ತುಲಾ ಸಂಕ್ರಮಣ:ಕಾವೇರಿ ತೀರ್ಥೋದ್ಭವ-ಶ್ರೀರಂಗನಾಥ ಸ್ವಾಮಿಗೂ ಅಭಿಷೇಕ ಪೂಜೆ

Spread the love

(ವರದಿ:ಜಿ.ಎ.ನಾಗರಾಜ್ ಶ್ರೀರಂಗಪಟ್ಟಣ)

ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಕಾಲದಲ್ಲಿ ಕಾವೇರಿಯ ಉಗಮಸ್ಥಳವಾದ ತಲಕಾವೇರಿಯಲ್ಲಿ ಅಕ್ಟೋಬರ್‌ 18 ರ ನಸುಕಿನ ಜಾವ 12.59ಕ್ಕೆ ಕಾವೇರಿಯು ತೀರ್ಥರೂಪದಲ್ಲಿ ಉದ್ಭವವಾಗಿದ್ದಾಳೆ.

ಈ ಸಮಯದಲ್ಲಿ ಭಕ್ತರು ಪುಣ್ಯ ಸ್ನಾನವನ್ನು ಮಾಡಿ ಪುನೀತರಾಗಿದ್ದಾರೆ.

ಸೌರಮಂಡಲದ ರಾಜನಾದ ಸೂರ್ಯನು ಕನ್ಯಾರಾಶಿಯಿಂದ ತುಲಾ ರಾಶಿಯನ್ನು ಪ್ರವೇಶಿಸುವ ದಿನವೇ ತುಲಾ ಸಂಕ್ರಮಣ. ಈ ಬಾರಿ ಅಕ್ಟೋಬರ್‌ 17ರಂದು ಬೆಳಗ್ಗೆ 7.41ಕ್ಕೆ ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ.

ವರ್ಷಕ್ಕೊಂದು ಬಾರಿ ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣ ಎಂದು ಕರೆಯುತ್ತಾರೆ. ಈ ದಿನವೇ ಕಾವೇರಿಯು ತನ್ನ ಉಗಮಸ್ಥಾನದಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ.

ಹಾಗಾಗಿ ಈ ದಿನವನ್ನು ಕಾವೇರಿ ಸಂಕ್ರಮಣ, ಕಾವೇರಿ ಸಂಕ್ರಾಂತಿಯೆಂದೂ ಕರೆಯುತ್ತಾರೆ.
ಕಾವೇರಿಯ ಉಗಮಸ್ಥಳವಾದ ಕೊಡಗಿನಲ್ಲಿ ತುಲಾ ಸಂಕ್ರಾಂತಿಯಂದು ವಾರ್ಷಿಕ ಕಾವೇರಿ ಸಂಕ್ರಮಣ ಜಾತ್ರೆ ನಡೆಯುತ್ತದೆ.

ಈ ಉತ್ಸವವು ಅಕ್ಟೋಬರ್‌ 17ರಿಂದ ನವೆಂಬರ್‌ 17ರವರೆಗೆ ನಡೆಯುತ್ತದೆ. ಕೊಡಗಿನ ಭಾಗಮಂಡಲದಲ್ಲಿರುವ ಭಗಂಡೇಶ್ವರ ದೇವಸ್ಥಾನದಿಂದ ಸುಮಾರು ಎರಡು ಕಿ.ಮೀ ಬೆಟ್ಟದ ಮೇಲಿರುವ ತಲಕಾವೇರಿಯೇ ಉಗಮಸ್ಥಾನ.

ತೀರ್ಥೋದ್ಭವದ ಮಹತ್ವ:
ತೀರ್ಥೋದ್ಭವದ ಸಮಯದಲ್ಲಿ ತಲಕಾವೇರಿಯಲ್ಲಿ ಸ್ನಾನ ಮಾಡಿ, ತೀರ್ಥವನ್ನು ಸಂಗ್ರಹಿಸಿಟ್ಟರೆ ಪುಣ್ಯ ಪ್ರಾಪ್ತಿಯಾಗುವುದು ಎಂಬುದು ಭಕ್ತರ ನಂಬಿಕೆ.

ಕಾವೇರಿ ತುಲಾ ಸಂಕ್ರಮಣವು ಒಂದು ತಿಂಗಳ ಕಾಲ ನಡೆಯಲಿದ್ದು ಈ ಸಮಯದಲ್ಲಿ ಇಲ್ಲಿ ಬಂದು ಪವಿತ್ರ ಸ್ನಾನ ಮಾಡಿದರೆ ಪಾಪ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುವುದು ಎಂದು ಹಿರಿಯರು ಹೇಳುತ್ತಾರೆ.

ಕಾವೇರಿ ತೀರ್ಥೋದ್ಭವಕ್ಕೂ ಮುನ್ನ ಪಿಂಡ ಪ್ರದಾನ ಕಾರ್ಯಗಳು ನಡೆಯುತ್ತದೆ. ಪಿಂಡ ಪ್ರದಾನ ಕಾರ್ಯವನ್ನು ಕಾವೇರಿ, ಕನ್ನಿಕೆ, ಸುಜೋತಿ ನದಿಗಳ ಸಂಗಮ ಸ್ಥಳದಲ್ಲಿ ಮಾಡಲಾಗುತ್ತದೆ.

ನಂತರ ಸಂಗಮಸ್ಥಾನದಲ್ಲಿ ಮಿಂದು, ತಲಕಾವೇರಿಯ ಉಗಮಸ್ಥಾನಕ್ಕೆ ತೆರಳಿ, ತೀರ್ಥೋದ್ಭವ ಆದ ನಂತರ ಸ್ನಾನ ಕೊಳದಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಗತಿಸಿದ ಹಿರಿಯರಿಗೆ ಸದ್ಗತಿ ದೊರೆಯುವುದು ಹಾಗೂ ಪಾಪಕರ್ಮಗಳು ಪರಿಹಾರವಾಗುವುದು ಎಂಬ ನಂಬಿಕೆ ಇದೆ.

ಪುಣ್ಯಕಾಲದಲ್ಲಿ ಉದ್ಭವವಾದ ತೀರ್ಥವನ್ನು ಕೊಡವರು ಪುಣ್ಯ ತೀರ್ಥವಾಗಿ ಸಂಗ್ರಹಿಸುತ್ತಾರೆ. ಹುಟ್ಟುವ ಮಗುವಿಗೂ ಈ ತೀರ್ಥವನ್ನು ಕೊಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಇದೇ ತೀರ್ಥವನ್ನು ಬಳಸುತ್ತಾರೆ. ಕೊನೆಗೆ ಪ್ರಾಣತ್ಯಜಿಸುವ ಸಂದರ್ಭದಲ್ಲೂ ಬಾಯಿಗೆ ಇದೇ ತೀರ್ಥವನ್ನು ನೀಡಿ ಸ್ವರ್ಗಪ್ರಾಪ್ತಿಯಾಗಲೆಂದು ಹಾರೈಸುತ್ತಾರೆ.

ಇತ್ತ ಶ್ರೀರಂಗಪಟ್ಟಣದಲ್ಲಿ ಶ್ರೀಮನ್ನಾರಾಯಣ ಸಂಬೂತನಾದ ವೈಕುಂಠಾಧಿಪತಿ ಶ್ರೀರಂಗನಾಥ ಸ್ವಾಮಿಗೆ ಅಷ್ಟ ತೀರ್ಥೋದ್ಭವದೊಂದಿಗೆ ಶ್ರೀರಂಗಪಟ್ಟಣದ 7 ನದಿಗಳಲ್ಲಿ ಅಭಿಷೇಕ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ.

ನಂತರ ತನ್ನ ಸ್ವಸ್ಥಾನವಾದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಆನಂತರ ಸಂಧ್ಯಾ ಕಾಲದ ಪೂಜೆ ಮಾಡಿ ಶ್ರೀಮನ್ ನಾರಾಯಣನಿಗೆ ಪೂಜೆ ಸಂಪನ್ನಗೊಳ್ಳುತಗತದೆ.

ಜಿ ಬಿ ಹೊಳೆ ಕ್ಷೇತ್ರದಲ್ಲಿ ದೇವರು ಮಿಂದು ಏಳುವ ಸಂದರ್ಭದಲ್ಲಿ ಭಕ್ತರೂ ಕೂಡ ನದಿಯಲ್ಲಿ ತೀರ್ಥ ಸ್ನಾನ ಮಾಡಿ ಪುನೀತರಾಗುತ್ತಾರೆ.