ಉತ್ತರ ಕನ್ನಡ ಜಿಲ್ಲೆ ಜಾನಪದ ಕಣಜ-ಡಾ ಜಾನಪದ ಎಸ್ ಬಾಲಾಜಿ

Spread the love

ಉತ್ತರ ಕನ್ನಡ,ಏ.5: ಉತ್ತರ ಕನ್ನಡ ಜಿಲ್ಲೆ ಜಾನಪದ ಕಣಜ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಕಾರವಾರ ನಗರದ ದಿವಾಕರ್ ಪದವಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ ಕನ್ನಡ ಜಾನಪದ ಪರಿಷತ್ ಉತ್ತರ ಕನ್ನಡ ಜಿಲ್ಲಾ ಘಟಕದ ಪರ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಕ್ಕೆ ಇತಿಮಿತಿ ಹಾಗೂ ಚೌಕಟ್ಟಿಲ್ಲ, ಇದು ಅವಿನಾಶಿ, ಗ್ರಾಮೀಣ ಭಾಗದ ಮೂಲ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ಜಾನಪದ ಪರಿಷತ್ ಸ್ಥಾಪನೆಯಾಗಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ಏರ್ಪಡಿಸಲಾಗುವುದು ಹಾಗೂ ಮೂಲ ಕಲಾವಿದರ ಸಮೀಕ್ಷೆಯನ್ನು ಸಹ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಸ್ ಪಿ ಕಾಮತ್, ಜಾನಪದದಲ್ಲಿ ಸಂಸ್ಕಾರವಿದೆ, ಮನುಷ್ಯರ ಭಾವನೆಗಳನ್ನು ಹೊಂದಾಣಿಕೆ ಮಾಡುವ ಗುಣವಿದೆ ಇದನ್ನು ಉಳಿಸಿ ಬೆಳೆಸುವುದು ಎಲ್ಲ ಯುವಜನರ ಕರ್ತವ್ಯ ಎಂದು ಹೇಳಿದರು.

ಪ್ರಸ್ತಾವಕವಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ ಪ್ರಕಾಶ್ ಬಿ ನಾಯಕ ಉತ್ತರ ಕನ್ನಡ ಜಿಲ್ಲೆಯ ಮೂಲ ಜನಪದ ಕಲಾವಿದರ ಕೈಪಿಡಿಯನ್ನು ತರಲಾಗುವುದು ಹಾಗೂ ದಾಖಲೀಕರಣ ಹಾಗೂ ತರಬೇತಿಯನ್ನು ಜಿಲ್ಲಾಧ್ಯಂತ ಏರ್ಪಡಿಸುವ ಮೂಲಕ ಯುವಜನರಲ್ಲಿ ಜಾನಪದ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ನಾಟಿ ವೈದ್ಯರಾದ ಅಂಕೋಲಾ ತಾಲೂಕಿನ ಬೆಳಂಬರಿನ ಹನುಮಂತ್ ಬಮ್ಮಗೌಡ ಅವರನ್ನು ಗೌರವಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಜಾನಪದ ಎಸ್ ಬಾಲಾಜಿ ಪದವಿ ಪ್ರದಾನ ಮಾಡಿದರು.

ಹಿರಿಯ ನ್ಯಾಯವಾದಿಗಳಾದ ನಾಗರಾಜ್ ನಾಯಕ್, ಸೆಂಟ್ ಮಿಲ ಗ್ರಿಸ್ ಕಾರ್ಪೊರೇಟಿವ್ ಬ್ಯಾಂಕಿನ ವ್ಯವಸ್ಥಾಪ ನಿರ್ದೇಶಕ ಜಾರ್ಜ್ ಫರ್ನಾಂಡಿಸ್ ಮಾತನಾಡಿದರು.

ಕುಮಟಾ ತಾಲೂಕಿನ ಗೊಮಟೆ ಪಾಂಗ್ ತಂಡ, ಕೆಪಿಎಸ್ ಶಿರವಾಡದ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ದಿವಾಕರ್ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.

ದಿವಾಕರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕೇಶವ್ ಭಟ್ ಸ್ವಾಗತಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಮರಾಠ ವಂದಿಸಿದರು.