ಚಾಮುಂಡಿ ಬೆಟ್ಟದಲ್ಲಿ ಅಕ್ರಮ ಮನೆಗಳ ತೆರವಿಗೆ ತೇಜಸ್ವಿ ಆಗ್ರಹ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಪರಿಸರ ಹಾಳು ಮಾಡಲಾಗುತ್ತಿದೆ ಎಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಗಂಭೀರ ಆರೋಪ ಮಾಡಿದರು.

ವಿವಿಧ ಸಂಘಟನೆಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು,ಚಾಮುಂಡಿ ಬೆಟ್ಟದಲ್ಲಿ
ಯಾವುದೇ ಹೊಸ ಮನೆಗಳನ್ನು ನಿರ್ಮಾಣ ಮಾಡದಂತೆ ಆದೇಶ ಇದ್ದರು ಕೂಡ ಚಾಮುಂಡಿ ಬೆಟ್ಟದ ನಿವಾಸಗಳು ಹಾಗೂ ಬೆಟ್ಟಕ್ಕೆ ಬಂದಿರುವ ವಲಸಿಗರು ಅಲ್ಲಿನ ಗ್ರಾಮ ಪಂಚಾಯಿತಿ ಜಾಗಗಳಲ್ಲಿ ಹಾಗೂ ಜಮೀನುಗಳಲ್ಲಿ ಮನೆಗಳನ್ನು ಕಟ್ಟಿ ಬೆಟ್ಟದ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ಇದರ ಬಗ್ಗೆ ಗಮನ ಹರಿಸಬೇಕಾದ ಆ ಭಾಗದ ಶಾಸಕರಾದ ಜಿ ಟಿ ದೇವೇಗೌಡರು ಮೌನವಾಗಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಪಿಡಿಒ ಮತ್ತು ತಹಸಿಲ್ದಾರ್ ಹಾಗೂ ಅರಣ್ಯ ಅಧಿಕಾರಿಗಳು ಇದು ತಮ್ಮ ಕೆಲಸವಲ್ಲ ಎಂದು ಬೇಜವಾಬ್ದಾರಿಯಿಂದ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ತೇಜಸ್ವಿ ಕಿಡಿಕಾರಿದರು.

ಈಗಾಗಲೇ ನಂದಿ ಹತ್ತಿರ ರಸ್ತೆ ಕುಸಿದು ಮೂರು ನಾಲ್ಕು ವರ್ಷಗಳು ಕಳೆದರೂ ಇನ್ನೂ ಸರಿಪಡಿಸಲಾಗಿಲ್ಲ ಮುಂದಿನ ದಿನದಲ್ಲಿ ಮಡಕೇರಿ ರೀತಿಯಲ್ಲಿ ಚಾಮುಂಡಿ ಬೆಟ್ಟವೂ ಕೂಡ ಕುಸಿಯುವುದನ್ನು ನಾವು ನೋಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಟ್ಟದಲ್ಲಿ ಅಕ್ರಮವಾಗಿ ಮನೆ ಕಟ್ಟುವ ಮಾಲೀಕರುಗಳಿಗೆ ಎಇಇ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವ ಮೂಲಕ ಕಾನೂನು ಉಲ್ಲಂಘಿಸುತ್ತಿದ್ದಾರೆ ಇದರ ಬಗ್ಗೆ ಗಮನಹರಿಸಿ ಅಧಿಕಾರಿಗಳಿಗೆ ಹಾಗೂ ಅಲ್ಲಿನ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅನಧಿಕೃತವಾಗಿ ಕಟ್ಟಿರುವ ಹಾಗೂ ಕಟ್ಟುತ್ತಿರುವ ಮನೆಗಳನ್ನು ತೆರವುಗೊಳಿಸಬೇಕೆಂದು ತೇಜಸ್ವಿ ನಾಗಲಿಂಗಸ್ವಾಮಿ ಮತ್ತಿತರರು ಆಗ್ರಹಿಸಿದರು.

ಮುಂದಿನ ದಿನಗಳಲ್ಲಿ ಯಾರೇ ಕಾಮಗಾರಿ ಮಾಡಲು ಮುಂದಾದರೆ ಅಂತಹ ಮನೆಗಳನ್ನು ಹಾಗೂ ಕಟ್ಟಡಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಕನ್ನಡ ಕ್ರಾಂತಿದಳ , ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ, ಕರ್ನಾಟಕ ಯುವ ಸೇನೆ ವೇದಿಕೆ, ಕರ್ನಾಟಕ ಪ್ರಜಾಶಕ್ತಿ ವೇದಿಕೆ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ, ಯುವ ಹೋರಾಟಗಾರ ನಾಗರಾಜ್ ಮದಕರಿ, ಕರ್ನಾಟಕ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾಧ್ಯಕ್ಷ ಜಗದೀಶ್, ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅರುಣ್, ಮಹಿಳಾ ಹೋರಾಟಗಾರ್ತಿ ಕಲಾಧನು ಉಪಸ್ಥಿತರಿದ್ದರು.