ಮೈಸೂರು: ದಸರಾ ಮಹೋತ್ಸವದ ಗಜಪಡೆ ಜತೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಮಾವುತ,ಕಾವಾಡಿಗಳ ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆ ತಾತ್ಕಾಲಿಕ ಶಾಲೆ ಪ್ರಾರಂಭವಾಗಿದ್ದು,ಖುಷಿಯಿಂದಲೇ ಮಕ್ಕಳು ಬಂದಿದ್ದರು.
ಮೊದಲ ದಿನವೇ ೨೦ ಮಕ್ಕಳು ಶಾಲೆಗೆ ಖುಷಿಯಿಂದ ಹಾಜರಾಗಿದ್ದರು.
ಆ.೪ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ ಮೊದಲ ತಂಡದ ೯ ಆನೆಗಳ ಮಾವುತ, ಕಾವಾಡಿಗಳ ಮಕ್ಕಳು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದಾರೆ.
ಶಾಲೆ ಬಿಟ್ಟು ಪೋಷಕರೊಂದಿಗೆ ಬಂದಿರುವ ಮಕ್ಕಳಿಗೆ ಪಠ್ಯಕ್ರಮದ ಕಲಿಕೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಆನೆ ಬಿಡಾರದ ಬಳಿ ಟೆಂಟ್ ಶಾಲೆ ಆರಂಭಿಸುವ ಕಾರ್ಯ ಚಾಲ್ತಿಗೆ ಬಂದಿತು.
ಆದರೆ,ಕಳೆದ ನಾಲ್ಕೈದು ವರ್ಷದಿಂದ ಟೆಂಟ್ ಶಾಲೆ ಪದ್ದತಿ ಪರಿವರ್ತನೆಯಾಗಿ ತಾತ್ಕಾಲಿಕ ಶಾಲೆ ಎಂದು ಮಾರ್ಪಟ್ಟಿದೆ.
ಈ ಬಾರಿ ತಾತ್ಕಾಲಿಕ ಶಾಲೆ ಔಪಚಾರಿಕವಾಗಿ ಆರಂಭಿಸಲಾಗಿದೆ.ಸಾಮಾನ್ಯವಾಗಿ ದಸರಾ ಗಜಪಡೆ ಮಾವುತ, ಕಾವಾಡಿಗಳ ಮಕ್ಕಳು ನಾಚಿಕೆ ಸ್ವಭಾವದವರಾಗಿದ್ದು, ನಗರ ವಾಸಿಗಳು, ಅಪರಿಚಿತರೊಂದಿಗೆ ಬೆರೆಯುವುದಿಲ್ಲ.
ಅದರಲ್ಲೂ ಟೆಂಟ್ ಶಾಲೆಗೆ ಕಲಿಯಲು ಬನ್ನಿ ಎಂದರೂ ಮಕ್ಕಳು ಬರುತ್ತಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾವುತ, ಕಾವಾಡಿ ಮಕ್ಕಳು ತಾತ್ಕಾಲಿಕ ಶಾಲೆಗೆ ಬರಲು ಆಸಕ್ತಿ ತೋರುತ್ತಿದ್ದಾರೆ.
ಈ ತಾತ್ಕಾಲಿಕ ಶಾಲೆಗೆ ಮೂವರು ಶಿಕ್ಷಕಿಯರನ್ನು ನಿಯೋಜಿಸಲಾಗಿದೆ. ಡಿಡಿಪಿಐ ಜವರೇಗೌಡ ಮಾರ್ಗದರ್ಶನದಲ್ಲಿ ದಕ್ಷಿಣ ವಲಯ ಬಿಇಒ ಎಂ.ಆರ್.ಅನಂತರಾಜು, ಬಿಆರ್ಸಿ ಎಂ.ಬಿ.ಶ್ರೀಕಂಠಸ್ವಾಮಿ ನೇತೃತ್ವದಲ್ಲಿ ತಾತ್ಕಾಲಿಕ ಶಾಲೆ ನಡೆಯಲಿದೆ.
ಅದಕ್ಕಾಗಿ ದಕ್ಷಿಣ ಬಿಇಒ ಕಚೇರಿ ವತಿಯಿಂದ ವಿದ್ಯಾರಣ್ಯಪುರಂ ರೆಹಮಾನಿಯಾ ಉರ್ದು ಶಾಲೆಯ ಶಿಕ್ಷಕಿ ನೂರ್ಫಾತಿಮ, ಕುಕ್ಕರಹಳ್ಳಿ ಶಾಲೆಯ ದಿವ್ಯ ಪ್ರಿಯದರ್ಶಿನಿ, ಚಾಮುಂಡಿಪುರಂ ವಿಎಂಇ ಬಾಲಬೋಧಿನಿ ಶಾಲೆಯ ಮೋಸಿನ್ ತಾಜ್ ಅವರನ್ನು ಈ ಬಾರಿ ತಾತ್ಕಾಲಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ನಿಯೋಜಿಸಲಾಗಿದೆ.
ಕಾಡಿನ ಸುಂದರ ಪರಿಸರದಲ್ಲಿರುವ ಮಾವುತ, ಕಾವಾಡಿಗಳ ಮಕ್ಕಳಿಗೆ ಸಾಮಾನ್ಯ ಶೈಲಿಯಂತೆ ಪಾಠ ಮಾಡಿದರೆ ಮನಮುಟ್ಟುವುದಿಲ್ಲ ಎಂಬುದನ್ನು ಗಮನಿಸಿದ ಶಿಕ್ಷಣ ಇಲಾಖೆ ತಾತ್ಕಾಲಿಕ ಶಾಲೆಯಲ್ಲಿ ನಲಿ-ಕಲಿ ವಿಧಾನದ ಮೂಲಕ ವಿವಿಧ ಫಲಕ(ಚಾರ್ಟ್) ಪ್ರದರ್ಶಿಸಿ, ಅಕ್ಷರ ಕಲಿಸಲಾಗುತ್ತಿದೆ.
ತಾತ್ಕಾಲಿಕ ಶಾಲೆಗೆ ಬರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಅಕ್ಷರ ದಾಸೋಹ ಯೋಜನೆಯಡಿ ಇಸ್ಕಾನ್ ಸಂಸ್ಥೆ ಪೂರೈಸುವ ಮಧ್ಯಾಹ್ನದ ಬಿಸಿಯೂಟ ಮಾವುತ, ಕಾವಾಡಿಗಳ ಮಕ್ಕಳಿಗೂ ಸರಬರಾಜು ಮಾಡಲಾಗುತ್ತದೆ.
ಗಜಪಡೆಯ ಎರಡನೇ ತಂಡ ಆ.೨೫ರಂದು ಆಗಮಿಸಲಿದ್ದು, ೫ ಆನೆಗಳ ಮಾವುತ, ಕಾವಾಡಿಗಳ ಮಕ್ಕಳೂ ಸೇರಿದಂತೆ ಇನ್ನಷ್ಟು ಮಕ್ಕಳು ಅರಮನೆಗೆ ಆಗಮಿಸಲಿದ್ದಾರೆ, ಈ ಭಾರಿ ೪೦ ಮಕ್ಕಳು ತಾತ್ಕಾಲಿಕ ಶಾಲೆಯಲ್ಲಿ ಕಲಿಯುವ ಸಾಧ್ಯತೆ ಇದೆ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಪ್ರಾರಂಭವಾಗಿದೆ.