ಅನಧಿಕೃತ ಕಟ್ಟಡ ನಿರ್ಮಿಸಿದರೆ ಅಧಿಕಾರಿಗಳೆ ಹೊಣೆ :ಸಿಎಂ ಎಚ್ಚರಿಕೆ

Spread the love

ಬೆಂಗಳೂರು: ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಗಾಯಗೊಂಡವರ ಚಿಕಿತ್ಸೆಯನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಇಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದ 8 ಜನರು ಮೃತಪಟ್ಟಿದ್ದು,ಅವರ ಶವಗಳನ್ನು ಹೊರತೆಗೆಯಲಾಗಿದೆ,8 ಜನರನ್ನು ರಕ್ಷಣೆ ಮಾಡಲಾಗಿದೆ, ಅವರಲ್ಲಿ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ,ಚಿಕಿತ್ಸಾ ವೆಚ್ಚ ಭರಿಸುವ ಜೊತೆಗೆ ಪರಿಹಾರವನ್ನೂ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.

ಸಾವನ್ನಪ್ಪಿರುವ 8 ಜನರಿಗೆ ತಲಾ 2 ಲಕ್ಷ ಕಾರ್ಮಿಕ ಇಲಾಖೆಯಿಂದ , 3 ಲಕ್ಷ ಬಿಬಿಎಂಪಿಯಿಂದ ಒಟ್ಟು 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದು ರೆವಿನ್ಯೂ ಬಡಾವಣೆ ಈ ಕಟ್ಟಡವನ್ನು ಪರವಾನಗಿ ಪಡೆಯದೇ ನಿರ್ಮಿಸಲಾಗಿದೆ. ಅನಧಿಕೃತ ಕಾಮಗಾರಿ ಎಂದು ನೋಟೀಸು ನೀಡಲಾಗಿದ್ದರೂ, ನಿರ್ಮಾಣ ಮಾಡಿರುವುದರಿಂದ, ಸಂಬಂಧಪಟ್ಟ ಎಇಇ ಯನ್ನು ಅಮಾನತುಗೊಳಿಸಲಾಗಿದೆ.ಈ ಪ್ರದೇಶದ ವ್ಯಾಪ್ತಿಗೆ ಬರುವ ವಿಭಾಗೀಯ ಅಧಿಕಾರಿ ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೂ ನೋಟೀಸು ಜಾರಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

ಜನರು ಕಾನೂನಿನ ಪ್ರಕಾರ ಮನೆಗಳನ್ನು ನಿರ್ಮಿಸಬೇಕೇ ಹೊರತು ಕಾನೂನು ಬಾಹಿರವಾಗಿ ಮನೆಗಳನ್ನು ಕಟ್ಟಬಾರದೆಂದು ಸಿಎಂ ಮನವಿ ಮಾಡಿದರು.

ಕಟ್ಟಡ ಕುಸಿತ ಕಳಪೆ
ಕಾಮಗಾರಿಯಿಂದ ಆಗಿದೆಯೇ ಹೊರತು ಮಳೆ ಕಾರಣ ಅಲ್ಲ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನಧಿಕೃತ ಕಟ್ಟಡಗಳಿಗೆ ಅನುಮತಿ ನೀಡಬಾರದು. ಒಂದು ವೇಳೆ ನಿರ್ಮಿಸಿದರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿದ್ದು ಎಚ್ಚರಿಕೆ ನೀಡಿದರು.

ಸರ್ಕಾರ ಮಳೆ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ ಎಂಬ ಆರೋಪ ಇದೆಯಲ್ಲಾ ಎಂಬ ಪ್ರಶ್ನೆಗೆ, ಟೀಕೆಗಳನ್ನು ಮಾಡುವುದು ಸುಲಭ. ಹಿಂದಿನ ಸರ್ಕಾರದ ಅವಧಿಯಲ್ಲೂ ಮಳೆ ಸಂಭವಿಸಿದ್ದು , ಪ್ರತಿಪಕ್ಷದ ನಾಯಕನಾಗಿ ನಾನು ದೋಣಿಯಲ್ಲಿ ಕುಳಿತು ಸ್ಥಳ ವೀಕ್ಷಣೆ ಮಾಡಿದ್ದೆ ಎಂದು ಹೇಳಿದರು.

ನೂರಾರು ವರ್ಷಗಳಲ್ಲಿ ಯಲಹಂಕದಲ್ಲಿ ಒಂದೇ ದಿನ 170 ಮಿ.ಮೀ. ಮಳೆ ಬಿದ್ದಿದೆ, ಸುಮಾರು ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯ ಮಾಡಲಾಗುತ್ತಿದೆ‌ ಎಂದು ತಿಳಿಸಿದರು.

ಈ ವರ್ಷ ಮಳೆ ಜಾಸ್ತಿ ಆಗಿದ್ದು, ಇನ್ನೂ ಹೆಚ್ಚು ಮೂಲಸೌಕರ್ಯಗಳ ಅಭಿವೃದ್ಧಿ ಆಗಬೇಕಿದೆ. ರಾಜಕಾಲುವೆಗಳಲ್ಲಿ ಒತ್ತುವರಿ ಕ್ಲಿಯರ್ ಮಾಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ವಿಪತ್ತುನಿರ್ವಹಣೆಗಾಗಿ 3 ಸಾವಿರ ಕೋಟಿರೂ ಸಾಲ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.