ಬೆಂಗಳೂರು: ಅಧಿಕಾರದಲ್ಲಿರುವ ಆಡಳಿತ ಪಕ್ಷಗಳು ವಿರೋಧ ಪಕ್ಷಗಳ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ತಾರತಮ್ಯ ಮಾಡುವುದು ಸಾಮಾನ್ಯ.ಆದರೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲೇ ಅನುದಾನ ತಾರತಮ್ಯ ವಾಗಿದೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ಗೇಲಿ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವಿನ ಬಣ ಬಡಿದಾಟ ಯಾವ ಮಟ್ಟದ ತಾರಕಕ್ಕೇರಿದೆ ಎಂದರೆ ಕಾಂಗ್ರೆಸ್ ಶಾಸಕರ ಕ್ಷೇತಗಳಲ್ಲಿಯೇ ಅನುದಾನ ತಾರತಮ್ಯದ ಬಗ್ಗೆ ಸದನದಲ್ಲಿ ಆರೋಪ ಕೇಳಿ ಬರುತ್ತಿದೆ ಎಂದು ಟ್ವೀಟ್ ಮಾಡಿ ಅಶೋಕ್ ಕಾಲೆಳೆದಿದ್ದಾರೆ.
ಯಾವುದೇ ರಾಗ ದ್ವೇಷವಿಲ್ಲದೆ, ಇಡೀ ರಾಜ್ಯಕ್ಕೆ ನಿಷ್ಪಕ್ಷಪಾತವಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮದೇ ಪಕ್ಷದ ವಿರೋಧಿ ಬಣದ ಶಾಸಕರಿಗೆ ಈ ರೀತಿ ತಾರತಮ್ಯ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲೇ ಅನುದಾನ ತಾರತಮ್ಯ-ಅಶೋಕ್ ಗೇಲಿ