ಕಠ್ಮಂಡು: ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಹೇರಿರುವ ನಿಷೇಧ ತೆಗೆದುಹಾಕಬೇಕು ಮತ್ತು ಭ್ರಷ್ಟಾಚಾರ ಸಂಸ್ಕೃತಿಯನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿ ಯುವಕರು ಸೋಮವಾರ ಕಠ್ಮಂಡುವಿನಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಹಿಂಸಾಚಾರದಲ್ಲಿ ಮೃತೊಟ್ಟವರ ಸಂಖ್ಯೆ19 ಕ್ಕೆ ಏರಿದೆ ಮತ್ತು 250 ಮಂದಿ ಗಾಯಗೊಂಡಿದ್ದಾರೆ.
ಡಮಾಕ್ನಲ್ಲಿ, ಪ್ರತಿಭಟನಾಕಾರರು ಡಮಾಕ್ ಚೌಕ್ನಿಂದ ಪುರಸಭೆ ಕಚೇರಿವರೆಗೆ ಮೆರವಣಿಗೆ ನಡೆಸಿದರು.ಈ ವೇಳೆ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಪ್ರತಿಕೃತಿ ಸುಟ್ಟು ಕಚೇರಿಯ ಬಾಗಿಲುಗಳನ್ನು ಮುರಿಯಲು ಪ್ರಯತ್ನಿಸಿದರು.
ಆಗ ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದರು. ಹಲವಾರು ಬೈಕ್ಗಳಿಗೂ ಬೆಂಕಿ ಹಚ್ಚಲಾಯಿತು.ಹಾಗಾಗಿ ಆ ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರವಾಯಿತು.
ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಯೂಟ್ಯೂಬ್ ಮತ್ತು ಸ್ನ್ಯಾಪ್ಚಾಟ್,ಲಿಂಕ್ಡ್ ಇನ್ ಸೇರಿದಂತೆ ಹಲವಾರು ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧದ ವಿರುದ್ಧ ಕಠ್ಮಂಡುವಿನಲ್ಲಿ ಜನರೇಷನ್ ಝಡ್ ಪ್ರತಿಭಟನಾಕಾರರ ನೇತೃತ್ವದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾಕಾರರು ನಿರ್ಬಂಧಿತ ವಲಯವನ್ನು ಉಲ್ಲಂಘಿಸಿ ಸಂಸತ್ತಿನ ಆವರಣವನ್ನು ಪ್ರವೇಶಿಸಿದ ನಂತರ ಪರಿಸ್ಥಿತಿ ಉಲ್ಬಣಗೊಂಡಿತು. ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ಜೀವಂತ ಮದ್ದುಗುಂಡುಗಳೊಂದಿಗೆ ಹೋರಾಟಗಾರರಿಗೆ ಬಿಸಿ ಮುಟ್ಟಿಸಿದರು.ಆಗ ಗಲಭೆ ತೀವ್ರಗೊಂಡು ಸಾವುನೋವಿಗೆ ಕಾರಣವಾಯಿತು.