ಬೆಂಗಳೂರು: ರೀಲ್ಸ್ ಮಂತ್ರಿ ಕೃಷ್ಣಬೈರೆಗೌಡ ರೇ, ನಿಮ್ಮ ಕ್ಯಾಮೆರಾ ಕಣ್ಣಿಗೆ ಬೆಂಗಳೂರಿನ ನರಕ ದರ್ಶನವಾಗುತ್ತಿಲ್ಲವೇ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ಒಂದು ಕಡೆ ಹೆಚ್.ಎಸ್.ಆರ್ ಲೇಔಟ್ನಲ್ಲಿ ಕಲುಷಿತ ಕಾವೇರಿ ನೀರು ಕುಡಿದು 60ಕ್ಕೂ ಹೆಚ್ಚು ಕುಟುಂಬಗಳು ರೋಗಗ್ರಸ್ತವಾಗಿವೆ, ಮಕ್ಕಳು ಆಸ್ಪತ್ರೆ ಸೇರಿದ್ದಾರೆ. ಕುಡಿಯುವ ನೀರಿನಲ್ಲಿ ಬರೋಬ್ಬರಿ 278 ಕೊಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿದೆ! ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಜಲಮಂಡಳಿ ಜೂನ್ 6ರಿಂದ ಕಂಪ್ಲೇಂಟ್ ಕೊಟ್ಟರೂ ಕಣ್ಣು ಬಿಟ್ಟಿಲ್ಲ.ಇದು ನಿಮ್ಮ ಅರಿವಿಗೆ ಬಂದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದು ಕಡೆ ಬೆಂಗಳೂರಿನಲ್ಲಿ ಪ್ರತಿದಿನ 1,775 ಟನ್ ಕಸ ಸಂಸ್ಕರಣೆಯಾಗದೇ ರಸ್ತೆ, ರಾಜಕಾಲುವೆ ಸೇರುತ್ತಿದೆ.
ನಿಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ “ಬ್ರ್ಯಾಂಡ್ ಬೆಂಗಳೂರು” ಅಂದರೆ ಸಾರ್ವಜನಿಕರು ಕಲುಷಿತ ನೀರು ಕುಡಿದು ಸಾಯಬೇಕಾ ಕಸದ ರಾಶಿಯಲ್ಲಿ ನರಳಬೇಕಾ ಎಂದು ಕಿಡಿಕಾರಿದ್ದಾರೆ.
ನಿಮ್ಮ ಹಿಂದಿನ ಬೆಂಗಳೂರು ಅಭಿವೃದ್ಧಿ ಮಂತ್ರಿಗಳು ಬಿಟ್ಟು ಹೋಗಿರುವ “ಸಾಕ್ಷಿ ಗುಡ್ಡೆ”ಯನ್ನು ಸರಿಪಡಿಸಲು ತಾವು ಯುದ್ದದೋಪಾದಿಯಲ್ಲಿ ಕೆಲಸ ಮಾಡಬೇಕು ಸ್ವಾಮಿ, ಬರೀ ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡಿ, ಜವಾಬ್ದಾರಿಯಿಂದ ನುಣುಚಿಕೊಂಡರೆ ಬೆಂಗಳೂರಿನ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಅಶೋಕ ಟೀಕಿಸಿದ್ದಾರೆ.
