ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳೋದು ಹೊಸ ವಿಷಯ ಏನಲ್ಲ. ಆದರೆ ಈ ಮಟ್ಟದ ಸುಳ್ಳು ಹೇಳೋದು ಪ್ರಧಾನಿ ಸ್ಥಾನಕ್ಕೆ ದೊಡ್ಡ ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಅಬಕಾರಿ ಇಲಾಖೆಯಲ್ಲಿ 700 ಕೋಟಿ ಎಲ್ಲಿರತ್ತೆ. ಯಾರು ಕೊಡುತ್ತಾರೆ, ಪ್ರಧಾನಿ ಆದವರಿಗೆ ಈ ಮಟ್ಟದ ತಿಳಿವಳಿಕೆ ಕೊರತೆ ಇರಬಾರದು ಎಂದು ಮೂದಲಿಸಿದರು.
ಕರ್ನಾಟಕದಲ್ಲಿ ಅಬಕಾರಿ ಇಲಾಖೆಯ 700 ಕೋಟಿ ಹಣ ತಂದು ಮಹರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ನಡೆಸುತ್ತಿದೆ ಎಂಬುದಾಗಿ ಪ್ರಧಾನಿಯವರು ಹೇಳಿದ್ದಾರಲ್ಲಾ ಎಂಬ ವರದಿಗಾರರ ಪ್ರಶ್ನೆಗೆ ಸಿಎಂ ಮೇಲಿನಂತೆ ಉತ್ತರಿಸಿದರು.
ಕುನ್ಹಾ ಆಯೋಗದ ವರದಿಯ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂಬ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಆಯೋಗದ ವರದಿ ಹೇಗೆ ಗೊಡ್ಡು ಬೆದರಿಕೆ ಆಗುತ್ತದೆ ಜನರ ಹಣ ಲೂಟಿ ಹೊಡೆದು ಆಮೇಲೆ ಗೊಡ್ಡು ಬೆದರಿಕೆ ಅಂದರೆ ಹೇಗೆ ಎಂದು ಸಿಎಂ ಮರು ಪ್ರಶ್ನಿಸಿದರು.
30 ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ತಮ್ಮ ಕೊಲೆಗೆ ಯತ್ನ ನಡೆದಿತ್ತು ಎಂಬ ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ಆಗ ಏಕೆ ಯಡಿಯೂರಪ್ಪ ದೂರು ಕೊಡಲಿಲ್ಲ, ಕೇಸು ಹಾಕಿಸಲಿಲ್ಲ ಎಂದು ಕೇಳಿದರು ಸಿದ್ದರಾಮಯ್ಯ.
ಮುಡಾ ಪ್ರಕರಣದಲ್ಲಿ ಸ್ಟಾಂಪ್ ಡ್ಯೂಟಿಯನ್ನು ತಹಶೀಲ್ದಾರ್ ಕಟ್ಟಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆಯಲ್ಲ ಎಂಬ ಮತ್ತೊಂದು ಪ್ರಶ್ನೆಗೆ ಇದು ಹೊಸ ಸುಳ್ಳು, ತಹಶೀಲ್ದಾರ್ ಚೆಕ್ ನಲ್ಲಿ ಕೊಟ್ಟಿದ್ದಾರಂತಾ, ಯಾರು ಇಂಥಾ ಸುಳ್ಳುಗಳನ್ನು ಸೃಷ್ಟಿಸೋದು ಎಂದು ಸಿಎಂ ಗರಂ ಆಗಿ ಪ್ರಶ್ನಿಸಿದರು.