ಮೈಸೂರಿಂದ ಜೈಪುರಕ್ಕೆ ಹೆಚ್ಚುವರಿ ರೈಲು:ಯದುವೀರ್ ಮನವಿಗೆ‌ ಇಲಾಖೆ ಸ್ಪಂದನೆ

ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನಿಂದ ಜೈಪುರಕ್ಕೆ ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂಬ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿಗೆ ರೈಲ್ವೆ ಇಲಾಖೆ
ಸ್ಪಂದಿಸಿದೆ

ದೀಪಾವಳಿ ಹಬ್ಬದ ಸಮಯದಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಹಾಗೂ ಮೈಸೂರಿನಿಂದ ಜೈಪುರಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ತಾತ್ಕಾಲಿಕವಾಗಿ ಹೊಸ ರೈಲು ಪರಿಚಯಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

ಈ ಕುರಿತು ಮಾಧ್ಯಮ ಪ್ರಕಟಣೆಯಲ್ಲಿ ಸಂಸದ ಯದುವೀರ್, ಮೈಸೂರಿನಿಂದ ರಾಜಸ್ತಾನದ ಜೈಪುರಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಜನದಟ್ಟಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ರೈಲ್ವೆ ಇಲಾಖೆಯು ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ರೈಲು ಸಂಚಾರಕ್ಕೆ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ರಾಜಸ್ತಾನದ ಜನರು ಹಾಗೂ ಇತರರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಯದುವೀರ್‌ ಒಡೆಯರ್‌ ಮನವಿ ಮಾಡಿದ್ದಾರೆ.

ಮೈಸೂರಿಂದ ಜೈಪುರಕ್ಕೆ ಹೆಚ್ಚುವರಿ ರೈಲು:ಯದುವೀರ್ ಮನವಿಗೆ‌ ಇಲಾಖೆ ಸ್ಪಂದನೆ Read More

ಡಿ.ಕೆ ಶಿವಕುಮಾರ್ ಹೇಳಿಕೆ ಹಾಸ್ಯಾಸ್ಪದ-ಯದುವೀರ್

ಮೈಸೂರು: ಚಾಮುಂಡಿಬೆಟ್ಟ ಹಿಂದುಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದ
ಎಂದು ಸಂಸದ ಯದುವೀರ್‌ ಒಡೆಯರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ವಿನಾಯಕ, ಗೌರಿ ಹಬ್ಬ ಆಚರಿಸುವ ವೇಳೆ ಡಿ.ಕೆ.ಶಿವಕುಮಾರ್ ಅವರ ಇಂತಹ ಹೇಳಿಕೆ ಹಿಂದೂ‌ ಭಾವನೆಗೆ ಧಕ್ಕೆ ತರುವ ವಿಚಾರ ಎಂದು ತಿಳಿಸಿದರು.

ಸಾವಿರಾರು ವರ್ಷಗಳ ಹಿಂದೆ ಮರ್ಕಂಡೇಯ ತಪಸ್ಸು ಮಾಡಿದ್ದ ಸ್ಥಳ ಅದು, ಸಾವಿರಾರು ವರ್ಷಗಳಿಂದ ಚಾಮುಂಡಿ ಬೆಟ್ಟ ಇರುವುದು ಕೂಡ ಉಲ್ಲೇಖ ಇದೆ ಚಾಮುಂಡಿಬೆಟ್ಟಕ್ಕೆ ಎಲ್ಲರಿಗೂ ಪ್ರವೇಶವಿದೆ. ಅದು ಧಾರ್ಮಿಕ ಸ್ಥಳವಾಗಿರುವ ಕಾರಣ ಎಲ್ಲರೂ ಹೋಗಬಹುದು ಎಂದು ಹೇಳಿದರು.

ಆಧುನಿಕ‌ ಕಾಲಘಟ್ಟದಲ್ಲಿ ಜಾತ್ಯಾತೀತ ದೃಷ್ಟಿಕೋನದಿಂದ ನೋಡಬಹುದು, ಲಕ್ಷಾಂತರ ಜನರ ಭಾವನೆಗೆ ಧಕ್ಕೆ ಉಂಟಾಗಿದೆ.ಧರ್ಮ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತೇವೆ,ಜತೆಗೆ ಕಾನೂನು ಚೌಕಟ್ಟಿನಲ್ಲೂ ಹೋರಾಡುತ್ತೇವೆ, ನಾವು ಎಲ್ಲ ಧರ್ಮ ಒಪ್ಪಿಕೊಳ್ಳುತ್ತೇವೆ ಹಾಗಂತ ಒಂದು ಧರ್ಮದ ಓಲೈಕೆಗೆ ಮುಂದಾಗಬಾರದು ಎಂದು ತಿಳಿಸಿದರು.

ರಾಜ್ಯದಲ್ಲಿ‌ ಹಲವು ಸಮಸ್ಯೆಗಳಿವೆ, ಅವುಗಳನ್ನ ಮುಚ್ಚಿ‌ ಹಾಕಲು ಇಂತಹ ಹೇಳಿಕೆ ಸರಿಯಲ್ಲಾ‌ ಎಂದು ಹೇಳಿದರು.

ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದು ಇದೇ ಕಾಂಗ್ರೆಸ್ ಸರ್ಕಾರ, ಬೆಟ್ಟವನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅವರ ಹುನ್ನಾರ. ಬರೀ ಹಿಂದೂ ದೇವಾಲಯಗಳನ್ನ ತೆಗೆದುಕೊಳ್ಳುತ್ತಾರೆ, ಬೆಂಗಳೂರಿನ ಆಂಜನೇಯ ದೇವಸ್ಥಾನವನ್ನೂ‌ ಹಾಗೆ ಮಾಡಿದರು ಯಾವಾಗಲೂ ಹಿಂದುಗಳಿಗೆ ವಿರುದ್ಧದ ಹೇಳಿಕೆ ನೀಡುತ್ತಿದ್ದಾರೆ ಎಂದು ಯದುವೀರ್ ಬೇಸರ‌ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್‌ ಅವರು ಆರ್ ಎಸ್ ಎಸ್ ಹಾಡು ಹಾಡಿ ಜಾಗೃತಿ ಎಂದು ಹೇಳಿ ಬಳಿಕ ಸ್ವಪಕ್ಷದವರ ವಿರೋಧಕ್ಕೇ ಗುರಿಯಾದರು. ಅದನ್ನ ಸಮತೋಲನಕ್ಕೆ ತರಲು ಕ್ಷಮೆ ಯಾಚಿಸಿದರು. ಪಕ್ಷಕ್ಕಾಗಿ, ಕಾರ್ಯಕರ್ತರಿಗಾಗಿ ಇಂತಹ ಹೇಳಿಕೆ ನೀಡಿರಬಹುದು ಎಂದು ಯದುವೀರ್‌ ವಿಶ್ಲೇಷಿಸಿದರು.

ಯಾವುದಾದರೂ ವಿಷಯ ಇದ್ದಾಗ ಡೈವರ್ಟ್ ಮಾಡಲು‌ ಕಾಂಗ್ರೆಸ್ ನವರು ಏನೇನೊ ಹೇಳಿಕೆ ನೀಡುತ್ತಾರೆ ಎಂದು ಆಕ್ಷೇಪಿಸಿದರು.

ಚಾಮುಂಡಿ ಬೆಟ್ಟ ಧಾರ್ಮಿಕ ಸ್ಥಳ,ಬೆಟ್ಟ ಹಿಂದುಗಳ ಆಸ್ತಿ, ಅದು ಎಂದೆಂದಿಗೂ ಹಿಂದುಗಳ ಆಸ್ತಿ ಆಗಿರುತ್ತದೆ ಉಪಮುಖ್ಯಮಂತ್ರಿಗಳ ಹೇಳಿಕೆಯಿಂದ ಏನೂ ಬದಲಾವಣೆ ಆಗಲಾರದು ಎಂದು ಯದುವೀರ್ ಒಡೆಯರ್ ಟಾಂಗ್ ನೀಡಿದರು.

ಡಿ.ಕೆ ಶಿವಕುಮಾರ್ ಹೇಳಿಕೆ ಹಾಸ್ಯಾಸ್ಪದ-ಯದುವೀರ್ Read More

ರೈತ ಸಂಕುಲ ಒಗ್ಗಟ್ಟಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ : ಯದುವೀರ್

ಮೈಸೂರು: ರೈತ ಸಂಕುಲ ಒಗ್ಗಟ್ಟಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ರೈತರು ಮತ್ತು ಸಂಘಟನೆಗಳು ತಮ್ಮ ವೈಯುಕ್ತಿಕ ವಿಚಾರಗಳನ್ನು ವೇದಿಕೆಯೊಳಗೆ ಚರ್ಚಿಸಿ,ದೇಶದ ಮುಂದೆ ಒಗ್ಗಟ್ಟು ಪ್ರದರ್ಶಿಸಿ ಒಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ದೇಶ ಮತ್ತು ರೈತ ಸಂಕುಲದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ನಗರದ ಪುರಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತಸಂಘಟನೆಗಳ ಮಹಾ ಒಕ್ಕೂಟದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ನೇತೃತ್ವದಲ್ಲಿ ಏರ್ಪಡಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಯದುವೀರ್ ಮಾತನಾಡಿದರು.

ದೇಶದ ರೈತರ ಒಳಿತಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಪ್ರಮುಖವಾಗಿ ವಿಕಸಿತ ಭಾರತ ಪರಿಕಲ್ಪನೆ ಅಡಿಯಲ್ಲಿ ರೈತರ ಸಬಲೀಕರಣಕ್ಕೆ ಮುಂದಾಗಿ ಬಲಿಷ್ಠ ಭಾರತ ನಿರ್ಮಾಣ ಮಾಡುವ ಕನಸು ಹೊಂದಿದ್ದಾರೆ ಎಂದು ಹೇಳಿದರು.

ಅದರಂತೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು, ಮಣ್ಣಿನ ಫಲವತ್ತತೆ ಕಾಪಾಡುವ ಗೊಬ್ಬರ, ಮಣ್ಣಿನ ಪರೀಕ್ಷೆ, ಹನಿ ನಿರಾವರಿ ಯೋಜನೆಗಳನ್ನು ರೂಪಿಸಿರುವುದಲ್ಲದೇ, ದೇಶಾದ್ಯಂತ ಅನೇಕ ಕೃಷಿ ಅಧ್ಯಯನ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದು ತಿಳಿಸಿದರು.

ಅನೇಕ ಕಡೆ ಶುಂಠಿ ಬೆಳೆಗೆ ವಿಪರೀತ ರಾಸಾಯನಿಕ ಗೊಬ್ಬರಗಳನ್ನು ಬಳಸಿರುವ ಕಾರಣ ಮಣ್ಣಿನ ಫಲವತ್ತತೆ ನಶಿಸಿದೆ. ಇದಕ್ಕೆ ಮತ್ತೇ ಜೀವ ಕೊಡುವ ಅವಶ್ಯಕತೆ ಇದ್ದು, ಬೇವಿನ ಹಿಂಡಿಯನ್ನು ಗೊಬ್ಬರವಾಗಿ ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕೆಂದು ಸಲಹೆ ನೀಡಿದರು.

ದೇಶದಲ್ಲಿ ಕೃಷಿ ಕ್ಷೇತದಲ್ಲಿ ಕ್ರಾಂತಿ ಮೂಡಿಸಿದ ಮಾಜಿ ಪ್ರಧಾನಿ ದಿ.ಚೌದರಿ ಚರಣ್ ಸಿಂಗ್ ಸ್ಮರಣಾರ್ಥ ವಿಶ್ವ ರೈತದಿನಾಚರಣೆ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಾಯಕರು ಕೃಷಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ವಿಶ್ವ ರೈತದಿನಾಚರಣೆ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಯದುವೀರ್ ತಿಳಿಸಿದರು

ರೈತ ಸುಖವಾಗಿದ್ದರೆ ಮಾತ್ರ ದೇಶ ಸುಖವಾಗಿರುತ್ತದೆ. ಈ ನಿಟ್ಟಿನಲ್ಲಿ ರೈತಬಣದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಅವರು ತಮ್ಮ ಪ್ರಾಮಾಣಿಕ ಪ್ರಯತ್ನಗಳ ಮೂಲಕ ರೈತರನ್ನು ಸಂಘಟಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ,ಇಂತಹ ನಾಯಕತ್ವ ರೈತರಿಗೆ ಬೇಕಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷರಾದ ಬೀರಪ್ಪ ದೇಶನೂರು ಮಾತನಾಡಿದರು.

ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ವಿಶ್ವ ರೈತ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಆಹ್ವಾನ ನೀಡಲಾಗಿತ್ತು ಆದರೇ, ಯಾರೂ ಬಂದಿಲ್ಲ. ರೈತರ ಸಮಸ್ಯೆ ಈಡೇರಿಸಿಲ್ಲ.ಒಂದು ವೇಳೆ ಕಾರ್ಯಕ್ರಮಕ್ಕೆ ಬಂದರೆ ರೈತರಿಗೆ ಉತ್ತರಿಸಬೇಕಾಗುತ್ತದೆ ಎಂಬ ಭಯದಿಂದ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಟೀಕಿಸಿದರು.

ರೈತರನ್ನು ದೇಶದ ಬೆನ್ನೆಲುಬು ಎಂದು ರಾಜಕಾರಣಿಗಳು ಕೇವಲ ವೇದಿಕೆಗಳಲ್ಲಿ ಹೇಳುತ್ತಾರೆ. ಆದರೇ, ದೇಶಕ್ಕೆ ಅನ್ನ ನೀಡುವ ರೈತರನ್ನು ಸದಾ ಕಾಲ ನೆನೆಯಲು ವಿಶ್ವ ರೈತ ದಿನಾಚರಣೆಯನ್ನು ಸರ್ಕಾರವೇ ಆಚರಿಸಲಿ ಎಂದು ಒತ್ತಾಯಿಸಿದರು.

ರೈತ ಮುಖಂಡರಾದ, ಗಣೇಶ ಇಳಿಗೆರ, ಎನ್.ಎಂ.ಸಿದ್ದೇಶ್ ಉತ್ತಂಗಿ, ಮಲ್ಲೀಕ್ ಆವರ್ತಿ, ರವಿಕುಮಾರ್, ಬಸವನಗೌಡ ಪಾಟೀಲ್, ಬಿಡದಿ ಮಹೇಶ್, ರಾಮನಗರ ವಿನೂತಾಗೌಡ, ಈಶ್ವರ್‌ಗೌಡ, ನಾಗರಾಜ್ ಹೂಗಾರ್, ಕಂಠಿ, ಮಂಜು ಪಾಳ್ಯ, ಮಹಬೂಬ್ ಸಾಬ್, ಜವರನಾಯಕ, ಮಂಜುನಾಥ್, ಮಂಜುನಾಥ್ ಜಯಪುರ, ಭೈರೇಗೌಡ, ಹನುಮಂತಪ್ಪ ನಾಯಕ, ಕೃಷ್ಣೇಗೌಡ, ಈರಣ್ಣ ಅಂಗಡಿ, ವೆಂಕಟೇಶ್, ರಾಮೇಗೌಡ, ನಾಗರತ್ನ, ಮಂಗಳ, ಸುಜಾತಾ ಜಾಧವ್, ಜಯಶೀಲ, ರೇಖಾ, ನಾಗವೇಣಿ, ಜ್ಯೋತಿ, ಶೃತಿ, ಶಿವರಾಜು, ದ್ರಾಕ್ಷಿ ಶಿವರಾಮು, ಕೆಂಪರಾಜು, ದಯಾನಂದ ಮುಂತಾದವರು
ಪಾಲ್ಗೊಂಡಿದ್ದರು.

.

ರೈತ ಸಂಕುಲ ಒಗ್ಗಟ್ಟಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ : ಯದುವೀರ್ Read More

ಮುಡಾ ಹಗರಣ:ಸಿದ್ದು ರಾಜೀನಾಮೆಗೆ ಯದುವೀರ್ ಆಗ್ರಹ

ಮೈಸೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಲೋಕಸಭಾ ಸದಸ್ಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯದುವೀರ್, ಮುಡಾ ಪ್ರಕರಣವನ್ನು ಸಿಬಿಐ ನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಮೂಡಾ ಹಗರಣದ ಬಗ್ಗೆ ಮಾಹಿತಿ ನೀಡುವಂತೆ ಇಡಿ ಮುಡಾ ಅಧಿಕಾರಿಗಳಿಗೆ 3 ಬಾರಿ ನೋಟಿಸ್ ನೀಡಿದ್ದರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ದಾಳಿ ಹಿಂದೆ ಯಾವುದೇ ರಾಜಕೀಯ ದ್ವೇಷ ಇಲ್ಲ ಎಂದು ಹೇಳಿದರು.

ಮುಡಾದಲ್ಲಿ ನಡೆದಿದೆ ಎನ್ನಲಾದ ಮುಖ್ಯಮಂತ್ರಿಗಳ ಪತ್ನಿ ಪಾರ್ವತಿಯವರಿಗೆ ನೀಡಲಾಗಿರುವ 14 ಸೈಟ್ ಗಳ ಕುರಿತು ಮಾತ್ರ ಅಲ್ಲ ಮುಡಾದಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಬಗ್ಗೆಯೂ ಸಿಬಿಐ ತನಿಖೆ ನಡೆಯಬೇಕು ಎಂದು ಯದುವೀರ್ ಒತ್ತಾಯಿಸಿದರು.

ಮೈಸೂರು ಏರ್ಪೋರ್ಟ್ ನಲ್ಲಿ ರನ್ ವೇ ಕಾರ್ಯ ನಡೆಯುತ್ತಿರುವುದರಿಂದ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳು ಆಗಮಿಸುತ್ತಿಲ್ಲ ಎಂದು ಸಂಸದರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಶ್ರೀವತ್ಸ, ಮಾಜಿ ಶಾಸಕ ನಾಗೇಂದ್ರ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಮುಡಾ ಹಗರಣ:ಸಿದ್ದು ರಾಜೀನಾಮೆಗೆ ಯದುವೀರ್ ಆಗ್ರಹ Read More