ರಾಜ ಮನೆತನದ ಕಾಯೋ ಶ್ರೀ ಗೌರಿ ಗೀತೆಗೆ ಜೀವ ತುಂಬಿದ ಶ್ರೀ ಹರ್ಷ, ರಶ್ಮಿ

Spread the love

ಮೈಸೂರು: ಮೈಸೂರು ರಾಜ ಮನೆತನದ ಗೀತೆ ಕಾಯೋ ಶ್ರೀ ಗೌರಿ ಗಾಯನದ ಮೂಲಕ ಕನ್ನಡ ಖ್ಯಾತ ಗಾಯಕರಾದ ಮೈಸೂರಿನ ಶ್ರೀ ಹರ್ಷ ಹಾಗೂ ರಶ್ಮಿ ಚಿಕ್ಕಮಗಳೂರು ಅವರು ಗಾನಸುಧೆ ಹರಿಸಿ ಎಲ್ಲರ ಮನಸೆಳೆದರು.

ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ಗುರುವಾರ ಹಲವು ಭಾವಗೀತೆಗಳ ಮೂಲಕ ಅವರು ಪ್ರೇಕ್ಷಕರ ಮನ ರಂಜಿಸಿದರು.

ಕುವೆಂಪುರವರ ಬಾ ಇಲ್ಲಿ ಸಂಭವಿಸು ನಿತ್ಯಾವತಾರ, ಎಲ್ಲಿ ಜಾರಿತು ಮನವೂ ಎಲ್ಲೆ ಮೀರಿತು, ನಿಸ್ಸಾರ್ ಅಹಮದ್ ಅವರ ನಿತ್ಯೋತ್ಸವ ತಾಯಿ ನಿತ್ಯೋತ್ಸವ, ಕುರಿಗಳು ಸರ್ ಕುರಿಗಳು, ನರಸಿಂಹ ಸ್ವಾಮಿ ಅವರ ದೀಪವು ನಿನ್ನದೇ ಗಾಳಿಯೂ ನಿನ್ನದೇ, ಜಿ ಪಿ ರಾಜರತ್ನಂ ಹೆಂಡ ಹೆಂಡ್ತಿ ಕನ್ನಡ ಪದದೂಳ್ ಅವರ ಹೀಗೆ ಹಲವು ಕನ್ನಡ ಸಾಹಿತ್ಯ ಲೋಕದ ಖ್ಯಾತ ಕವಿಗಳ ಭಾವಗೀತೆಗಳನ್ನು ಹಾಡಿ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿದರು.

ಬಳಿಕ ಮೈಸೂರಿನ ಹೆಸರಾಂತ ಭರತನಾಟ್ಯ ಕಲಾವಿದ ಶ್ರೀಧರ್ ಜೈನ್ ತಂಡದಿಂದ ಪ್ರದರ್ಶಿಸಿದ ಶಿವ ತಾಂಡವ ನೃತ್ಯಕ್ಕೆ ಜನ ಚಪ್ಪಾಳೆ ತಟ್ಟಿ ಖುಷಿ ಪಟ್ಟರು.

ಇದಕ್ಕೂ ಮುನ್ನ ಡಾ.ಮೋಹಿಸಿನ್ ಖಾನ್ ಮತ್ತು ತಂಡದಿಂದ ಸಿತಾರ್ ವಾದನ ನಡೆಯಿತು, ಮೈಸೂರಿನ ವಿದ್ವಾನ್ ರಘು ನಂದನ್ ಹಾಗೂ ಸುಮುಖ ತಂಡದಿಂದ ಕರ್ನಾಟಕ ಶಾಸ್ತ್ರಿಯ ಸಂಗೀತಕ್ಕೆ ಜನ ತಲೆದೂಗಿದರು.

ಇದೇ ವೇಳೆ ಅರಮನೆ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಂಪತ್ ಕೃಷ್ಣ ಅಯ್ಯಂಗಾರ್ ದಂಪತಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಉಪ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ, ಪರಿಷತ್ ಸದಸ್ಯರಾದ ಶಿವಕುಮಾರ್ ಹಾಗೂ ಉಪ ಸಮಿತಿ ಅಧ್ಯಕ್ಷರು, ಸದಸ್ಯರು‌ ಮತ್ತಿತರ ಗಣ್ಯರು ಹಾಜರಿದ್ದರು.