ಮೈಸೂರು: ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ವೆಂಕಟೇಶ್ ಆಲಿಯಾಸ್ ಗಿಲ್ಕಿ ಕೊಲೆ ಆರೋಪಿಗಳು ತಾವಾಗಿಯೇ ಪೊಲೀಸರಿಗೆ ಶರಣಾಗಿದ್ದಾರೆ.
ಕೊಲೆಗೆ ಡಾನ್ ಪಟ್ಟಕ್ಕಾಗಿ ಶುರುವಾದ ಪೈಪೋಟಿಯೆ ಕಾರಣ ಎಂದು ಗೊತ್ತಾಗಿದೆ.
ಅ.7 ರಂದು ಆಟೋ ಮತ್ತು ದ್ವಿಚಕ್ರ ವಾಹನದಲ್ಲಿ ಬಂದ 6 ಮಂದಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದ ವೆಂಕಟೇಶ್ನನ್ನು ನಿಲ್ಲಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಹೀಗೆ ಪರಾರಿಯಾಗಿದ್ದ ಆರೋಪಿಗಳು ತಡರಾತ್ರಿ ತಾವಾಗಿಯೇ ಪೊಲೀಸರಿಗೆ ಶರಣಾಗಿದ್ದು,ಅಚ್ಚರಿ ತಂದಿದೆ.
ಪೊಲೀಸರಿಗೆ ಶರಣಾದ ಆರೋಪಿಗಳು ಯಾತಕ್ಕಾಗಿ ಕೊಲೆ ಮಾಡಿದ್ದೆಂದು ತಿಳಿಸಿ ತಪ್ಪೊಪ್ಪಿಕೊಂಡಿದ್ದಾರೆ.
ಐದು ತಿಂಗಳ ಹಿಂದೆ ಮೈಸೂರಿನ ಕ್ಯಾತಮಾರನಹಳ್ಳಿಯ ರೌಡಿಶೀಟರ್ ಕಾರ್ತಿಕ್ ಹತ್ಯೆ ಆಗಿತ್ತು. ಕಾರ್ತಿಕ್ಗೆ ಇದ್ದ ಡಾನ್ ಪಟ್ಟದಲ್ಲಿ ಯಾರು ಕೂರಬೇಕು ಎಂಬ ಬಗ್ಗೆ ಆತನ ಪಾಳೆಯದಲ್ಲೇ ಪೈಪೋಟಿ ಇತ್ತು, ಡಾನ್ ಪಟ್ಟಕ್ಕಾಗಿಯೇ ವೆಂಕಟೇಶ್ ಕೊಲೆಯಾಗಿದೆ ಅದರಲ್ಲೂ ಹಾಲಪ್ಪ ಎಂಬಾತನೇ ರೂವಾರಿ ಎಂದು ತಿಳಿದು ಬಂದಿದೆ.
ಕಾರ್ತಿಕ್ ಕೊಲೆಗೂ ಮುನ್ನ ಸಣ್ಣ ಜಗಳವಾಗಿ ವೆಂಕಟೇಶ್ ಈ ಗುಂಪಿನಿಂದ ಬೇರೆ ಆಗಿದ್ದ. ಕಾರ್ತಿಕ್ ಕೊಲೆ ನಂತರ ಫೀಲ್ಡ್ನಲ್ಲಿ ಮತ್ತೆ ಮೆರೆಯಲು ವೆಂಕಟೇಶ್ ಶುರು ಮಾಡಿದ್ದ.
ಇದನ್ನು ಸಹಿಸದ ಹಾಲಪ್ಪ ಹಾಗೂ ಸಹಚರರು ಜಗಳ ಶುರು ಮಾಡಿದ್ದರು ಎನ್ನಲಾಗಿದೆ.
ಹಾಲಪ್ಪ ತನ್ನ ಡಾನ್ ಪಟ್ಟಕ್ಕೆ ಅಡ್ಡಿಯಾಗಿದ್ದಾನೆ ಎಂದು ಗಿಲ್ಕಿ ವೆಂಕಟೇಶ ಹಾಲಪ್ಪನ ಕೊಲೆಗೆ ಸ್ಕೆಚ್ ಹಾಕಿದ್ದನಂತೆ.ಹಾಗಾಗಿ ಹಾಲಪ್ಪನನ್ನು ಕೊಲ್ಲಲು ವೆಂಕಟೇಶ್ ಹಾಗೂ ಅವನ ಶಿಷ್ಯಂದಿರು ಹುಡುಕಾಟ ನಡೆಸಿದ್ದರು,ಜತೆಗೆ ಕೊಲೆ ನಡೆದೂ ಹೋಗಿದೆ.
ಕೊಲೆಯಾದ ಬಳಿಕ ಹಾಲಪ್ಪ ಪರಾರಿಯಾಗಿದ್ದು ಸಹಚರರು ಮಾತ್ರ ಪೊಲೀಸರಿಗೆ ಶರಣಾಗಿದ್ದಾರೆ.ಹಾಲಪ್ಪನ ಶೋಧ ಕಾರ್ಯ ಮುಂದುವರಿದಿದೆ.