ವಿಶ್ವ ‌ವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ

Spread the love

ಮೈಸೂರು,ಅ.1: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅತ್ಯಂತ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದೆ.

ಈ ಬಾರಿ 11ನೇ ದಿನ ವಿಜಯದಶಮಿ ಮೆರವಣಿಗೆ ನಡೆಯುತ್ತಿದೆ.

ಗುರುವಾರ ಮಧ್ಯಾಹ್ನ 1ರಿಂದ 1.18ರ ಒಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂದಿದ್ವಜ ಪೂಜೆ ನೆರವೇರಿಸಲಿದ್ದಾರೆ.

ಮೆರವಣಿಗೆ ಸಾಗಿದ ನಂತರ ಸಂಜೆ 4.42 ರಿಂದ 5.06 ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ‌ ಬರುವ ಆನೆ ಅಭಿಮನ್ಯುವಿಗೆ ಸಿಎಂ ಸಿದ್ದರಾಮಯ್ಯನವರು ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ 60 ಸ್ತಬ್ಧ ಚಿತ್ರಗಳು ಸೇರಿದಂತೆ ನೂರಕ್ಕೂ ಹೆಚ್ಚು ವಿವಿಧ ಕಲಾತಂಡಗಳು ಸಾಗಿ ಬರಲಿವೆ.

ಮೊದಲು ಮೆರವಣಿಗೆಯಲ್ಲಿ ನಂದಿದ್ವಜ ಸಾಗಿದ ನಂತರ ನಿಶಾನೆ, ನೋಪತ್ ಆನೆಗಳು ಸಾಗಿ ಬರಲಿವೆ. ಇದರೊಂದಿಗೆ ಪೊಲೀಸ್ ಪಡೆ, ಅಶ್ವಪಡೆ, ಪೊಲೀಸ್ ಬ್ಯಾಂಡ್, ಮಂಗಳ ವಾದ್ಯದೊಂದಿಗೆ ಜಂಬೂ ಸವಾರಿ ಮೆರವಣಿಗೆ ಅರಮನೆಯಿಂದ ಬನ್ನಿಮಂಟಪದವರೆಗೆ ತೆರಳಲಿದೆ.

ಜಂಬೂಸವಾರಿ ವೀಕ್ಷಣೆಗಾಗಿ ಮೈಸೂರು ಅರಮನೆ ಆವರಣದಲ್ಲಿ 45,000 ಆಸನ ವ್ಯವಸ್ಥೆ ಮಾಡಲಾಗಿದೆ, ಗೋಲ್ಡ್ ಕಾರ್ಡ್ ಟಿಕೆಟ್ ಪಡೆದವರು ಹಾಗೂ ಫಾಸ್ ಪಡೆದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮೈಸೂರು ಜಿಲ್ಲಾಡಳಿತ ಹಾಗೂ ನಗರ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.ಭಾರೀ ಭದ್ರತಾ‌ ವ್ಯವಸ್ಥೆ ಮಾಡಿದ್ದಾರೆ.

ಈ ಬಾರಿ ಜಂಬುಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಹಳೆಯ ಹಾಗೂ ಶಿಥಿಲವಾದ ಕಟ್ಟಡಗಳು, ಮರಗಳ ಮೇಲೆ ಸಾರ್ವಜನಿಕರು ಏರಿ ವಿಜಯದಶಮಿ ಮೆರವಣಿಗೆ ವೀಕ್ಷಿಸುವುದನ್ನು ತಡೆಯಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

6384 ಸಿವಿಲ್ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 35 ಕಡೆ ಕೆ ಎಸ್ ಆರ್ ಪಿ ತುಕುಡಿಗಳು 15 ಸಿ ಎ ಆರ್ ಮತ್ತು ಡಿ ಆರ್ ತುಕಡಿಗಳು, 29 ಎ ಎಸ್ ಸಿ ಒಂದು ಗರುಡ ಫೋರ್ಸ್ ಹಾಗೂ 1500 ಹೋಂ ಗಾರ್ಡ್ ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಇವರೊಂದಿಗೆ 35 ಡಿವೈಎಸ್ಪಿ 140 ಇನ್ಸ್ಪೆಕ್ಟರ್ ಗಳು ಸಹ ಭದ್ರತಾ ಕಾರ್ಯ ವಹಿಸಲಿದ್ದಾರೆ. ಪೊಲೀಸ್ ಇಲಾಖೆಯಿಂದ 220 ಸಿಸಿಟಿವಿ ಕ್ಯಾಮೆರಾಗಳನ್ನು ಜಂಬುಸವಾರಿ ಮಾರ್ಗದಾದ್ಯಂತ ಅಳವಡಿಸಲಾಗಿದೆ.