ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ತೀವ್ರಗೊಂಡಿದ್ದು, ಫೆನಿ ಜಿಲ್ಲೆಯ ದಗನ್ಭುಯಾನ್ ನಲ್ಲಿ ಮತ್ತೊಬ್ಬ ಹಿಂದೂವನ್ನು ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ.
ಬಾಂಗ್ಲಾದೇಶದ ಜಗತ್ಪುರ ಗ್ರಾಮದ ಹೊಲದಲ್ಲಿ ಸೋಮವಾರ 27 ವರ್ಷದ ಆಟೋರಿಕ್ಷಾ ಚಾಲಕ ಸಮೀರ್ ದಾಸ್ ಅವರ ಮೃತದೇಹ ಪತ್ತೆಯಾಗಿದೆ.
ಸಮೀರ್ ಭಾನುವಾರ ಸಂಜೆ ತನ್ನ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಗೆ ಹೋಗಿ ತಡರಾತ್ರಿಯಾದರೂ ಹಿಂತಿರುಗಿರಲಿಲ್ಲ.ಹಾಗಾಗಿ ಸಂಬಂಧಿಕರು ವಿವಿಧ ಸ್ಥಳಗಳಲ್ಲಿ ಅವರಿಗಾಗಿ ಹುಡುಕಾಟ ನಡೆಸಿದ್ದರು.
ಈ ಸಂದರ್ಭದಲ್ಲಿ ಜಗತ್ಪುರ ಗ್ರಾಮದ ಹೊಲದಲ್ಲಿ ಸಮೀರ್ ಅವರ ಮೃತದೇಹ ಬಿದ್ದಿರುವುದನ್ನು ನಿವಾಸಿಗಳು ಕಂಡಿದ್ದು, ಈ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಮೃತದೇಹದಲ್ಲಿ ಹಲವಾರು ಇರಿತದ ಗಾಯಗಳಿದ್ದು, ಸಮೀರ್ ಅವರನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಘಟನೆಯನ್ನು ದೃಢಪಡಿಸಿದ ದಗನ್ಭುಯಾನ್ ಪೊಲೀಸ್ ಠಾಣಾಧಿಕಾರಿ (ಒಸಿ) ಮುಹಮ್ಮದ್ ಫೈಜುಲ್ ಅಜೀಂ ನೋಮನ್, ಶವವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಫೆನಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಅವರ ಆಟೋರಿಕ್ಷಾ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
