ಮೈಸೂರು: ಮಾನವ ಕಳ್ಳಸಾಗಾಣೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಿ,
ಆರೋಗ್ಯಕರ ಸಮಾಜ ಕಟ್ಟುವಲ್ಲಿ ಪೊಲೀಸರ ಪಾತ್ರ ಬಹಳ ಮುಖ್ಯ ಎಂದು
ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ಚೆನ್ನಬಸವಣ್ಣ ಅವರು ತಿಳಿಸಿದರು.
ಮಾನವ ಕಳ್ಳ ಸಾಗಣೆ ನಿರ್ಮೂಲನೆಯಲ್ಲಿ ಪೋಲೀಸರ ಪಾತ್ರ ಎಂಬ ವಿಷಯದ ಕುರಿತು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿಗೆ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ವಿಹಾನ್ ಸಂಸ್ಥೆ ಬೆಂಗಳೂರು ಅವರ ಸಹಭಾಗಿತ್ವದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರದಲ್ಲಿ ಮಾತನಾಡಿದ ಅಕಾಡೆಮಿಯ ನಿರ್ದೇಶಕರಾದ ಚೆನ್ನಬಸವಣ್ಣ ಅವರು ‘ಮಾನವ ಕಳ್ಳಸಾಗಾಣಿಕೆ ವಿಷಯವು ಗಂಭೀರವಾದ ಸಂಕೀರ್ಣ ಜಾಗತಿಕ ಸಮಸ್ಯೆಯಾಗಿದ್ದು, ಬದಲಾದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಇದು ತನ್ನ ವ್ಯಾಪ್ತಿಯನ್ನು ವ್ಯಾಪಕವಾಗಿ ವಿಸ್ತರಿಸಿದೆ ಎಂದು ತಿಳಿಸಿದರು
ಈ ಮಾನವ ಕಳ್ಳಸಾಗಾಣಿಕೆ ಎಂಬ ಮಾಫಿಯಕ್ಕೆ ಸಮಾಜದ ದುರ್ಬಲ ವರ್ಗಗಳು ಸುಲಭವಾಗಿ ತುತ್ತಾಗುತ್ತಿದ್ದು, ಆರ್ಥಿಕ ಬಡತನ ಅಥವಾ ಮಾಫಿಯಾಗಳು ಬೀಸುವ ಬಲೆಗೆ ಬೀಳುತ್ತಿದ್ದಾರೆ. ಇದನ್ನು ತಡೆಯಲು ಹಲವು ಕಾನೂನುಗಳಿದ್ದು, ಈ ಪಿಡುಗಿನ ನಿರ್ಮೂಲನೆಗಾಗಿ ಪೊಲೀಸ್ ವ್ಯವಸ್ಥೆ, ಸರ್ಕಾರದ ಸಂಸ್ಥೆಗಳು ಹಾಗೂ ಇತರೆ ಸಂಘ-ಸಂಸ್ಥೆಗಳು ಪರಿಣಾಮಕಾರಿಯಾಗಿ ಶ್ರಮಿಸುತ್ತಿದ್ದರೂ ಕೂಡ, ಹೊಸ ಮಾರ್ಗಗಳು ಹಾಗೂ ತಂತ್ರಜ್ಞಾನದ ಮೂಲಕ ಮಾನವ ಕಳ್ಳಸಾಗಾಣಿಕೆ ಚಟುವಟಿಕೆಯಲ್ಲಿ ಪಾತಕಿಗಳು ತೊಡಗುತ್ತಿದ್ದು ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ ಎಂದು ಚೆನ್ನಬಸವಣ್ಣ ಆತಂಕ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸರ್ಕಾರಿ ಸಂಘ ಸಂಸ್ಥೆಗಳು ಹಾಗೂ ಸರ್ಕಾರೇತರ ವಿವಿಧ ಸಂಘ ಸಂಸ್ಥೆಗಳೊಡನೆ ಸಮನ್ವಯತೆ ಸಾಧಿಸಿ ಮಾನವ ಕಳ್ಳಸಾಗಾಣಿಕೆಯಂತಹ ಸಮಾಜ ವಿರೋಧಿ ಹಾಗೂ ಮಾನವ ವಿರೋಧಿ ಚಟುವಟಿಕೆಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ಬಲಿಯಾದ ಸಂತ್ರಸ್ತರಿಗೆ ರಕ್ಷಣೆ ನೀಡಿ, ಅವರಿಗೆ ಮಾನಸಿಕ ಧೈರ್ಯ ತುಂಬುವುದೂ ಅಲ್ಲದೇ, ಸಂತ್ರಸ್ತರಿಗಾಗಿ ಲಭ್ಯವಿರುವ ಪುನರ್ವಸತಿ ಸೌಲಭ್ಯಗಳು ಹಾಗೂ ಕಾನೂನು ನೆರವನ್ನು ಒದಗಿಸಲು ಪೊಲೀಸ್ ಅಧಿಕಾರಿಗಳು ಮುಂದಾಗಬೇಕು ಎಂದು ನಿರ್ದೇಶಕರು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಪೊಲೀಸ್ ಘಟಕಗಳಿಂದ ಇಬ್ಬರು ಡಿವೈಎಸ್ಪಿ, 4 ಇನಸ್ಪೆಕ್ಟರ್, 24 ಸಬ್ ಇನಸ್ಪೆಕ್ಟರ್ ದರ್ಜೆಯ ಅಧಿಕಾರಿಗಳು ಸೇರಿ ಒಟ್ಟು 31 ಸೇವಾನಿರತ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾದ ಶ್ರೀ. ಚೆನ್ನಬಸವಣ್ಣ ಕಾರ್ಯಾಗಾರದ ಸಂಯೋಜಕರಾದ ವೆಂಕಟೇಶ್ ಎಸ್. ವಿಹಾನ್ ಸಂಸ್ಥೆಯ ಶ್ರೀಮತಿ ರೋವಿನ ಬಾಸ್ಟಿನ್, ಅಂಬರೀಷ್ ಜೈರಾಜ್, ಹಾಗೂ ಅಕಾಡೆಮಿಯ ಅಧಿಕಾರಿಗಳು ಹಾಜರಿದ್ದರು.