ಇಸ್ರೇಲ್ ಪ್ರಧಾನಿ ನೆತನ್ಯಾಹು ಭೇಟಿಯಾದ ಜೈಶಂಕರ್

ಇಸ್ರೇಲ್: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಜೇರುಸೆಲಂ ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿ ಅನೇಕ ಗಹನ‌ ವಿಷಯಗಳನ್ನು ಚರ್ಚಿಸಿದ್ದಾರೆ.

ತಂತ್ರಜ್ಞಾನ, ಆರ್ಥಿಕತೆ, ಸಂಪರ್ಕ ಮತ್ತು ಭದ್ರತೆಯಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಈ ವೇಳೆ ಚರ್ಚೆ ನಡೆಸಿದ್ದಾರೆ.

ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆ ಸದೃಢವಾಗಿ ಬೆಳೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಅವರನ್ನು ಜೇರುಸೆಲಂನಲ್ಲಿ ಬುಧವಾರ ಸಂಜೆ ಭೇಟಿ ಮಾಡಲಾಯಿತು. ಪ್ರಧಾನಿ ಮೋದಿ ಅವರಿಗೆ ಶುಭಾಶಯ ತಿಳಿಸಿದರು. ತಂತ್ರಜ್ಞಾನ, ಆರ್ಥಿಕತೆ, ಕೌಶಲ್ಯ ಮತ್ತು ಪ್ರತಿಭೆ, ಸಂಪರ್ಕ ಮತ್ತು ಭದ್ರತೆಯ ಸಹಕಾರದ ಕುರಿತು ಆಳವಾದ ಚರ್ಚೆ ನಡೆಸಲಾಯಿತು ಎಂದು ಜೈಶಂಕರ್ ತಿಳಿಸಿದ್ದಾರೆ.

ಪ್ರಾದೇಶಿಕ ಮತ್ತು ಜಾಗತಿಕ ಅಭಿವೃದ್ಧಿಯ ಕುರಿತು ಪರಸ್ಪರ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಾಯಿತು. ಈ ದ್ವಿಪಕ್ಷೀಯ ಸಂಬಂಧವು ಮತ್ತಷ್ಟು ಬಲವಾಗುವ ಕುರಿತು ವಿಶ್ವಾಸ ವ್ಯಕ್ತಪಡಿಸಲಾಯಿತು ಎಂದಿದ್ದಾರೆ.

ಭಾರತದ ಪ್ರವಾಸಕ್ಕೆ ಇಸ್ರೇಲ್​ ಪ್ರಧಾನಿ ನೆತನ್ಯಾಹು ಸಿದ್ಧತೆ ನಡೆಸುತ್ತಿರುವ ಸಮಯದಲ್ಲಿ ಜೈಶಂಕರ್​ ಅವರನ್ನು ಭೇಟಿಯಾಗಿದ್ದಾರೆ. ನೆತನ್ಯಾಹು ಮತ್ತು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಫೋನ್​ ಕರೆಯಲ್ಲಿ ಮಾತನಾಡಿದ್ದು, ಇದಾದ ಬಳಿಕ ಇಬ್ಬರು ನಾಯಕರು ಶೀಘ್ರದಲ್ಲೇ ಭೇಟಿ ಮಾಡುವ ಕುರಿತು ಚರ್ಚಿಸಿದ್ದಾರೆ.

ಇದೆ ವೇಳೆ ವಿದೇಶಾಂಗ ಸಚಿವರು ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಭೇಟಿ ಮಾಡಿದರು ಮತ್ತು ಅವರ ಇಸ್ರೇಲಿನ ಗಿಡಿಯಾನ್ ಸಾರ್ ಮತ್ತು ಆರ್ಥಿಕ ಮತ್ತು ಕೈಗಾರಿಕಾ ಸಚಿವ ನಿರ್ ಬರ್ಕತ್ ಅವರೊಂದಿಗೂ ಚರ್ಚೆ ನಡೆಸಿದ್ದಾರೆ.

ಭಾರತ ಮತ್ತು ಇಸ್ರೇಲ್ ಪೂರಕ ಪಾಲುದಾರರು, ಅದರಿಂದ ಹೆಚ್ಚಿನದನ್ನು ನಾವು ಪಡೆದುಕೊಳ್ಳಬೇಕು, ಗಾಜಾ ಶಾಂತಿ ಯೋಜನೆಗೆ ಭಾರತದ ಬೆಂಬಲವನ್ನು ಅವರು ಪುನರುಚ್ಚರಿಸಿದ್ದಾರೆ ಎಂದು ಜೈಶಂಕರ್ ತಿಳಿಸಿದ್ದಾರೆ.