ಮೈಸೂರು: ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ಧ್ಯಾನ, ಆಯುರ್ವೇದ ಆಹಾರ ಕ್ರಮಗಳು ಪ್ರಸ್ತುತ ದಿನಗಳಲ್ಲಿ ಅಗತ್ಯವಾಗಿವೆ ಎಂದು
ಆಯುರ್ವೇದ ಹಿರಿಯ ವೈದ್ಯರಾದ ಡಾ. ಚಂದ್ರಶೇಖರ್ ಹೇಳಿದರು.
ನಗರದ ಚಾಮುಂಡಿಪುರಂನಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಆಯುರ್ವೇದ ಗಿಡಗಳನ್ನು ವಿತರಿಸಿ, ಆಯುರ್ವೇದದಿಂದ ಆಗುವ ಉಪಯೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಯುರ್ವೇದ ವೈದ್ಯ ಪದ್ಧತಿ ಕಾಯಿಲೆ ಗುಣಪಡಿಸುವ ಜತೆಗೆ ಆರೋಗ್ಯಯುತ ಜೀವನ ನಡೆಸುವ ಕ್ರಮವನ್ನು ಕಲಿಸುತ್ತದೆ,ಆಯುರ್ವೇದದ ಬಗ್ಗೆ ಜನರಿಗೆ ತಿಳುವಳಿಕೆ ಬರಲು ಹೆಚ್ಚಿನ ಪ್ರಚಾರದ ಅಗತ್ಯ ಇದೆ ಎಂದು ಡಾ.ಚಂದ್ರಶೇಖರ ತಿಳಿಸಿದರು.
ಮಾಜಿ ಮಹಾಪೌರರಾದ ಸಂದೇಶ ಸ್ವಾಮಿ ಅವರು ಮಾತನಾಡಿ, ಆರೋಗ್ಯಕ್ಕಾಗಿ ಆಸ್ಪತ್ರೆಗಳನ್ನು ಅವಲಂಬಿಸಬಾರದು. ಅಡುಗೆ ಮನೆಯ ಸಾಂಬಾರ ಬಟ್ಟಲಿನಲ್ಲಿ ಆರೋಗ್ಯ ಕಾಯುವ ಪದಾರ್ಥಗಳಿರುತ್ತವೆ. ಅವುಗಳ ಸರಿಯಾದ ಸೇವನೆಯ ಮಹತ್ವ ಅರಿಯಬೇಕು ಎಂದು ಸಲಹೆ ನೀಡಿದರು.
ಆಯುರ್ವೇದ ಸಸ್ಯಗಳ ಬಳಕೆಯಿಂದ ದೀರ್ಘಾವಧಿ ಕಾಯಿಲೆಗಳಿಗೆ ತುತ್ತಾಗುವುದನ್ನು ತಡೆಯ ಬಹುದು. ಹೀಗಾಗಿ ಜನಸಾಮಾನ್ಯರಿಗೆ ದಿನ ನಿತ್ಯ ಉಪಯೋಗಕ್ಕೆ ಬರುವ ಗಿಡಮೂಲಿಕೆ ಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ
ಆಯುರ್ವೇದ ಸಸ್ಯಗಳಾದ ಅಮೃತ ಬಳ್ಳಿ, ಕೃಷ್ಣ ತುಳಸಿ, ರಾಮ ತುಳಸಿ, ಬೆಟ್ಟದ ನೆಲ್ಲಿಕಾಯಿ, ದೊಡ್ಡಿಪತ್ರೆ, ಅಗಸೆ ಗಿಡ, ನೇರಳೆ ಗಿಡ, ಬೇವಿನ ಗಿಡ, ಅರಿಶಿನ ಗಿಡ ಸೇರಿದಂತೆ ಇನ್ನಿತರ ಗಿಡ ಗಳನ್ನು ವಿತರಣೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಖಜಾಂಚಿ ನಾಗರಾಜ್, ಉದ್ಯಮಿ ಜಯರಾಮ್,ಕೆ ಎಸ್ ವಿಶ್ವನಾಥ್,ದೂರ ರಾಜಣ್ಣ, ಸುಚಿಂದ್ರ ಆನಂದ, ಪುರುಷೋತ್ತಮ್, ಜತ್ತಿ ಪ್ರಸಾದ್, ಆದರ್ಶ್, ಮತ್ತಿತರರು ಹಾಜರಿದ್ದರು.

