ಮ್ಯಾನ್ಮಾರ್ ನಲ್ಲಿ ಇಂದು ಮತ್ತೆ ಕಂಪಿಸಿದ ಭೂಮಿ

Spread the love

ಮ್ಯಾನ್ಮಾರ್: ಪ್ರಕೃತಿಯ ರಕ್ಕಸತನದಿಂದ ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗಿರುವ ಮ್ಯಾನ್ಮಾರ್‌​ನಲ್ಲಿ ಶನಿವಾರ ಮತ್ತೆ ಭೂಮಿ ಕಂಪಿಸಿದ್ದು ಜನ ಭಯದಿಂದ ಹೊರಗೆ ಓಡಿ ಬಂದಿದ್ದಾರೆ.

ಇಂದು ಮಧ್ಯಾಹ್ನ 2.50 ರ ಸುಮಾರಿಗೆ ಭೂಮಿ ಅಲುಗಾಡಿದ್ದು, ರಿಕ್ಟರ್​ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

10 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ ಎಂದು ತನ್ನ ಎಕ್ಸ್​ ಖಾತೆಯಲ್ಲಿ ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪೋಸ್ಟ್​ ಹಂಚಿಕೊಂಡಿದೆ. ಶುಕ್ರವಾರವಷ್ಟೇ 7.7 ರ ತೀವ್ರತೆಯಲ್ಲಿ ಭೂಮಿ ಕಂಪಿಸಿ ಮುಗಿಲೆತ್ತರದ ಕಟ್ಟಡಗಳು, ಸೇತುವೆಗಳು ನೆಲಸಮವಾಗಿದ್ದವು, ಇದರ ಬೆನ್ನಲ್ಲೇ ಮತ್ತೆ ಭೂಮಿ ಕಂಪಿಸಿದೆ.

ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1 ಸಾವಿರ ಗಡಿ ದಾಟಿದೆ. 2,376 ಜನರು ಗಾಯಗೊಂಡಿದ್ದಾರೆ. ಕುಸಿದ ಹಲವಾರು ಕಟ್ಟಡಗಳ ಅವಶೇಷಗಳಿಂದ ಶವಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.