನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಲಾದ ದತ್ತ ವಿಜಯಾನಂದ ಶ್ರೀಗಳು ಆಶೀರ್ವಚನ ನೀಡಿ, “ವಿಪ್ರರು ಧರ್ಮಾನುಷ್ಠಾನ, ಸಂಘಟನೆ ಮತ್ತು ಸೇವೆಯಿಂದ ಶಕ್ತರಾಗಬೇಕು. ಸಂಕಷ್ಟದಲ್ಲಿರುವವರಿಗೆ ಕಾದು ಕುಳಿತುಕೊಳ್ಳದೆ ನೆರವು ನೀಡಬೇಕು ಎಂದು ಸಲಹೆ ನೀಡಿದರು.
