ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಲಡ್ಡು‌ ವಿತರಣೆ

ಮೈಸೂರು,ಜ.1: ನೂತನ ವರ್ಷವನ್ನು ಮೈಸೂರಿನ ವಿಜಯನಗರದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಯಿತು.

2025ನೇ ವರ್ಷದ ಮೊದಲ ದಿನವನ್ನ ಯೋಗನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾದ ಪೂಜಾ ಕೈಂಕರ್ಯಗಳು ದೇವಾಲಯದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.

ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸಲಾಯಿತು.

ಭಾಷ್ಯಂ ಸ್ವಾಮೀಜಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ನೇತೃತ್ವದಲ್ಲಿ ಭಕ್ತರಿಗೆ ಲಾಡು ಹಾಗೂ ಪುಳಿಯೊಗರೆ ಪ್ರಸಾದ ವಿತರಿಸಲಾಯಿತು.

ಮುಂಜಾನೆಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಯೋಗನರಸಿಂಹ ಸ್ವಾಮಿಯ ದರುಶನ ಪಡೆದರು.

2 ಕೆಜಿ ತೂಕದ 10 ಸಾವಿರ ಲಡ್ಡು ಹಾಗೂ 150 ಗ್ರಾಂ ತೂಕದ 2 ಲಕ್ಷ ಲಡ್ಡುಗಳನ್ನು ಭಕ್ತರಿಗೆ ವಿತರಿಸಲಾಯಿತು.

1994ರಿಂದ ಆರಂಭವಾದ ಲಡ್ಡು ವಿತರಣಾ ಕಾರ್ಯ ನಿರಂತರವಾಗಿ ಪ್ರತಿ ವರ್ಷ ಮುಂದುವರೆಯುತ್ತಿದೆ.

ರಾತ್ರಿ 11 ಗಂಟೆ ವರೆಗೆ ಲಡ್ಡು ವಿತರಿಸಲಾಗುತ್ತದೆ ಎಂದು ಇದೇ ವೇಳೆ ಭಾಷ್ಯಂ ಸ್ವಾಮೀಜಿ ತಿಳಿಸಿದರು.

ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಲಡ್ಡು‌ ವಿತರಣೆ Read More

ನೂತನ ವರ್ಷಕ್ಕಾಗಿ ಯೋಗಾನರಸಿಂಹ ದೇವಾಲಯದಲ್ಲಿ 2 ಲಕ್ಷ ಲಡ್ಡು ವಿತರಣೆ

ಮೈಸೂರು: ನೂತನ ವರ್ಷ ಸ್ವಾಗತಿಸಲು ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸಲು ಸಿದ್ದತೆ ಭರದಿಂದ ನಡೆದಿದೆ.

ದೇವಾಲಯದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಕಳೆದ 4 ದಿನಗಳಿಂದ ಲಡ್ಡು ಸಿದ್ದವಾಗುತ್ತಿದೆ.

2 ಕೆಜಿ ತೂಕದ 10 ಸಾವಿರ ಲಡ್ಡು, 150 ಗ್ರಾಂ ತೂಕದ 2 ಲಕ್ಷ ಲಡ್ಡು ತಯಾರಿ ನಡೆಯುತ್ತಿದೆ.

ಲಡ್ಡು ತಯಾರಿಕೆಗಾಗಿ 100 ಕ್ವಿಂಟಾಲ್ ಕಡ್ಲೆಹಿಟ್ಟು, 200 ಕ್ವಿಂಟಾಲ್ ಸಕ್ಕರೆ,10 ಸಾವಿರ ಲೀ.ಖಾದ್ಯ ತೈಲ,500 ಕೆಜಿ ಗೋಡಂಬಿ,500 ಕೆಜಿ ಒಣದ್ರಾಕ್ಷಿ,250 ಕೆಜಿ ಬಾದಾಮಿ,1000 ಕೆಜಿ ಡೈಮಂಡ್ ಸಕ್ಕರೆ,2000 ಕೆಜಿ ಬೂರಾ ಸಕ್ಕರೆ,50 ಕೆಜಿ ಪಿಸ್ತಾ,ಏಲಕ್ಕಿ,ಜಾಕಾಯಿ,ಪಚ್ಚಕರ್ಪೂರ,200 ಕೆಜಿ ಲವಂಗ ಬಳಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀ ಬಾಷಾಂ ಸ್ವಾಮೀಜಿ ತಿಳಿಸಿದರು

ಜನವರಿ 1 2025ರ ಬೆಳಿಗ್ಗೆ 4 ಗಂಟೆಗೆ ವಿಶೇಷ ಪೂಜೆ ನಂತರ ಭಕ್ತರಿಗೆ ಲಡ್ಡು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ದೇವಾಲಯದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೋಕಕಲ್ಯಾಣಾರ್ಥವಾಗಿ ಲಡ್ಡು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ಅವರು ಹೇಳಿದರು.

1994ರಲ್ಲಿ ವರನಟ ಡಾ. ರಾಜಕುಮಾರ್ ಅವರು ದೇವಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ತಿರುಪತಿಗೆ ಜನತೆ ಹೋಗಿಬರುವುದು ಇತ್ತೀಚಿನ ದಿನಗಳಲ್ಲಿ ಕಷ್ಟ ಆಗುತ್ತಿದೆ. ಅದರಲ್ಲೂ ತಿರುಪತಿ ಲಡ್ಡು ಪ್ರಸಾದ ದೊರೆಯುವುದು ಇನ್ನೂ ಕಷ್ಟ ಹಾಗಾಗಿ ನಿಮ್ಮ ದೇವಾಲಯದಲ್ಲಿಯೇ ತಿರುಪತಿ ಮಾದರಿ ಲಡ್ಡು ಏಕೆ ಮಾಡಬಾರದು ಎಂದು ಸಲಹೆ ನೀಡಿದ್ದರು. ಹಾಗಾಗಿ ನಾವು ರಾಜಕುಮಾರ್ ಅವರು ಹೇಳಿದಂತೆ ತಿರುಪತಿ ಮಾದರಿಯಲ್ಲಿ ಲಡ್ಡು ಮಾಡಲು ಕ್ರಮ ಕೈಗೊಂಡೆವು ಎಂದು ಶ್ರೀಗಳು ತಿಳಿಸಿದರು.

ನೂತನ ವರ್ಷಾರಂಭದ ಪ್ರಯುಕ್ತ ಜನವರಿ 1ರಂದು ಬೆಳಗ್ಗೆ 4.00 ಗಂಟೆಯಿಂದ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಂಕ್ಷೇತ್ರ, ಮಧುರೈ ಕ್ಷೇತ್ರಗಳಿಂದ ತರಿಸಿರುವ ವಿಶೇಷ ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಸಹಸ್ರನಾಮರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ಹಾಗೂ ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮಾಡಲಾಗುವುದು ಎಂದು ಸ್ವಾಮಿಗಳು ವಿವರಿಸಿದರು.

ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಜಾತಿ, ಮತ ಧರ್ಮದ ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು.ಲಡ್ಡು ಪ್ರಸಾದವನ್ನು ವಿಶೇಷವಾಗಿ 60 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದೆ ಎಂದು
ಶ್ರೀ ಭಾಷ್ಯಂ ಸ್ವಾಮೀಜಿ ತಿಳಿಸಿದರು.

ನಂತರ ದೇವಾಲಯದ ಎನ್ ಶ್ರೀನಿವಾಸನ್‌ ಅವರು ಮಾತನಾಡಿ ಲೋಕ ಕಲ್ಯಾಣಾರ್ಥವಾಗಿ ನೂತನ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಹಾಗೂ ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಕುಲಪತಿ ಲೋಕನಾಥ್, ಡಾ. ರಾಜಕುಮಾರ್ ಅವರ ಪುತ್ರಿ ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

ನೂತನ ವರ್ಷಕ್ಕಾಗಿ ಯೋಗಾನರಸಿಂಹ ದೇವಾಲಯದಲ್ಲಿ 2 ಲಕ್ಷ ಲಡ್ಡು ವಿತರಣೆ Read More