ಸುರಂಗ ರಸ್ತೆ ಮೂಲಕ ಪರಿಸರ ನಾಶ:ಸರ್ಕಾರದ ‌ವಿರುದ್ಧ ಅಶೋಕ ಆಕ್ರೋಶ

ಬೆಂಗಳೂರು: ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಪರಿಸರವನ್ನು ಹಾಳುಗೆಡವುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು

ಸ್ಯಾಂಕಿ ಕೆರೆ ಬಳಿ ನಡೆದ ಸಹಿ ಸಂಗ್ರಹ ಹಾಗೂ ಪರಿಶೀಲನೆ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸುರಂಗ ರಸ್ತೆಗಾಗಿ ಸ್ಯಾಂಕಿ ಕೆರೆಗೆ ಧಕ್ಕೆ ತರಲಾಗುತ್ತಿದೆ. ನಾವ್ಯಾರೂ ಅಭಿವೃದ್ಧಿಯ ವಿರೋಧಿಗಳಲ್ಲ, ಆದರೆ ಯಾವುದೇ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಂದರೂ ಪರಿಸರವನ್ನು ಹಾಳು ಮಾಡಲು ನೋಡುತ್ತದೆ. ಪರಿಸರ ಇಲಾಖೆ, ಪುರಾತತ್ವ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳ ಅನುಮತಿಯನ್ನೂ ಪಡೆದಿಲ್ಲ ಎಂದು ಆರೋಪಿಸಿದರು.

ಮೆಟ್ರೋ ಯೋಜನೆಯಿಂದಾಗಿ ನಗರದಲ್ಲಿ ಟ್ರಾಫಿಕ್ ಕಡಿಮೆಯಾಗಿದೆ. ಲಕ್ಷಾಂತರ ಜನರು ಮೆಟ್ರೊ ಬಳಸುತ್ತಿದ್ದಾರೆ. ಇದನ್ನೇ ಸುಧಾರಣೆ ಮಾಡಿ ಬೇಗ ಯೋಜನೆ ಪೂರ್ಣಗೊಳಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಸುರಂಗ ಕೊರೆದರೆ ಉಂಟಾಗುವ ಹೂಳನ್ನು ಎಲ್ಲಿಗೆ ಸಾಗಿಸುತ್ತಾರೆ ಎಂಬ ಬಗ್ಗೆ ಖಾತರಿಯಿಲ್ಲ. ಕಾಸು ಹೊಡೆಯುವ ಯೋಜನೆ ನಗರಕ್ಕೆ ಬೇಕಿಲ್ಲ. ಈಗಾಗಲೇ ಬಿಹಾರ ಚುನಾವಣೆಗೆ ಹಣ ಕಳುಹಿಸಿದ್ದಾರೆ. ಈ ರೀತಿ ಹಣ ಮಾಡಲು ಯೋಜನೆ ಮಾಡಬಾರದು ಎಂದು ಟೀಕಿಸಿದರು.

ತೆರಿಗೆಗಳ ಭಾರದಿಂದ ಬೆಂಗಳೂರಿನ ಜನರಿಗೆ ಚಿತ್ರಹಿಂಸೆಯಾಗಿದೆ. ತ್ಯಾಜ್ಯ, ನೀರು ಎಲ್ಲ ದರ ಏರಿಕೆಯಾಗಿದೆ. ಸುರಂಗ ರಸ್ತೆ ನಿರ್ಮಾಣವಾದರೆ ಅದಕ್ಕೆ 20 ಸಾವಿರ ರೂ. ನಷ್ಟು ಟೋಲ್ ಪಾವತಿಸಬೇಕಾಗುತ್ತದೆ. ಸರ್ಕಾರ ಈ ಬಗ್ಗೆ ಚಿಂತನೆ ಮಾಡಲಿ ಎಂದು ‌ಸಲಹೆ ನೀಡಿದರು.

ಕಾಂಗ್ರೆಸ್ ಸೋಲು ಕಂಡಾಗಲೆಲ್ಲ ಮತಗಳ್ಳತನ ಹಾಗೂ ಇವಿಎಂ ಸರಿ ಇಲ್ಲ ಎಂಬ ಆರೋಪ ಬರುತ್ತದೆ. ಬಿಹಾರದಲ್ಲೇ ವೋಟ್ ಚೋರಿ ಬಗ್ಗೆ ಅಭಿಯಾನ ಮಾಡಿದ್ದು, ಅದನ್ನು ಮತದಾರರು ತಿರಸ್ಕರಿಸಿದ್ದಾರೆ. ಮತಪಟ್ಟಿ ಪರಿಷ್ಕರಣೆ ವೇಳೆ ಅನ್ಯದೇಶಗಳ ಜನರ ಹೆಸರು, ಸತ್ತವರ ಹೆಸರು ರದ್ದಾಗಿದೆ. ವಿಶೇಷ ಪರಿಷ್ಕರಣೆ ಸರಿ ಇಲ್ಲ ಎಂದರೆ ಯಾರೂ ನಂಬಲ್ಲ. ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಮಕಾಡೆ ಮಲಗಿದ್ದು, ಕರ್ನಾಟಕದಲ್ಲೂ ಆಡಳಿತ ಕೊನೆಯಾಗಲಿದೆ. ವೋಟ್ ಚೋರಿ ಎಂದು ಹೇಳಿ ಬಿಹಾರದ ಜನತೆಗೆ ಅಪಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಅಶೋಕ ಒತ್ತಾಯಿಸಿದರು.

ಬಿಹಾರದ ಚುನಾವಣೆಯಲ್ಲಿ ಗೆದ್ದಿದ್ದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಅವಕಾಶ ಬರುತ್ತಿತ್ತು. ಈಗ ಸಿಎಂ ಸಿದ್ದರಾಮಯ್ಯ ಬಲಿಷ್ಠವಾಗಿದ್ದಾರೆ. ರಾಹುಲ್ ಗಾಂಧಿಯ ಮಾತನ್ನು ಇನ್ನು ಯಾರೂ ಕೇಳುವುದಿಲ್ಲ. ಸಿದ್ದರಾಮಯ್ಯನವರ ಮಾತನ್ನು ರಾಹುಲ್ ಗಾಂಧಿ‌‌ ಕೇಳಬೇಕಾಗುತ್ತದೆ ಎಂದು ವ್ಯಂಗ್ಯವಾಗಿ ನುಡಿದರು.

ಸುರಂಗ ರಸ್ತೆ ಮೂಲಕ ಪರಿಸರ ನಾಶ:ಸರ್ಕಾರದ ‌ವಿರುದ್ಧ ಅಶೋಕ ಆಕ್ರೋಶ Read More

2.2 ಕಿ.ಮೀ. ಟನಲ್ ರಸ್ತೆಗೆ 1,385 ಕೋಟಿ ಡಿಪಿಆರ್‌ ಬೇಕಿತ್ತೆ:ಅಶೋಕ್ ಚಾಟಿ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಸಾರ್ ಯಾಕಿಷ್ಟು ದುಬಾರಿ ಡಿಪಿಆರ್ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯ ಹಾಗೂ ಕಾರವಾಗಿ ಚಾಟಿ ಬೀಸಿದ್ದಾರೆ.

2.2 ಕಿ.ಮೀ. ಟನಲ್ ರಸ್ತೆಗೆ 1,385 ಕೋಟಿ ಡಿಪಿಆರ್. ಉಪ ಮುಖ್ಯ ಮಂತ್ರಿಗಳೆ
ತಾವು ಮಾಡಿಸುವ ಡಿಪಿಆರ್ ಗಳು ಚಿನ್ನದ ಕಾಗದದ ಮೇಲೆ ಬರೆಯಲಾಗುತ್ತೋ ಅಥವಾ ಚಿನ್ನದ ಶಾಹಿಯಿಂದ ಮುದ್ರಣ ಆಗುತ್ತೋ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಇನ್ನೆಷ್ಟು ಲೂಟಿ ಹೊಡೆಯುತ್ತೀರಿ ಸ್ವಾಮಿ. ಕನ್ನಡಿಗರನ್ನು ಲೂಟಿ ಹೊಡೆಯಲು ಇನ್ನೆಷ್ಟು ಹಗಲು ದರೋಡೆ ಯೋಜನೆಗಳನ್ನು ರೂಪಿಸುತ್ತೀರಿ.

ಟನಲ್ ರೋಡು ಬೇಡ ಯಾವುದೂ ಬೇಡ, ಮೊದಲು ಈಗಿರುವ ರಸ್ತೆಗಳನ್ನು ರಿಪೇರಿ ಮಾಡಿಸಿ, ಸರಿಯಾಗಿ ನಿರ್ಹವಣೆ ಮಾಡಿ, ಮೆಟ್ರೋ ಕಾಮಗಾರಿ ಚುರುಕುಗೊಳಿಸಿ ಸಧ್ಯಕ್ಕೆ ಅಷ್ಟು ಸಾಕು ಎಂದು ಅಶೋಕ್ ಸಲಹೆ ನೀಡಿದ್ದಾರೆ.

2.2 ಕಿ.ಮೀ. ಟನಲ್ ರಸ್ತೆಗೆ 1,385 ಕೋಟಿ ಡಿಪಿಆರ್‌ ಬೇಕಿತ್ತೆ:ಅಶೋಕ್ ಚಾಟಿ Read More

ಮೊದಲು ಪಾಲಿಕೆ ಶಿಕ್ಷಕರಿಗೆ ಸಂಬಳ ಕೊಡಿ-ಅಶೋಕ್ ಆಗ್ರಹ

ಬೆಂಗಳೂರು: ಟನಲ್ ರೋಡ್ ಬಿಡಿ ಸ್ವಾಮಿ,ಮೊದಲು ಪಾಲಿಕೆ ಶಿಕ್ಷಕರಿಗೆ ಸಂಬಳ ಕೊಡಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪರೋಕ್ಷವಾಗಿ ಬೆಂಗಳೂರು ಅಭಿವೃದ್ಧಿ ಸಚಿವರೂ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಆಗ್ರಹಿಸಿದ್ದಾರೆ.

ಸುರಂಗ ರಸ್ತೆ ಮಾಡ್ತೀನಿ, ಸ್ಕೈ ಡೆಕ್ ಮಾಡ್ತೀನಿ, ಬ್ರ್ಯಾಂಡ್ ಬೆಂಗಳೂರು ಮಾಡ್ತೀನಿ, ಜಿಬಿಎ ಮಾಡ್ತೀನಿ ಅಂತ ಬರೀ ಸುಳ್ಳು ಹೇಳಿ ಕನ್ನಡಿಗರಿಗೆ ಚೊಂಬು ಕೊಟ್ಟಿದ್ದೇ ನಿಮ್ಮ ಸಾಧನೆ ಎಂದು ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

ನಿಮ್ಮ ಜಿಬಿಎ ಅವ್ಯವಸ್ಥೆಯಿಂದ ಪಾಲಿಕೆ ಶಿಕ್ಷಕರು ಕಳೆದ 4 ತಿಂಗಳಿಂದ ಸಂಬಳವಿಲ್ಲದೆ ಸಂಸಾರ ತೂಗಿಸಲು ಪರದಾಡುತ್ತಿದ್ದಾರೆ. ಮೊದಲು ಅವರಿಗೆ ಬಾಕಿ ವೇತನ ಬಿಡುಗಡೆ ಮಾಡಿ ಶಿಕ್ಷರರ ಸಮಸ್ಯೆ ಬಗೆಹರಿಸಿ ಎಂದು ಅಶೋಕ ತಾಕೀತು ಮಾಡಿದ್ದಾರೆ.

ಮೊದಲು ಪಾಲಿಕೆ ಶಿಕ್ಷಕರಿಗೆ ಸಂಬಳ ಕೊಡಿ-ಅಶೋಕ್ ಆಗ್ರಹ Read More