ಮೈಸೂರು: ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ಧ್ಯಾನ, ಆಯುರ್ವೇದ ಆಹಾರ ಕ್ರಮಗಳು ಅಗತ್ಯವಾಗಿವೆ ಎಂದು ಆಯುರ್ವೇದ ಹಿರಿಯ ವೈದ್ಯ ಡಾ. ಚಂದ್ರಶೇಖರ್ ಹೇಳಿದರು.
ನಗರದ ಚಾಮುಂಡಿಪುರಂನಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ
ಸಾರ್ವಜನಿಕರಿಗೆ ಆಯುರ್ವೇದ ಗಿಡಗಳನ್ನು ವಿತರಣೆ, ಆಯುರ್ವೇದದಿಂದ ಆಗುವ ಉಪಯೋಗಗಳ ಬಗೆಗಿನ ಜಾಗೃತಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರು.
ಆಯುರ್ವೇದ ವೈದ್ಯ ಪದ್ಧತಿ ಕಾಯಿಲೆ ಗುಣಪಡಿಸುವ ಜತೆಗೆ ಆರೋಗ್ಯಯುತ ಜೀವನ ನಡೆಸುವ ಕ್ರಮವನ್ನು ಕಲಿಸುತ್ತದೆ,
ಆಯುರ್ವೇದದ ಬಗ್ಗೆ ಜನರಿಗೆ ತಿಳಿವಳಿಕೆ ಬರಲು ಹೆಚ್ಚಿನ ಪ್ರಚಾರದ ಅಗತ್ಯ ಇದೆ ಎಂದು ತಿಳಿಸಿದರು.
ಮೂಡ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಮಾತನಾಡಿ, ಆರೋಗ್ಯಕ್ಕಾಗಿ ಆಸ್ಪತ್ರೆಗಳನ್ನು ಅವಲಂಬಿಸಬಾರದು. ಅಡುಗೆ ಮನೆಯ ಸಾಂಬಾರ ಬಟ್ಟಲಿನಲ್ಲಿ ಆರೋಗ್ಯ ಕಾಯುವ ಪದಾರ್ಥಗಳಿರುತ್ತವೆ. ಅವುಗಳ ಸರಿಯಾದ ಸೇವನೆಯ ಮಹತ್ವ ಅರಿಯಬೇಕು ಎಂದು ಸಲಹೆ ನೀಡಿದರು.
ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ. ಆರ್ ಸತ್ಯನಾರಾಯಣ್ ಮಾತನಾಡಿ, ಆಯುರ್ವೇದ ಸಸ್ಯಗಳ ಬಳಕೆ ಮೂಲಕ ದೀರ್ಘಾವಧಿ ಕಾಯಿಲೆಗಳಿಗೆ ತುತ್ತಾಗುವುದನ್ನು ತಡೆಯ ಬಹುದು,ಈ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಅಗತ್ಯವಿದೆ ಎಂದು ತಿಳಿಸಿದರು.
ಆಯುರ್ವೇದ ಸಸ್ಯಗಳಾದ ಅಮೃತ ಬಳ್ಳಿ, ಕೃಷ್ಣ ತುಳಸಿ, ರಾಮ ತುಳಸಿ, ಬೆಟ್ಟದ ನೆಲ್ಲಿಕಾಯಿ, ದೊಡ್ಡಿಪತ್ರೆ, ಅಗಸೆ ಗಿಡ, ನೇರಳೆ ಗಿಡ, ಬೇವಿನ ಗಿಡ, ಅರಿಶಿನ ಗಿಡ ಸೇರಿದಂತೆ ಇನ್ನಿತರ ಗಿಡ ಗಳನ್ನು ವಿತರಣೆ ಮಾಡಲಾಯಿತು.
ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಜಗದೀಶ್, ಅಲೋಕ್ ಆರ್ ಜೈನ್, ಅಜಯ್ ಶಾಸ್ತ್ರಿ, ಸಂದೀಪ್, ಚಕ್ರಪಾಣಿ, ಸಚಿಂದ್ರ, ಆದರ್ಶ್, ಮಹಾನ್ ಶ್ರೇಯಸ್, ಶಿವಲಿಂಗ ಸ್ವಾಮಿ, ಮತ್ತಿತರರು ಹಾಜರಿದ್ದರು.