ತಿರುಪತಿ ಲಡ್ಡುಗೆ ನಕಲಿ ತುಪ್ಪ: ಕಠಿಣ ಶಿಕ್ಷೆಗೆಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಆಗ್ರಹ

ಮೈಸೂರು: ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ನಕಲಿ ತುಪ್ಪ ಬಳಸಿರುವುದು ಎಸ್‌ಐಟಿ ತನಿಖೆಯಲ್ಲಿ ದೃಢಪಟ್ಟಿದ್ದು,ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು
ಆಗ್ರಹಿಸಿದ್ದಾರೆ.

ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಸಿಲ್ದಾರರಾದ ಶಿವಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿ ಈ ಆಗ್ರಹ ಮಾಡಿದರು.

ಈ ವೇಳೆ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮಾತನಾಡಿ,ಹಿಂದೂಗಳ
ಭಾವನೆಗಳಿಗೆ ಧಕ್ಕೆ ತಂದಿರುವ ಗಂಭೀರ ಪ್ರಕರಣ ಇದಾಗಿದೆ ಎಂದು ತಿಳಿಸಿದರು.

ಲಡ್ಡು ಪ್ರಸಾದದಲ್ಲಿ 250 ಕೋಟಿಗೂ ಅಧಿಕ ಮೌಲ್ಯದ 68 ಲಕ್ಷ ನಕಲಿ ತುಪ್ಪವನ್ನು ಬಳಸಿರುವುದು ಬಯಲಾಗಿದೆ.ಆಂಧ್ರ ಪ್ರದೇಶದ ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಕೃತ್ಯವಿದು. ಅಕ್ರಮಕ್ಕೆ ಕಾರಣರಾದವರ ವಿರುದ್ಧ ಸಿಬಿಐ ಮತ್ತು ಆಂಧ್ರಪ್ರದೇಶ ಪೊಲೀಸರ ತನಿಖೆಯ ಆಧಾರದ ಮೇಲೆ ಸೂಕ್ತ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಲಡ್ಡುಗಳಲ್ಲಿ ಕೊಬ್ಬಿನ ಅಂಶ ಮಾಂಸದ ಅಂಶವಿರುವ ಕಳಪೆ ಪದಾರ್ಥ ಗಳನ್ನು ಬಳಸಲಾಗಿದೆ ಎಂಬುದೂ ತನಿಖೆಯಲ್ಲಿ ದೃಢವಾಗಿದೆ. ಉತ್ತರಾಖಂಡ ಮೂಲದ ಬೋಲ್ ಬಾಬಾ ಎಂಬ ಸಂಸ್ಥೆಯಿಂದ ಕಳಪೆ ತುಪ್ಪ ತರಿಸಿಕೊಂಡು ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದರು.

ಪ್ರಸಾದದ ಗುಣಮಟ್ಟ ಕಾಪಾಡಲು ಕೆಎಂಎಫ್ ತುಪ್ಪವನ್ನೇ ಬಳಸಬೇಕು ಎಂದು ವಿಕ್ರಮ ಅಯ್ಯಂಗಾರ್ ಮತ್ತಿತರರು ಆಗ್ರಹಿಸಿದರು.

ಮುಖಂಡರುಗಳಾದ ಪ್ರಮೋದ್ ಗೌಡ,ಸಂದೇಶ್, ಗುರುರಾಜ್ ಶೆಟ್ಟಿ, ಎಸ್ ಎನ್ ರಾಜೇಶ್, ಪ್ರಶಾಂತ್, ಅಮಿತ್, ಸಚಿನ್ ನಾಯಕ್ ಮತ್ತಿತರರು ಮನವಿ ಸಲ್ಲಿಕೆ ವೇಳೆ ಹಾಜರಿದ್ದರು.