ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ದ:ಪಾಕ್ ಪ್ರಧಾನಿ

Spread the love

ಇಸ್ಲಾಮಾಬಾದ್: ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ದರಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.

ನಾಲ್ಕು ದೇಶಗಳ ಪ್ರವಾಸದ ವೇಳೆ ಮಾತನಾಡಿರುವ ಅವರು, ಕಾಶ್ಮೀರ, ಭಯೋತ್ಪಾದನೆ, ನೀರು ಮತ್ತು ವ್ಯಾಪಾರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಮಾತುಕತೆ ನಡೆಸುವ ಇಚ್ಚೆ ಇದೆ ಎಂದು ಹೇಳಿದ್ದಾರೆ.

ಟರ್ಕಿಯಿಂದ ಇರಾನ್​ಗೆ ಬಂದಿಳಿದ ಷರೀಫ್​ ಅವರನ್ನು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಸಾದಾಬಾದ್ ಅರಮನೆಯಲ್ಲಿ ಸ್ವಾಗತಿಸಿದರು. ಈ ವೇಳೆ ಪೆಜೆಶ್ಕಿಯಾನ್ ಜೊತೆಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಷರೀಫ್, ಶಾಂತಿಗಾಗಿ ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.

ಕಾಶ್ಮೀರ, ನೀರು ಸೇರಿದಂತೆ ಎಲ್ಲ ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ನಾವು ನೆರೆಯ ದೇಶದೊಂದಿಗೆ ವ್ಯಾಪಾರ ಮತ್ತು ಭಯೋತ್ಪಾದನೆ ಎದುರಿಸುವ ಕುರಿತು ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದಿದ್ದಾರೆ.

ಇದೇ ವೇಳೆ ಭಾರತ ಯುದ್ಧವನ್ನು ಆಯ್ಕೆ ಮಾಡಿಕೊಂಡಲ್ಲಿ ಅದನ್ನು ಎದುರಿಸಲೂ ಸಿದ್ಧ ಎಂದು ಕೂಡಾ ಶಹಬಾಜ್ ಹೇಳಿದ್ದಾರೆ.

ಒಂದು ವೇಳೆ ಆಕ್ರಮಣಕಾರಿ ಮಾರ್ಗ ಆರಿಸಿಕೊಂಡರೆ, ನಾವು ನಮ್ಮ ಪ್ರದೇಶವನ್ನು ರಕ್ಷಿಸಿಕೊಳ್ಳುವುದು ಗೊತ್ತಿದೆ,ಅವರು ಶಾಂತಿಯನ್ನು ಸ್ವೀಕರಿಸಿದರೆ, ನಾವು ಪ್ರಾಮಾಣಿಕವಾಗಿ ಶಾಂತಿಯನ್ನು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

ಭಾರತದೊಂದಿಗಿನ ನಾಲ್ಕು ದಿನಗಳ ಸೇನಾ ಸಂಘರ್ಷದಲ್ಲಿ ನಾವು ಗೆದ್ದಿದ್ದೇವೆ ಎಂದು ಶಹಬಾಜ್ ಷರೀಫ್ ಸಮರ್ಥಿಸಿಕೊಂಡಿದ್ದಾರೆ.