ಬೆಳಗಾವಿ: ಬೆಳಗಾವಿಯ ಜೋಷಿಮಾಳ್ ಎಂಬಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು,ಮೂವರು ಮೃತಪಟ್ಟರೆ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಸಂತೋಷ ಕುರಡೇಕರ್,ಈತನ ತಂಗಿ ಸುವರ್ಣ ಕುರಡೇಕರ್ ಹಾಗೂ ತಾಯಿ ಮಂಗಳಾ ಕುರಡೇಕರ್ ಮೃತಪಟ್ಟಿದ್ದಾರೆ ಮತ್ತೊಬ್ಬ ತಂಗಿ ಸುನಂದಾ ಕುರಡೇಕರ್ ಸ್ಥಿತಿ ಚಿಂತಾಜನಕವಾಗಿದೆ. ಸುನಂದಾ ಕುರಡೇಕರ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜು ಕುಡತರ್ಕರ್ ಎಂಬಾತನ ಕಿರುಕುಳಕ್ಕೆ ಇಡೀ ಕುಟುಂಬ ಬಲಿಯಾಗಿದೆ,
ಚಿನ್ನ ತೆಗೆದುಕೊಂಡು ಹೋಗಿ ರಾಜು ಕುಡತರ್ಕರ್ ಎಂಬಾತ ಮೋಸ ಮಾಡಿದ್ದಾನೆಂದು ಸಂತೋಷ್ ಡೆತ್ ನೋಟ್ ಬರೆದಿದ್ದಾರೆ.
ಸಂತೋಷ್ ತಾಯಿ ಮತ್ತು ತಂಗಿಯರಿಗೆ ಎರಡು ಗಂಟೆಗಳ ಕಾಲ ಆತ್ಮಹತ್ಯೆ ಮಾಡಿಕೊಳ್ಳೋಣ ಸಾವೇ ತಮಗೆ ಕೊನೆಯ ದಾರಿ ಎಂಬುದಾಗಿ ಮನವರಿಕೆ ಮಾಡಿ ಬಳಿಕ ತಾನು ತಂದಿದ್ದ ವಿಷವನ್ನು ಕುಟುಂಬಸ್ಥರಿಗೆ ನೀಡಿ ತಾನೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ರಾವ್ ಬೊರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.