ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆ ಏನು-ಸಿಎಂ ಪ್ರಶ್ನೆ

ಹಾಸನ: ಅಹಿಂದ ವರ್ಗಗಳ ಸಂಘಟನೆಯಲ್ಲಿ ನನ್ನ ಕೊಡುಗೆಯಿದೆ, ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆಗಳೇನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಹಾಸನದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದರು.
ಅಹಿಂದ ವರ್ಗಕ್ಕೆ ಸಿದ್ದರಾಮಯ್ಯನವರ ಕೊಡುಗೆಯ ಬಗ್ಗೆ ಪ್ರಶ್ನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಅಹಿಂದ ವರ್ಗಗಳ ಸಂಘಟನೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದು, ಅವರಿಗೆ ಗ್ಯಾರಂಟಿ ಹಾಗೂ ಅನೇಕ ಭಾಗ್ಯಯೋಜನೆಗಳನ್ನು ನೀಡಿದ್ದೇವೆ. ಕಾರ್ಮಿಕರು, ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಸಬಲೀಕರಣಕ್ಕೆ ಗ್ಯಾರಂಟಿ ಸೇರಿದಂತೆ ಅನೇಕ ಯೋಜನೆಗಳಿಂದ ಅನುಕೂಲವಾಗಿದೆ ಎಂದು ಹೇಳಿದರು.

ಕುಮಾರಸ್ವಾಮಿಯವರು ರೈತರ ಕುಟುಂಬದವರೇ,ಆದರೆ ರೈತವರ್ಗಕ್ಕೆ ಅವರ ಕೊಡುಗೆಗಳೇನಿದೆ ಎಂದು ಸಿಎಂ ಪ್ರಶ್ನಿಸಿದರು.

ಸೆಪ್ಟೆಂಬರ್ ನಿಂದ ನವೆಂಬರ್ 2025ರವೆಗೆ ಕರ್ನಾಟಕಕ್ಕೆ ಜಿಎಸ್ ಟಿ ಸಂಗ್ರಹದಲ್ಲಿ ನಷ್ಟವಾಗಿದೆ. 2017 ರಲ್ಲಿ ಪ್ರಧಾನಿ ಮೋದಿಯವರು ಜಿಎಸ್ ಟಿ ಜಾರಿಗೆ ತಂದು, ಅಂದಿನಿಂದಲೂ ಜನರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಈಗ ಆರ್ಥಿಕ ವರ್ಷದ ಮಧ್ಯದಲ್ಲಿಯೇ ಜಿಎಸ್ ಟಿ ದರವನ್ನು ಕಡಿಮೆ ಮಾಡಿದ ಪರಿಣಾಮ, ರಾಜ್ಯ ಸರ್ಕಾರಗಳಿಗೆ ಜಿಎಸ್ ಟಿ ಸಂಗ್ರಹದಲ್ಲಿ ನಷ್ಟವಾಗಿದೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಹೊರತುಪಡಿಸಿ, ದೇಶದ ಎಲ್ಲಾ ರಾಜ್ಯಗಳಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಕೊರತೆ ಕಂಡಿದೆ ಎಂದು ಸಿದ್ದು‌ ಹೇಳಿದರು.

ಜಿಎಸ್ ಟಿ ದರ ಕಡಿತದಿಂದ ರಾಜ್ಯಕ್ಕಾಗಿರುವ ನಷ್ಟದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿಯರು ಇದುವರೆಗೂ ಧ್ವನಿ ಎತ್ತಿಲ್ಲ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ವಿತ್ತಸಚಿವರು 5300 ಕೋಟಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈ ಘೋಷಣೆಯಲ್ಲಿ ಹಿಂದಿನ ಸರ್ಕಾರದವರು ತಮ್ಮ ಆಯವ್ಯಯದಲ್ಲಿಯೂ ಉಲ್ಲೇಖಿಸಿದರು. ಆದರೆ ಇದುವರೆಗೆ ಕೇಂದ್ರದಿಂದ ಈ ಅನುದಾನವನ್ನು ಬಿಡುಗಡೆ ಮಾಡಿಲ್ಲ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ರಾಜ್ಯದ ಪ್ರಮುಖ ಯೋಜನೆಗೆ ಇದುವರೆಗೆ ಅನುಮತಿ ದೊರೆತಿಲ್ಲ. ಇದರಿಂದ ಮಂಡ್ಯ ಜನರಿಗೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಅಸಮಾಧಾನದಿಂದ ನುಡಿದರು.

ಮಹಿಳಾ ಮೀಸಲಾತಿ ಜಾರಿಯಾಗಿಲ್ಲದಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ‌ ಸಿದ್ದ ರಾಮಯ್ಯ ನಮ್ಮ ಸರ್ಕಾರ ಮೊದಲಿನಿಂದಲೂ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿಸುವವರಲ್ಲಿ ನಾವು ಮುಂಚೂಣಿಯಲಿದ್ದೇವೆ. ಮೀಸಲಾತಿ ಕೊಡಬೇಕು ಎಂದರೆ ತಕ್ಷಣ ಕೊಡಬೇಕು. ಕೇಂದ್ರ ಸರ್ಕಾರ ಇದನ್ನು ಏಕೆ ಮುಂದೂಡಬೇಕು ಎಂದು ಪ್ರಶ್ನಿಸಿದರು.

ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆ ಏನು-ಸಿಎಂ ಪ್ರಶ್ನೆ Read More

ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಚಂದ್ರಕಾಂತ ಆಯ್ಕೆ

ಬೀದರ್: ತ್ರಿಭಾಷಾ ವಚನ ಗಾಯನದ ಪರಿಣತಿಯನ್ನು ಗುರುತಿಸಿ ಬೀದರಿನ ವಿಶ್ವ ಕನ್ನಡಿಗರ ಸಂಸ್ಥೆಯು ಹೈದರಾಬಾದ್ ಪ್ರಗತಿನಗರದ ನಿವಾಸಿ, ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ. ಚಂದ್ರಕಾಂತ ಅವರನ್ನು ರಾಷ್ಟ್ರೀಯ ಮಟ್ಟದ ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗೋರಚಿಂಚೋಳಿ ಗ್ರಾಮದ ಜಿ. ಚಂದ್ರಕಾಂತ, ಬಾಲ್ಯದಿಂದಲೂ ಭಜನೆ ಮತ್ತು ನಾಟಕದ ಬಗ್ಗೆ ಒಲವು ಹೊಂದಿದ್ದರು.

ಸೌಭಾಗ್ಯ ಲಕ್ಷ್ಮೀ ಸಾಮಾಜಿಕ ನಾಟಕದಲ್ಲಿ ಬಾಲ ನಟನಾಗಿ ನಟಿಸಿದ್ದಾರೆ. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಸರ್ಕಾರದ ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮನೆಯಲ್ಲಿಯೇ ಸಂಗೀತ ಕಲಿಯಲು ಪ್ರಾರಂಭಿಸಿದರು.
ಮಹಾನ್ ಮಾನವತಾವಾದಿ ಬಸವೇಶ್ವರರ ವಚನಗಳ ಸಾರವನ್ನು ಇತರ ಭಾಷಿಕರು ಮತ್ತು ಧಾರ್ಮಿಕರಿಗೂ ತಲುಪಿಸುವ ಉದ್ದೇಶದಿಂದ, ಅವರು ಕನ್ನಡ, ಹಿಂದಿ, ಮರಾಠಿ, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿವಿಧ ರಾಗಗಳಲ್ಲಿ ಸುಮಾರು 20-25 ವಚನಗಳನ್ನು ಹಾಡುವರು.

ಇದಲ್ಲದೆ ಅವರು ಗಜಲ್‌ಗಳು, ಜಾನಪದ ಗೀತೆಗಳು, ಕನ್ನಡ ಗೀತೆಗಳು ಮತ್ತು ಮರಾಠಿ ಅಭಂಗಗಳನ್ನು ಸಹ ಹಾಡುತ್ತಾರೆ. ಅವರು ವಿಶ್ವ ವಿಖ್ಯಾತ ಮೈಸೂರು ದಸರಾ, ಹಂಪಿ ಉತ್ಸವ ಸೇರಿದಂತೆ ವಿವಿಧ ರಾಜ್ಯ ಮಟ್ಟದ ಉತ್ಸವಗಳಲ್ಲಿ ತ್ರಿಭಾಷಾ ವಚನ ಮತ್ತು ಗಜಲ್‌ಗಳ ಗಾಯನ ಮಾಡಿದ್ದಾರೆ. ಅವರು ಆಲ್ ಇಂಡಿಯಾ ರೇಡಿಯೋದಿಂದ ಹಿಂದೂಸ್ತಾನಿ ಸುಗಮ ಸಂಗೀತದಲ್ಲಿ “ಬಿ” ದರ್ಜೆಯನ್ನು ಸಹ ಪಡೆದಿದ್ದಾರೆ.

ರಾಷ್ಟ್ರೀಯ ಮಟ್ಟದ ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಒಟ್ಟು 16 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಹೇಳಿದ್ದಾರೆ.

ಅವರಲ್ಲಿ ಶ್ರೀ ಚಂದ್ರಕಾಂತ ಒಬ್ಬರು. 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಡಿಸೆಂಬರ್ 9, ಮಂಗಳವಾರ ಬೀದರಿನ ಶ್ರೀ ಚೆನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಚಂದ್ರಕಾಂತ ಆಯ್ಕೆ Read More

ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ಕಾರಂಜಿ ಸಹಕಾರಿ:ಎ.ಆರ್. ಕೃಷ್ಣಮೂರ್ತಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮದೇ ಆದ ಪ್ರತಿಭೆಗಳನ್ನು ಹೊಂದಿರುತ್ತಾರೆ. ಪ್ರತಿಭೆಗಳನ್ನು ಹೊರ ತರುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು
ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತೆ ಶಾಸಕರು ಕರೆ ನೀಡಿದರು.

ಪಟ್ಟಣದ ಆರ್.ಮಿಷನ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಕರ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ ಕಾರ್ಯಕ್ರಮವನ್ನು ಅವರು ಉದ್ಘಾಟಸಿ ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗೂ ಒತ್ತು ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತಮ್ಮದೇ ಆದ ಪ್ರತಿಭೆಗಳನ್ನು ಹೊಂದಿರುತ್ತಾರೆ,ಅದನ್ನು ಗುರುತಿಸಿ ಪ್ರೊತ್ಸಾಹಿಸಬೇಕು ಎಂದು ದಲಹೆ ನೀಡಿದರು.
ಚಾಮರಾಜನಗರ ಜಿಲ್ಲೆಯು ಜಾನಪದ ಕಲೆಗಳ ತವರೂರಾಗಿದೆ. ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಜಾನಪದ ಕಲೆಗಳಿಗೆ ಒತ್ತು ನೀಡಬೇಕು. ಆ ಮೂಲಕ ಜಿಲ್ಲೆಯ ಸಂಸ್ಕೃತಿಯನ್ನು ದೇಶಾದ್ಯಂತ ಪಸರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಇತ್ತೀಚಿಗೆ ಯಳಂದೂರಿನಲ್ಲಿ ಆದರ್ಶ ಶಾಲೆಯ ವಿದ್ಯಾರ್ಥಿನಿಯರು ಕಂಸಾಳೆ ನೃತ್ಯದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಅವರಂತೆ ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು ಎಂದು ಕೃಷ್ಣಮೂರ್ತಿ ಯವರು ಕರೆ ನೀಡಿದರು.

ರಾಜ್ಯದಲ್ಲಿ 200 ಕೆಪಿಎಸ್ ಶಾಲೆಗಳ ಪ್ರಾರಂಭಕ್ಕೆ ಸರ್ಕಾರ ಮುಂದಾಗಿದ್ದು 3 ಶಾಲೆಗಳನ್ನು ಕೊಳ್ಳೇಗಾಲ ಕ್ಷೇತ್ರಕ್ಕೆ ಮಂಜೂರು ಮಾಡಿದ್ದು ಮತ್ತೆ ಮೂರು ಶಾಲೆಗಳ ಮಂಜೂರಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ 6 ಶಾಲೆಗಳನ್ನು ಮಂಜೂರು ಮಾಡಿದ್ದಾರೆ.

ಅಲ್ಲದೇ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿನ ಕುರುಬನ ಕಟ್ಟಿ ಗುಡ್ಡಗಾಡು ಪ್ರದೇಶದಲ್ಲಿ 5 ಎಕರೆ ಜಾಗದಲ್ಲಿ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ಶಾಲೆ ನಿರ್ಮಾಣಕ್ಕೆ ಅನುಮೋದನೆ ದೊರೆತ್ತಿದ್ದು, ಶೀಘ್ರವೇ ವಸತಿ ಶಾಲೆಯ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಬಿಇಒ ಮಂಜುಳಾ, ಬಿ.ಆರ್.ಸಿ ಮಹದೇವ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಪ್ರೌಢಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ್, ಪ್ರೌಢಶಾಲಾ ಸಹಶಿಕ್ಷಕರ ಸಂಘ ಅಧ್ಯಕ್ಷ ಅಕ್ಬರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಕಾರ್ಯಕ್ರಮ ನೂಡಲ್ ಅಧಿಕಾರಿ ವಿಜಯ್ ಕುಮಾರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಪಾಧ್ಯಕ್ಷರಾದ ಬುಕಾನಿ, ಸಂಸ್ಥೆಯ ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಸಿಸ್ಟರ್ ಲೆತಿಷಿಯ ಹಾಗೂ ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಅನ್ನಮ್ಮ ದೈಹಿಕ ಶಿಕ್ಷಕ ಪೀಟರ್ ಮತ್ತಿರರು ಹಾಜರಿದ್ದರು.

ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ಕಾರಂಜಿ ಸಹಕಾರಿ:ಎ.ಆರ್. ಕೃಷ್ಣಮೂರ್ತಿ Read More

ಕೊಳ್ಳೇಗಾಲ ತಾ.ಮುಳ್ಳೂರಿನಲ್ಲಿ ಗೃಹಿಣಿ ನಾಪತ್ತೆ

ಕೊಳ್ಳೇಗಾಲ: ಮನೆಯಲ್ಲಿದ್ದ ಗೃಹಿಣಿ ದಿಡೀರ್ ನಾಪತ್ತೆಯಾಗಿರುವ ಘಟನೆ ತಾಲ್ಲೂಕಿನ ಮೂಳ್ಳೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಲೇ. ಮಹೇಶ್ ಎಂಬುವವರ ಪತ್ನಿ ಪಾರ್ವತಿ ಎಂಬಾಕೆ ನಾಪತ್ತೆಯಾಗಿರುವ ಗೃಹಿಣಿ.

ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಪಾರ್ವತಿ ಮೂಳ್ಳೂರು ಗ್ರಾಮದ ಮಹೇಶ್ ಎಂಬುವವರನ್ನು ಕಳೆದ 18 ವರ್ಷಗಳ ಹಿಂದೆ ಮದುವೆಯಾಗಿದ್ದು ಮೂವರು ಹೆಣ್ಣು ಮಕ್ಕಳಿದ್ದಾರೆ.

ಈ ಹಿಂದೆ ಕೂಡಾ ಇದೇ ರೀತಿ ನಾಲ್ಕೈದು ಬಾರಿ ನಾಪತ್ತೆಯಾಗಿದ್ದಳು. ಠಾಣೆಯಲ್ಲಿ ದೂರು ದಾಖಲಾಗುತ್ತಿತ್ತು.ಆಗ ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದರು.

ಈಕೆಯ ಪತಿ 2 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿ ಮಹೇಶ್ ಕಾಲವಾದ ನಂತರ ತವರು ಮನೆ ಸೇರಿದ್ದ ಪಾರ್ವತಿಯನ್ನು ಆಕೆಯ ಪೋಷಕರು ಗ್ರಾಮದ ಯಜಮಾನರು, ಮುಖಂಡರ ಸಮ್ಮುಖದಲ್ಲಿ ಮುಳ್ಳೂರಿನಲ್ಲಿರುವ ಗಂಡನ ಮನೆಗೆ ಕರೆತಂದು ಬಿಟ್ಟಿದ್ದರು.

ಪಾರ್ವತಿ ಕಳೆದ 3 – 4 ದಿನಗಳ ಹಿಂದೆ ಕಾರಣವಿಲ್ಲದೇ ಮನೆಬಿಟ್ಟು ಹೊರಗೆ ಹೋಗಿ ಮರಳಿ ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಆತಂಕಕ್ಕೊಳಗಾಗಿದ್ದಾರೆ.

ಸೊಸೆ ಪಾರ್ವತಿಯನ್ನು ಮನೆಯ ಸುತ್ತಮುತ್ತ ಹಾಗೂ ಬಂಧು- ಬಳಗದ ಮನೆಗಳಲ್ಲಿಯೂ ಹುಡುಕಿದರೂ ಸುಳಿವು ಸಿಗದ ಕಾರಣ, ಆಕೆಯ ಅತ್ತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನಾಪತ್ತೆಯಾಗಿರುವ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಪ್ರಾರಂಭಿಸಿದ್ದಾರೆ.

ಗೃಹಿಣಿಯ ಪತ್ತೆಗೆ ಸಾರ್ವಜನಿಕರ ಸಹಕಾರದ ಅಗತ್ಯವಿದ್ದು,ಈಕೆ ಯಾರಿಗಾದರೂ ಕಂಡುಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಕೊಳ್ಳೇಗಾಲ ತಾ.ಮುಳ್ಳೂರಿನಲ್ಲಿ ಗೃಹಿಣಿ ನಾಪತ್ತೆ Read More

ಶ್ರೀಲಂಕಾದಲ್ಲಿ ಭಾರೀ ಮಳೆ;ಭೂಕುಸಿತ-ಸಾವಿನ ಸಂಖ್ಯೆ 607ಕ್ಕೆ ಏರಿಕೆ

ಕೊಲೊಂಬೊ: ಈಗಾಗಲೇ ಭಾರಿ ಮಳೆ ಪ್ರವಾಹ ಮತ್ತು ಭೂ ಕುಸಿತಕ್ಕೆ ನಲುಗಿರುವ ಶ್ರೀಲಂಕಾದಲ್ಲಿ ಮತ್ತೆ ಬಾರಿ ಮಳೆಯಾಗಿದ್ದು, ಭಾರೀ ಭೂಕುಸಿತವಾಗಿದೆ.

ದಿತ್ವಾ ಚಂಡಮಾರುತದಿಂದ ಉಂಟಾದ ವಿಕೋಪಕ್ಕೆ ನಲುಗಿರುವ ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 607ಕ್ಕೆ ಏರಿದೆ.
ಭಾರಿ ಮಳೆಯಿಂದಾಗಿ ಬೆಟ್ಟಗಳು ಮತ್ತಷ್ಟು ನೀರಿನಿಂದ ಆವೃತ್ತವಾಗಿ ಅಸ್ಥಿರಗೊಳ್ಳಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಕಳೆದ 24 ಗಂಟೆಗಳಿಂದ ಸುಮಾರು 150ಮಿಲಿ ಮೀಟರ್​ಗಿಂತ ಹೆಚ್ಚಿನ ಮಳೆಯಾಗಿದ್ದು, ಇದು ಹೀಗೇ ಮುಂದುವರಿದರೆ, ಭೂ ಕುಸಿತ‌ ಹೆಚ್ಚಾಗಲಿದೆ.
ಈ ಪ್ರಕೃತಿ ವಿಕೋಪದಿಂದ 607 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ದೃಢಪಡಿಸಿದೆ. ಈ ಹಿಂದೆ ಲೆಕ್ಕಕ್ಕೆ ಸಿಗದ ಅನೇಕರು ಭೂ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ, ಆದರೆ ಸಂತ್ರಸ್ತರ ಸಂಖ್ಯೆ ಎರಡು ಮಿಲಿಯನ್‌ಗಿಂತಲೂ ಹೆಚ್ಚಾಗಿದೆ.
ದಾಖಲೆಯ ಮಳೆಯಿಂದಾಗಿ ಪ್ರವಾಹ ಮತ್ತು ಮಾರಕ ಭೂಕುಸಿತಗಳು ಸಂಭವಿಸಿವೆ. ಈ ಪ್ರಕೃತಿ ವಿಕೋಪವು ಇತಿಹಾಸದಲ್ಲೇ ಅತ್ಯಂತ ಸವಾಲಿನ ನೈಸರ್ಗಿಕ ವಿಕೋಪ ಎಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ತಿಳಿಸಿದ್ದಾರೆ.
ಶ್ರೀಲಂಕಾದ ಸೇನೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆಗೆ ಸಹಾಯ ಮಾಡಲು ಸಾವಿರಾರು ಸೈನಿಕರನ್ನು ನಿಯೋಜಿಸಿದೆ.

ಸಂತ್ರಸ್ತರಿಗೆ ಮನೆಗಳನ್ನು ಪುನರ್ನಿರ್ಮಿಸಲು ಮತ್ತು ಜೀವನೋಪಾಯವನ್ನು ಕಾಪಾಡಿಕೊಳ್ಳಲು ಉದಾರ ಪರಿಹಾರವನ್ನು ನೀಡಲು ದಿಸಾನಾಯಕೆ ಹಲವು ಕ್ರಮಗಳನ್ನು ಘೋಷಿಸಿದ್ದಾರೆ.

ಅವಘಡದಲ್ಲಿ ಸಿಲುಕಿಕೊಂಡಿದ್ದ ಸುಮಾರು 300 ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

ಶ್ರೀಲಂಕಾದಲ್ಲಿ ಭಾರೀ ಮಳೆ;ಭೂಕುಸಿತ-ಸಾವಿನ ಸಂಖ್ಯೆ 607ಕ್ಕೆ ಏರಿಕೆ Read More

ಮದುವೆ ಆಗುವುದಾಗಿ ನಂಬಿಸಿ ವಕೀಲೆಗೆ ಮೋಸ; 5 ಮಂದಿ ವಿರುದ್ಧ ‌ಎಫ್ ಐ ಆರ್

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನಲೆ ವಕೀಲ ಹಾಗೂ ಅವರ ಕುಟುಂಬದ 5 ಮಂದಿ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಆಗುವುದಾಗಿ ವಂಚಿಸಿದ ನವೀನ್ ಪೊನ್ನಯ್ಯ ಹಾಗೂ ಅವರ ತಂದೆ ಪಿ.ಕೆ.ಪೊನ್ನಯ್ಯ,ತಾಯಿ ಎಂ.ಬಿ.ಕುಮಾರಿ,ಪತ್ನಿ ಲಕ್ಷಿತ್ ಚಿಂಗಪ್ಪ,ದೊಡ್ಡಮ್ಮನ ಮಗಳು ಸುಮ್ಮ ಹಾಗೂ ಬೆಳ್ಳಿಯಪ್ಪ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿಯೊಂದರಲ್ಲಿ ಕಾಜಲ್ ಪ್ರಸಾದ್ ಅವರು ಲೀಗಲ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದು ವಕೀಲ ನವೀನ್ ಪೊನ್ನಯ್ಯ ಜೊತೆ ಹಲವು ವರ್ಷಗಳಿಂದ ಸಂತ್ರಸ್ತ ವಕೀಲೆಗೆ ಪರಿಚಯ ಇತ್ತು.
ನವೀನ್ ಪೊನ್ನಯ್ಯ ಅವರು ತಮ್ಮಪತ್ನಿ ಜೊತೆ ಹೊಂದಾಣಿಕೆ ಇಲ್ಲವೆಂದು ಕಾರಣ ನೀಡಿ ವಿಚ್ಛೇದನ ಪಡೆದಿರುವುದಾಗಿ ವಕೀಲೆ ಜೊತೆ ಹೆಚ್ಚು ಒಡನಾಟ ಬೆಳೆಸಿಕೊಂಡಿದ್ದಾರೆ.
ನವೀನ್ ಪೊನ್ನಯ್ಯ ಅವರ ತಾಯಿ ಕುಮಾರಿ ಅವರು ವಕೀಲೆ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡಿ ಎಂಗೇಜ್ ಮೆಂಟ್ ಮಾಡಿಕೊಂಡು ಡಿಸೆಂಬರ್ 7 ರಂದು ವಿವಾಹ ನಿಶ್ಚಯಿಸಿದ್ದಾರೆ.
ಮದುವೆ ಫಿಕ್ಸ್ ಆದ ಹಿನ್ನಲೆ ಇಬ್ಬರೂ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾರೆ.ಕೆಲವು ದಿನಗಳ ಹಿಂದೆ ನವೀನ್ ಪೊನ್ನಯ್ಯ ಮೊಬೈಲ್ ಮೂಲಕ ತನಗಿನ್ನೂ ವಿಚ್ಛೇದನ ಆಗಿಲ್ಲ,ಪರಿಹಾರ ವಿಚಾರ ಕಂಡುಕೊಳ್ಳುವುದಾಗಿ ಹಾಗೂ ನಮ್ಮ ಯೋಜನೆಯಂತೆ ಮದುವೆ ನಡೆಯಲಿದೆ ಎಂದು ಮೆಸೇಜ್ ಮಾಡಿ ಸ್ವಿಚ್ ಆಫ್ ಮಾಡಿದ್ದಾರೆ.
ಇದೀಗ ಮದುವೆ ಆಮಂತ್ರಣಪತ್ರಿಕೆಗಳನ್ನು ವಿತರಿಸಲಾಗಿದೆ.ಆದರೆ ನವೀನ್ ಪೊನ್ನಯ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ.ತಂದೆ ತಾಯಿ ಜೊತೆ ಮಾತನಾಡಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಕೋರ್ಟ್ ನಿಂದ ಸುಳ್ಳು ಡಿಕ್ರಿ ಪಡೆದು ನನ್ನನ್ನ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿರುವ ನವೀನ್ ಪೊನ್ನಯ್ಯ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ವಕೀಲೆ ಪ್ರಕರಣ ದಾಖಲಿಸಿದ್ದಾರೆ.

ಮದುವೆ ಆಗುವುದಾಗಿ ನಂಬಿಸಿ ವಕೀಲೆಗೆ ಮೋಸ; 5 ಮಂದಿ ವಿರುದ್ಧ ‌ಎಫ್ ಐ ಆರ್ Read More

ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ- ಸಿಎಂ ಬಣ್ಣನೆ

ಬೆಂಗಳೂರು: ಅಂಬೇಡ್ಕರ್ ಅವರು ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಅಪರೂಪದ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ ಗೌರವ ತಂದುಕೊಡಲು ಪ್ರಯತ್ನಿಸಿದರಲ್ಲದೇ, ದೇಶದಲ್ಲಿ ಸಮಾಜಿಕ ನ್ಯಾಯ ಸಿಗದವರ ಪರವಾಗಿ ಹೋರಾಟ ಮಾಡಿದವರು ಅಂಬೇಡ್ಕರ್ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಮಹಾ ಮಾನವತಾವಾದಿ ಬಾಬಾ ಸಾಹೇಬ ಡಾ ll ಬಿ ಆರ್ ಅಂಬೇಡ್ಕರ್ ರವರ 69 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಿಎಂ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂವಿಧಾನ ಶಿಲ್ಪಿ. ಅವರು ದೇಶಕ್ಕೆ ಎಂಥ ಸಂವಿಧಾನದ ಅಗತ್ಯವಿದೆ ಎಂದು ಚಿಂತಿಸಿ , ಇತರೆ ದೇಶಗಳ ಸಂವಿಧಾನವನ್ನು ಅಭ್ಯಾಸಿಸಿ,ದೇಶಕ್ಕೆ ಅಗತ್ಯವಿರುವ ಸಂವಿಧಾನವನ್ನು ಕೊಟ್ಟಿದ್ದಾರೆ.ನಮ್ಮ ಸಾಮಾಜಿಕ ವ್ಯವಸ್ಥೆ ಬದಲಾವಣೆಯಾಗಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರಕಬೇಕು ಹಾಗೂ ಸಾಮಾಜಿಕ ನ್ಯಾಯ ಸ್ಥಾಪನೆಯಾಗಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ನಮ್ಮ ಸರ್ಕಾರ ಶಾಲಾ ಕಾಲೇಜು ಮಕ್ಕಳಿಗೆ ಇದರ ಅರಿವು ಮೂಡಿಸಲು ಸಂವಿಧಾನ ಪೀಠಿಕೆಯನ್ನು ಬೋಧಿಸಲಾಗುತ್ತಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕು ಮತ್ತು ಬಾಧ್ಯತೆಗಳನ್ನು ನೀಡಿದೆ. ಸಂವಿಧಾನದ ಧ್ಯೇಯೋದ್ದೇಶಗಳು ಎಲ್ಲರಿಗೂ ಅರ್ಥವಾಗಬೇಕು ಎಂಬ ಕಾರಣದಿಂದ ಸರ್ಕಾರ ಇದನ್ನು ಜಾರಿ ಮಾಡಿದೆ ಎಂದು ಹೇಳಿದರು.
ಪರಿನಿರ್ವಾಣ ದಿನದಂದು ನಾವು ಅಂಬೇಡ್ಕರ್ ಅವರನ್ನು ಸ್ಮರಿಸುವ ಕೆಲಸವನ್ನು ಮಾಡಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಹುಟ್ಟುವಾಗ ಹಿಂದೂವಾಗಿದ್ದೆ, ಸಾಯುವಾಗ ಹಿಂದೂವಾಗಿ ಸಾಯಲಾರೆ. ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಪಟ್ಟು, ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದೇನೆ ಎಂದು ಹೇಳಿದ್ದರು, ಹಿಂದೂ ಧರ್ಮದಲ್ಲಿರುವ ಸಾಮಾಜಿಕ ವ್ಯವಸ್ಥೆಗೆ ರೋಸಿಹೋಗಿ ಹೀಗೆ ಮಾಡಿದ್ದರು ಎಂದು ಸಿದ್ದರಾಮಯ್ಯ ನುಡಿದರು.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸಬೇಕೆಂದು ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಮನುವಾದಿಗಳಾಗಿದ್ದಾರೆ ಎಂದು ಛೇಡಿಸಿದರು.

ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ- ಸಿಎಂ ಬಣ್ಣನೆ Read More

ಟ್ರಾಕ್ಟರ್ ಹರಿದು ೧೦ ಕುರಿಗಳು ದಾರುಣ ಸಾವು

ಯಾದಗಿರಿ: ರಸ್ತೆಯಲ್ಲಿ ಹೋಗುತ್ತಿದ್ದ‌ ಕುರಿಗಳ ಮೇಲೆ ಟ್ರ್ಯಾಕ್ಟರ್ ಹರಿದು 10 ಕುರಿಗಳು ದಾರುಣವಾಗಿ ಮೃತಪಟ್ಟ‌ ಘಟನೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನಲ್ಲಿ ನಡೆದಿದೆ.
ಈ ಘಟನೆ ಗೋಗಿ ಮತ್ತು ಹೊಸಕೇರಾ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ೫ ಗಂಟೆ ವೇಳೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಇನ್ನೂ ೬ ಕುರಿಗಳನ್ನು ಗೋಗಿ ಪಶು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸುರಪುರ ತಾಲ್ಲೂಕಿನ ಬಾದ್ಯಾಪೂರ ಗ್ರಾಮದ ಸೋಮಲಿಂಗಪ್ಪ ಪೂಜಾರಿ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು,ಕುರಿಗಳಿಂದಲೇ ಬದುಕು ಕಟ್ಟಿಕೊಂಡಿದ್ದ ಅವರು ಕುರಿಗಳ ಸಾವಿನಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಸ್ಥಳಕ್ಕೆ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಗಾಣಿಕೆದಾರರ ಮಹಾ ಮಂಡಳಿ ನಿರ್ದೇಶಕ ಶಾಂತಗೌಡ ನಾಗನಟಗಿ ಮತ್ತು ತಾಲ್ಲೂಕು ಪಶು ಆಸ್ಪತ್ರೆ ವೈಧ್ಯಾಧಿಕಾರಿ ಡಾ, ಅಣ್ಣಾರಾವ್ ಪಾಟೀಲ್ ಭೇಟಿ ನೀಡಿ, ಕುರಿಗಾರರಿಗೆ ಸಾಂತ್ವಾನ ಹೇಳಿ, ನಿಗಮದ ಅನುಗ್ರಹ ಯೋಜನೆಯಡಿಯಲ್ಲಿ ಪ್ರತಿ ಕುರಿಗೆ ೭೫೦೦ ರೂ, ಸಹಾಯಧನ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ..

ಟ್ರಾಕ್ಟರ್ ಹರಿದು ೧೦ ಕುರಿಗಳು ದಾರುಣ ಸಾವು Read More

ಎಸ್ ಸಿ ಜನರ ಮೇಲೆ ದೌರ್ಜನ್ಯವಾದರೆ ತಕ್ಷಣ ಎಫ್ಐಆರ್ ದಾಖಲಿಸಿ- ವಡೆಪಲ್ಲಿ ರಾಮಚಂದರ್

ಮೈಸೂರು: ಪರಿಶಿಷ್ಟ ಜಾತಿಯ ಜನರ ಮೇಲೆ ದೌರ್ಜನ್ಯ ನಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಭದ್ರತೆ ಒದಗಿಸಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸದಸ್ಯ ವಡೆಪಲ್ಲಿ ರಾಮಚಂದರ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಡಿ ದೇವರಾಜ ಅರಸು ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪರಿಶಿಷ್ಟ ಜಾತಿಯ ಜನರಿಗೆ ಇರುವ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ಪಾರದರ್ಶಕವಾಗಿ ತಲುಪಿಸಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶಿಷ್ಟ ಜಾತಿಯ ಜನರಿಗೆ ಮುದ್ರಾ ಯೋಜನೆ, ಎಂ ಎಸ್ ಎಂ ಇ ಯೋಜನೆ, ಶೈಕ್ಷಣಿಕ ಶಾಲಾ ಯೋಜನೆ, ಸ್ಟಾರ್ಟ್ ಆಫ್ ಮುಂತಾದ ಯೋಜನೆಗಳಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯವನ್ನು ನೀಡಿ ಅವರ ಏಳಿಗೆಗೆ ಕ್ರಮ ಕೈಗೊಳ್ಳಬೇಕು.
ಸಾಲ ನೀಡಲು ಅವರನ್ನು ಬ್ಯಾಂಕುಗಳು ಅಲೆದಾಡಿಸಬಾರದು ಈ ಬಗ್ಗೆ ಕ್ರಮ ವಹಿಸಬೇಕು. ಬ್ಯಾಂಕುಗಳು ಸಾಲ ನೀಡುವಲ್ಲಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ದೂರುಗಳು ಬರುತ್ತಿವೆ. ಮುಂದೆ ಇಂತಹ ದೂರುಗಳಿಗೆ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ
ವಡೆಪಲ್ಲಿ ರಾಮಚಂದರ್ ಸೂಚಿಸಿದರು.

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ನಿರ್ದೇಶಕರಾದ ಸುನಿಲ್ ಕುಮಾರ್ ಬಾಬು ಅವರು ಮಾತನಾಡಿ ಸದಸ್ಯರು ಪರಿಶಿಷ್ಟ ಜಾತಿಗಳ ಜನರ ಹಕ್ಕುಗಳನ್ನು ರಕ್ಷಿಸುವ ಹಾಗೂ ಸೌಲಭ್ಯಗಳನ್ನು ಕಲ್ಪಿಸುವಂತೆ ನೋಡಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಸಮಿತಿಯ ಸದಸ್ಯರು ನ್ಯಾಯಿಕ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಕಳೆದ ವರ್ಷ 69 ರಷ್ಟು ಫಲಿತಾಂಶ ಬಂದಿದೆ. ಇದು ಕಡಿಮೆ ಆಗಿದೆ. ಎಸ್ ಎಸ್ ಎಲ್ ಸಿ ಯಲ್ಲಿ ಎಸ್ ಸಿ ಹಾಗೂ ಎಸ್ ಟಿ ವಿಧ್ಯಾರ್ಥಿಗಳ ಉತ್ತೀರ್ಣ ಮಟ್ಟವನ್ನು ಹೆಚ್ಚಳ ಮಾಡಲು ಯಾವ ಯಾವ ಕ್ರಮಗಳನ್ನು ಹಮ್ಮಿಕೊಂಡಿದ್ದೀರಿ ಎಂಬ ಬಗ್ಗೆ ಡಿಡಿಪಿಐ ಅವರಿಂದ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಜಿಲ್ಲೆಯಲ್ಲಿ ಎಸ್ ಸಿ ಹಾಗೂ ಎಸ್ ಟಿ ನಿವೇಶನ ರಹಿತರ ಸರ್ವೇ ಮಾಡಲಾಗಿದ್ದು, ಇವರಿಗೆ ಹಂತ ಹಂತವಾಗಿ ನಿವೇಶನ ನೀಡಲು ಕ್ರಮ ವಹಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ನಿವೇಶನ ರಹಿತರು ಹೆಚ್ಚು ಇದ್ದಾರೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಅವರು ಮಾತನಾಡಿ,ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಶಿಷ್ಟ ಜಾತಿಗಳ ಮಾನಿಟರಿಂಗ್ ಕಮಿಟಿ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ. ಜಿಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರೀ ಮೆಟ್ರಿಕ್ 45 ಹಾಗೂ ಪೋಸ್ಟ್ ಮೆಟ್ರಿಕ್ 36 ಹಾಸ್ಟೆಲ್ ಗಳು ಇವೆ ಎಂದು ತಿಳಿಸಿದರು.

ಸಭೆಯಲ್ಲಿ ಎನ್ ಸಿ ಎಸ್ ಸಿ ಸೂರಜ್ ಕುಮಾರ್ ಯಾದವ್, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಾದ ವಿಷ್ಣುವರ್ಧನ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಗಳಾದ ಡಾ ಪಿ ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಎಸ್ ಸಿ ಜನರ ಮೇಲೆ ದೌರ್ಜನ್ಯವಾದರೆ ತಕ್ಷಣ ಎಫ್ಐಆರ್ ದಾಖಲಿಸಿ- ವಡೆಪಲ್ಲಿ ರಾಮಚಂದರ್ Read More

ಕೆಐಎಡಿಬಿ ಹೊಸ ಬಹುಮಹಡಿ ಕಟ್ಟಡ ಉದ್ಘಾಟನೆ

ಬೆಂಗಳೂರು: ನಗರದ ಗಾಂಧಿನಗರದಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹೊಸ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಉದ್ಘಾಟಿಸಿದರು.
ಗಾಂಧಿನಗರದ ಆಚಾರ್ಯ ತುಳಸಿ ಮಾರ್ಗದಲ್ಲಿ 32 ಕೋಟಿ ವೆಚ್ಚದಲ್ಲಿ ಈ ಬಹುಮಹಡಿ ಕಟ್ಟಡವನ್ನು ನಿರ್ಮಿಸಲಾಗಿದೆ.
ಒಟ್ಟು 2,618 ಚದರ ಮೀಟರ್ ಅಳತೆಯ ನಿವೇಶನದಲ್ಲಿ ತಲೆ ಎತ್ತಿರುವ ಈ ಕಟ್ಟಡವು ಎರಡು ನೆಲ ಅಂತಸ್ತುಗಳು, ನೆಲ ಅಂತಸ್ತು, ಐದು ಮಹಡಿಗಳು ಹಾಗೂ ತಾರಸಿ ಮಹಡಿಯನ್ನು ಒಳಗೊಂಡಿದೆ.
ಲೋಯರ್ ಬೇಸ್ ಮೆಂಟ್ ನಲ್ಲಿ 58 ಕಾರುಗಳು ಹಾಗೂ ಅಪ್ಪರ್ ಬೇಸ್ ಮೆಂಟ್ ನಲ್ಲಿ 38 ಕಾರುಗಳ ನಿಲುಗಡೆಗೆ ಜಾಗ ಕಲ್ಪಿಸಲಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು.
ಇದೇ ವೇಳೆ, ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ ಅವರು ಕೆ.ಐ.ಎ.ಡಿ.ಬಿ.ಯ 2 ಕೋಟಿ ರೂ ಲಾಭಾಂಶವನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಹಸ್ತಾಂತರಿಸಿದರು.
ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಈ ಕಟ್ಟಡ ಕಟ್ಟಲು ಶಾಸಕ ಆರ್.ವಿ.ದೇಶಪಾಂಡೆ ಅವರು ತೀರ್ಮಾನ ತೆಗೆದುಕೊಂಡಿದ್ದರು.ಹಾಗಾಗಿ ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ ಮತ್ತಿತರರು ಉಪಸ್ಥಿತರಿದ್ದರು

ಕೆಐಎಡಿಬಿ ಹೊಸ ಬಹುಮಹಡಿ ಕಟ್ಟಡ ಉದ್ಘಾಟನೆ Read More