ದುಬೈನಲ್ಲಿ ಪಾಕಿಸ್ತಾನಿ ಪ್ರಜೆಯಿಂದ ದಾಳಿ: ಇಬ್ಬರು ತೆಲಂಗಾಣ ಯುವಕರು ಸಾವು

Spread the love

ದುಬೈ: ದುಬೈನ ಬೇಕರಿಯೊಂದರಲ್ಲಿ ಪಾಕಿಸ್ತಾನಿ ಪ್ರಜೆ ಧಾರ್ಮಿಕ ಘೋಷಣೆಗಳನ್ನು ಕೂಗಿ ದಾಳಿ ಮಾಡಿದ ಪರಿಣಾಮ ತೆಲಂಗಾಣದ ಇಬ್ಬರು ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದವರನ್ನು ನಿರ್ಮಲ್​ ಜಿಲ್ಲೆಯ ಸೋನ ಗ್ರಾಮದ ಅಷ್ಟಪು ಪ್ರೇಮ್​ಸಾಗರ್​ (35), ಹಾಗೂ ನಿಜಾಮಾಬಾದ್​ನ ಶ್ರೀನಿವಾಸ್​ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ‌ ಸಾಗರ್​ ಎಂಬಾತ‌ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರೇಮಸಾಗರ್​ ಕಳೆದ ಐದಾರು ವರ್ಷಗಳಿಂದ ಘಟನೆ‌ ನಡೆದ ಬೇಕರಿಯಲ್ಲಿ ಉದ್ಯೋಗಿಯಾಗಿದ್ದರು. ಎರಡು ವರ್ಷಗಳ ಹಿಂದೆ ಊರಿಗೆ ಬಂದು ಹೋಗಿದ್ದರಂತೆ.

ಪ್ರೇಮಸಾಗರನ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲು ಸರ್ಕಾರ ಸಹಾಯ ಮಾಡಬೇಕು. ಹಾಗೂ ಪ್ರೇಮಸಾಗರ್​ ಅವರ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅವರಿಗೆ ನೆರವು ನೀಡಬೇಕು ಎಂದು ಅವರ ಚಿಕ್ಕಪ್ಪ
ಮನವಿ ಮಾಡಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವ ಕಿಶನ್​ ರೆಡ್ಡಿ ಅವರು
ದುಃಖ ವ್ಯಕ್ತಪಡಿಸಿದ್ದು, ಪಾರ್ಥೀವ ಶರೀರಗಳನ್ನು ಭಾರತಕ್ಕೆ ತರಲು ಸಹಾಯಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​. ಜೈಶಂಕರ್​ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕಿಶನ್​ ರೆಡ್ಡಿ,ದುಬೈನಲ್ಲಿ ತೆಲಂಗಾಣದ ಇಬ್ಬರು ಯುವಕರು ಹತ್ಯೆಯಾಗಿರುವುದು ತೀವ್ರ ಆಘಾತ ತಂದಿದೆ. ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್​ ಅವರ ಜೊತೆಗೆ ಮಾತನಾಡಿದ್ದೇನೆ. ಅವರು ದುಃಖಿತ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ನೀಡುವ ಹಾಗೂ ಪಾರ್ಥೀವ ಶರೀರಗಳನ್ನು ತುರ್ತು ಭಾರತಕ್ಕೆ ತರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.