ವಿಧಾನಪರಿಷತ್ ನಲ್ಲಿ ಅಲೆಮಾರಿ ಜನಾಂಗಕ್ಕೆ ಪ್ರಾತಿನಿಧ್ಯ ನೀಡಲು ಆಪ್ ಆಗ್ರಹ

Spread the love

ಬೆಂಗಳೂರು, ಸೆಪ್ಟೆಂಬರ್.1:
ಕರ್ನಾಟಕ ವಿಧಾನ ಪರಿಷತ್ ನಲ್ಲಿ ತೆರವಾಗಿರುವ ನಾಲ್ಕು ನಾಮನಿರ್ದೇಶನ ಸ್ಥಾನಗಳಲ್ಲಿ ಅಲೆಮಾರಿ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು
ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯುವ ಮೂಲಕ ಅಲೆಮಾರಿ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಲಾಗಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಜಾರಿಗೆ ತಂದಿರುವ ಇತ್ತೀಚಿನ ಒಳ ಮೀಸಲಾತಿಯಲ್ಲಿ ಅಲೆಮಾರಿ ಜನಾಂಗಕ್ಕೆ ಸಾಕಷ್ಟು ಅನ್ಯಾಯವಾಗಿದೆ ಎಂಬ ಕೂಗು ಎಲ್ಲೆಡೆ ಕಂಡುಬರುತ್ತಿದೆ.ಈಗಾಗಲೇ ಪ್ರತಿಭಟನೆಗಳೂ ನಡೆದಿದೆ. ನಮ್ಮ ಪಕ್ಷವೂ ಸಹ ಪ್ರತಿಭಟನೆಗಳಲ್ಲಿ ಸಾಕಷ್ಟು ಬಾರಿ ಭಾಗವಹಿಸಿ ಅವರ ಹಕ್ಕೊತ್ತಾಯ ಗಳಿಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ ಎಂದು ಹೇಳಿದರು.

ಒಳ ಮೀಸಲಾತಿಯಲ್ಲಿ ಅಲೆಮಾರಿ ಜನಾಂಗಗಳಿಗೆ ಅನ್ಯಾಯ ಸರಿಪಡಿಸುವ ದಿಶೆಯಲ್ಲಿ ನಾಮನಿರ್ದೇಶನ ವಾಗುವ ವಿಧಾನಪರಿಷತ್ ಸ್ಥಾನಗಳಲ್ಲಿ ಈ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿ ಮೇಲೆತ್ತುವ ಕೆಲಸ ಆಗಬೇಕು.

ಸಮಬಾಳು ಸಮಪಾಲು ಎಂದು ಸದಾ ಪ್ರತಿಪಾದಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಇತ್ತ ಕಡೆ ಗಮನಹರಿಸಬೇಕೆಂಬ ಒತ್ತಡವನ್ನು ಎಲ್ಲರೂ ಹಾಕಬೇಕಿದೆ ಎಂದು ಸೀತಾರಾಮ ಗುಂಡಪ್ಪ ಒತ್ತಾಯಿಸಿದರು.