ಮೈಸೂರು: ಡೆಂಗ್ಯೂ ಜ್ವರ ಬರದಂತೆ ಉತ್ತಮ ಜೀವನವನ್ನು ನಡೆಸಲು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟಿಕೊಳ್ಳಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸುವರ್ಣ ತಿಳಿಸಿದರು.
ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಚ್ ಹೆಚ್ ಎಂ ಬಿ ಜಿ ಯಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡೆಂಗ್ಯೂ ಜ್ವರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಜೊತೆ ಜನಪ್ರತಿನಿಧಿಗಳು ಸಹಕಾರ ಬಹಳ ಮುಖ್ಯ ಎಂದು ತಿಳಿಸಿದರು.
ಪ್ರತಿ ಶುಕ್ರವಾರ ಲಾರ್ವಾ ಸರ್ವೆಯನ್ನೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಕೈಕೊಂಡಿದ್ದು ಲಾರ್ವಾನಾಶ ಮಾಡಿ ಸೊಳ್ಳೆಗಳ ಬೆಳವಣಿಗೆಯ ಮಟ್ಟವನ್ನು ಕಡಿಮೆ ಮಾಡುವುದರಿಂದ ಡೆಂಗ್ಯೂ ಜ್ವರಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಜ್ವರ ಬಂದ ತಕ್ಷಣ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸುವರ್ಣ ಸಲಹೆ ನೀಡಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ರಜಿನಿ ಅಣ್ಣಯ್ಯ ಮತ್ತು ಛಾಯಾದೇವಿ, ರಾಜ್ಯ ಮಟ್ಟದಿಂದ ಎಂಟಾಮಾಲಾಜಿಸ್ಟ್ ಉಷಾ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಆರ್.ಸಿ. ಎಚ್ ಸಿರಾಜ್ ಮಹಮದ್, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಪುಟ್ಟತಾಯ್ಯಮ್ಮ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ನವೀನ್ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮುನೀಂದ್ರಮ್ಮ ಮತ್ತು ಪದ್ಮಾವತಿ ಮತ್ತಿತರರು ಹಾಜರಿದ್ದರು.
