ಮೈಸೂರು: ಅಂದು ಗೋಡ್ಸೆಯಿಂದ ಗಾಂಧಿಯನ್ನ ಹತ್ಯೆ ಮಾಡಲಾಯಿತು,ಇಂದು ಬಿಜೆಪಿಯವರು ಗಾಂಧಿಯ ಸಿದ್ಧಾಂತ, ಆದರ್ಶಗಳನ್ನ ಹತ್ಯೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘಧ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಕಿಡಿ ಕಾರಿದ್ದಾರೆ.
‘ಮಹಾತ್ಮರನ್ನೇ ಬಂಡವಾಳ ಮಾಡಿಕೊಂಡ ನುಂಗಪ್ಪಗಳುʼ ಎಂಬ ಜಾಹೀರಾತು ಸಂಬಂಧ ಪ್ರತಿಕ್ರಿಯಿಸಿರುವ ಅವರು, ಅಂದು ಗೋಡ್ಸೆಯಿಂದ ಗಾಂಧಿಯ ಹತ್ಯೆ ನಡೆಯಿತು. ಇಂದು ಬಿಜೆಪಿಯಿಂದ ಮಹಾತ್ಮರ ಸಿದ್ಧಾಂತ, ಆದರ್ಶ ಹಾಗೂ ಗಾಂಧಿ ವಾದದ ಹತ್ಯೆ ನಡೆಯುತ್ತಿದೆ. ಹಾಗಾಗಿ ಬಿಜೆಪಿಯಿಂದ ಗಾಂಧಿಯ ತತ್ವಾದರ್ಶನಗಳನ್ನ ನಾವಿಂದು ರಕ್ಷಿಸಬೇಕಿದೆ ಎಂದು ಕರೆ ನೀಡಿದರು.
ಇಡೀ ವಿಶ್ವಕ್ಕೆ ಅಹಿಂಸೆ ಸಂದೇಶ ಸಾರಿದವರು ಗಾಂಧೀಜಿ. ಅಹಿಂಸೆಯಿಂದ ಎಂತಹ ಕಾರ್ಯವನ್ನು ಬೇಕಾದರೂ ಸಾಧಿಸಬಹುದು ಅಂತ ತೋರಿಸಿಕೊಟ್ಟವರು ಗಾಂಧಿ. ಅಂಹಿಸಾ ಮಾರ್ಗದಿಂದಲೇ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟವರು ಗಾಂಧಿ. ಹಾಗಾಗಿಯೇ ಅವರು ಮಹಾತ್ಮರಾಗಿದ್ದಾರೆ.
ಗಾಂಧೀಜಿ ಅವರು ಎಂದಿಗೂ ತಮ್ಮ ಕೈಯಲ್ಲಿದ್ದ ಕೋಲನ್ನು ಯಾರ ಮೇಲೆ ಹಲ್ಲೆ ನಡೆಸೋದಕ್ಕೂ ಬಳಸಿದವರಲ್ಲ. ಸುಳ್ಳಿನ ಮಾರ್ಗ ಅನುಸರಿಸಲಿಲ್ಲ. ಆದರೆ ಬಿಜೆಪಿ ಲಜ್ಜೆಗೆಟ್ಟ ರಾಜಕಾರಣಕ್ಕಾಗಿ ಗಾಂಧಿ ಅವರ ಆದರ್ಶವನ್ನೇ ಕೊಲ್ಲುವ ಕೆಲಸ ಮಾಡಿದೆ ಎಂದು ಸುಬ್ರಮಣ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಹಾತ್ಮ ಗಾಂಧಿಯ ಮಹತ್ವ ಅರಿಯದ ಬಿಜೆಪಿ ಮಹಾತ್ಮ ಗಾಂಧಿಯವರನ್ನು ಹಿಂಸೆಯ ಪ್ರತಿಪಾದಕರನ್ನಾಗಿ ತೋರಿಸಿ ಜಾಹೀರಾತು ನೀಡಿದೆ. ಇದು ಮಹಾತ್ಮನಿಗೆ ಮಾಡಿದ ಮತ್ತೊಂದು ಅಪಮಾನ. ಈ ಮೊದಲು ಗಾಂಧಿ ಅವರನ್ನ ದೈಹಿಕವಾಗಿ ಕೊಂದರು. ಈಗ ಸಿದ್ಧಾಂತವನ್ನೂ ಕೊಲ್ಲುವ ಕೆಲಸಕ್ಕಿಳಿದಿದ್ದಾರೆ. ದೇಶಭಕ್ತರು ಇದರ ವಿರುದ್ಧ ಎಚ್ಚೆತ್ತು, ಗಾಂಧಿ ತತ್ವ ಆದರ್ಶಗಳನ್ನ ರಕ್ಷಣೆ ಮಾಡಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
