ನವದೆಹಲಿ: ವ್ಯಕ್ತಿಯೊಬ್ಬ ತನ್ನ ನಾಲ್ಕು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವದೆಹಲಿಯ ರಂಗಪುರಿ ಪ್ರದೇಶದಲ್ಲಿ ನಡೆದಿದೆ.
ಮನೆಯೊಳಗಿಂದ ಕೆಟ್ಟ ವಾಸನೆ ಬರುತ್ತಿದ್ದನ್ನು ಸಹಿಸಲಾಗದೆ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತರು ರಂಗಪುರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಎಲ್ಲರೂ ಮೂಲತಃ ಬಿಹಾರದ ಛಪ್ರಾ ಜಿಲ್ಲೆಯ ನಿವಾಸಿಗಳು.
ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಹೀರಾಲಾಲ್ ಶರ್ಮಾ (46) ಮತ್ತು ಅವರ ಪುತ್ರಿಯರಾದ ನೀತು (26), ನಿಕ್ಕಿ (24), ನೀರೂ( 23), ಮತ್ತು ನಿಧಿ (20) ಎಂದು ಗುರುತಿಸಲಾಗಿದೆ.
ನಾಲ್ಕೂ ಹೆಣ್ಣು ಮಕ್ಕಳು ಜತೆಗೆ ಅವರಲ್ಲಿ ಇಬ್ಬರು ವಿಕಲಚೇತನರು,ಮಕ್ಕಳ ತಾಯಿ ಈಗಾಗಲೇ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದು ತಂದೆ ಮಕ್ಕಳನ್ನು ಮದುವೆ ಮಾಡಲಾಗದೆ ಅವರ ಔಷಧಿಗೆ ಹಣ ಹೊಂದಿಸಲಾಗದೆ ಅಸಹಾಯಕನಾಗಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ
ಪೊಲೀಸರು ಮನೆಯ ಬೀಗ ಒಡೆದು ಎಲ್ಲಾ ಶವಗಳನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮನೆಯ ಒಂದು ರೂಮ್ ನಲ್ಲಿ ತಂದೆಯ ಶವ ಪತ್ತೆಯಾಗಿದೆ.ಮತ್ತೊಂದು ಕೊಠಡಿಯಲ್ಲಿ ನಾಲ್ಕು ಹೆಣ್ಣು ಮಕ್ಕಳ ದೇಹ ಪತ್ತೆಯಾಗಿದೆ.
ಜತೆಗೆ ಮೂರು ಪ್ಯಾಕೆಟ್ ಸಲ್ಫರ್,ಒಂದು ಗ್ಲಾಸ್,ಸ್ಪೂನ್ ಸಿಕ್ಕಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.