ಕಲೆಯೂ ಸಮಾಜದಲ್ಲಿ ಸಂವೇದನೆ ಸಾಮರಸ್ಯ ಉತ್ತೇಜಿಸುತ್ತದೆ: ಗೆಹ್ಲೋಟ್

ಮೈಸೂರು: ಸಂಗೀತವು ಮನಸ್ಸಿನ ಸಂಘರ್ಷಗಳನ್ನು ಶಾಂತಗೊಳಿಸುವ, ಹಿಂಸೆಯನ್ನು ಕರುಣೆಯಾಗಿ ಪರಿವರ್ತಿಸುವ ಮತ್ತು ಮಾನವೀಯತೆಯನ್ನು ಏಕತೆಯಲ್ಲಿ ಬಂಧಿಸುವ ಶಕ್ತಿಯನ್ನು ಹೊಂದಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲೆಯ ಉದ್ದೇಶ ಕೇವಲ ಅದನ್ನು ಪ್ರದರ್ಶಿಸುವುದಲ್ಲ, ಬದಲಾಗಿ ಸಮಾಜದಲ್ಲಿ ಸಂವೇದನೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವುದಾಗಿದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯಲ್ಲಿ ಸಂಗೀತ ಮತ್ತು ಕಲೆಗೆ ಬಹಳ ಉನ್ನತ ಸ್ಥಾನವಿದೆ. ನಮ್ಮ ವೇದಗಳು “ನಾದೋಸ್ಮಿ ಪರಂ ಬ್ರಹ್ಮ” ಎಂದು ಹೇಳುತ್ತವೆ, ಅಂದರೆ ಶಬ್ದವೇ ಪರಮಾತ್ಮ. ಈ ಶಬ್ದವು ಮಾನವರಲ್ಲಿ ಅಡಗಿರುವ ಸೌಂದರ್ಯ, ಕರುಣೆ ಮತ್ತು ಪ್ರೀತಿಯನ್ನು ಜಾಗೃತಗೊಳಿಸುವ ಶಕ್ತಿಯಾಗಿದೆ. ಸಂಗೀತವು ಹೃದಯವನ್ನು ಮೃದುಗೊಳಿಸುತ್ತದೆ, ಆಲೋಚನೆಗಳನ್ನು ಶುದ್ಧೀಕರಿಸುತ್ತದೆ ಮತ್ತು ಆತ್ಮವನ್ನು ಉನ್ನತೀಕರಿಸುತ್ತದೆ ಎಂದು ತಿಳಿಸಿದರು.

ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಯುಗದಲ್ಲಿ, ಕಲಾವಿದರು ಮನುಷ್ಯರಲ್ಲಿ ಸಂವಹನ, ಸಹಾನುಭೂತಿ ಮತ್ತು ಸಾಮರಸ್ಯಕ್ಕೆ ದಾರಿ ಮಾಡಿಕೊಡುವ ಸೇತುವೆಯಾಗಿದ್ದಾರೆ ಎಂದು ಬಣ್ಣಿಸಿದರು.

ವಿದ್ಯಾರ್ಥಿಗಳೇ, ನಿಮ್ಮ ಕಲೆಯನ್ನು ಸಾರ್ವಜನಿಕ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣದ ಉದ್ದೇಶಕ್ಕೆ ಬಳಸಿಕೊಳ್ಳಿ. ನೆನಪಿಡಿ, ಕಲೆಯು ಮಾನವೀಯತೆಯ ಸೇವೆಗೆ ಸಮರ್ಪಿತವಾದಾಗ ಮಾತ್ರ ಅದು ಪೂರ್ಣಗೊಳ್ಳುತ್ತದೆ. ನಿಮ್ಮ ಸಂಗೀತ, ನೃತ್ಯ, ನಾಟಕ ಮತ್ತು ಪ್ರದರ್ಶನ ಕಲೆಗಳ ಮೂಲಕ ನೀವು ದೇಶದ ಸಾಂಸ್ಕೃತಿಕ ಏಕತೆಯನ್ನು ಬಲಪಡಿಸಬಹುದು ಎಂದು ರಾಜ್ಯಪಾಲರು‌ ಸಲಹೆ ನೀಡಿದರು.

ಸ್ವತಂತ್ರ ಭಾರತದಲ್ಲಿ ಖಯಾಲ್ ಗಾಯನಕ್ಕೆ ಹೊಸ ಗುರುತನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹೆಸರಾಂತ ಗಾಯಕಿ, ಗೌರವಾನ್ವಿತ ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯವು ಸಂಸ್ಕೃತಿ, ಕಲೆ ಮತ್ತು ಸಂಗೀತದ ಅಮೂಲ್ಯ ಪರಂಪರೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ ಎಂದು ಗೆಹ್ಲೋಟ್ ಶ್ಲಾಘಿಸಿದರು.

ಈ ವಿಶ್ವವಿದ್ಯಾಲಯವು ಭಾರತೀಯ ಸಂಗೀತ ಮತ್ತು ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿ ಒಂದು ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ. ಸಂಗೀತ ಮತ್ತು ಪ್ರದರ್ಶನ ಕಲೆಗಳಿಗೆ ತನ್ನ ಸಮರ್ಪಿತ ಕೊಡುಗೆಗಳ ಮೂಲಕ ತನಗಾಗಿ ಒಂದು ವಿಶಿಷ್ಟ ಗುರುತನ್ನು ಕೆತ್ತಿಕೊಂಡಿದೆ. ಇದು ಭಾರತೀಯ ಸಂಸ್ಕೃತಿಯ ಚೈತನ್ಯವಾದ ಸಂಗಿತಂ ಸರ್ವಭಾಷು ಮೌನಂ ಅನ್ನು ಸಾಕಾರಗೊಳಿಸುತ್ತದೆ ಎಂದು ಹೇಳಿದರು.

ಇಂದಿನ ಘಟಿಕೋತ್ಸವವು ಕಲೆ, ಆಧ್ಯಾತ್ಮಿಕ ಅಭ್ಯಾಸ ಮತ್ತು ಸಂಸ್ಕೃತಿಯ ಸಂಗಮದ ಆಚರಣೆಯಾಗಿದೆ. ಈ ಘಟಿಕೋತ್ಸವ ಸಮಾರಂಭದಲ್ಲಿ, ಗೌರವಾನ್ವಿತ ಜನಾರ್ದನ, ಪ್ರೊಫೆಸರ್ ಬಿ.ಆರ್. ಶೇಷಾದ್ರಿ ಅಯ್ಯಂಗಾರ್ ಮತ್ತು ಜಿ.ಎಂ. ಶಿವಪ್ರಸಾದ್ ಅವರಿಗೆ ಗೌರವ ಪದವಿಗಳನ್ನು ಪ್ರದಾನ ಮಾಡುವ ಮೂಲಕ ಗೌರವಿಸಲಾಗಿದೆ. ಈ ಮಹನೀಯರ ಅತ್ಯುತ್ತಮ ಸಾಧನೆಗಳು ಮತ್ತು ಸಮಾಜದ ಪ್ರಗತಿಗೆ ನೀಡಿದ ಕೊಡುಗೆಗಾಗಿ ಅವರನ್ನು ಅಭಿನಂದಿಸುತ್ತೇನೆ ಮತ್ತು ಈ ಮಹನೀಯರು ಸಮಾಜ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವುದನ್ನು ಮುಂದುವರಸಲಿ ಎಂದು ಆಶಿಸುತ್ತೇನೆ ಎಂದು ರಾಜ್ಯಪಾಲರು ಹೇಳಿದರು.

ಸಮಾರಂಭದಲ್ಲಿ ಕೇರಳದ ಕಲಾಮಂಡಲ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಅನಂತ್ಕೃಷ್ಣನ್, ಕುಲಪತಿ ಪ್ರೊ.ನಾಗೇಶ್ ವಿ ಬೆಟ್ಟಕೋಟೆ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಕಲೆಯೂ ಸಮಾಜದಲ್ಲಿ ಸಂವೇದನೆ ಸಾಮರಸ್ಯ ಉತ್ತೇಜಿಸುತ್ತದೆ: ಗೆಹ್ಲೋಟ್ Read More

ಶಾಸಕರ ಅಮಾನತು, ರಾಜ್ಯಪಾಲರೊಂದಿಗೆ ಚರ್ಚೆ: ಆರ್‌.ಅಶೋಕ

ಬೆಂಗಳೂರು: ಬಿಜೆಪಿಯ 18 ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಜೊತೆ ಚರ್ಚಿಸಲಾಗಿದ್ದು,ಈ ಕುರಿತು ಸರ್ಕಾರ ಹಾಗೂ ಸ್ಪೀಕರ್‌ ಜೊತೆ ಅವರು ಚರ್ಚಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದರು.

ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕಳೆದ ಅಧಿವೇಶನದಲ್ಲಿ ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್‌ ಕುರಿತು ಹಾಗೂ ಮುಸ್ಲಿಂ ಮೀಸಲಾತಿ ವಿರುದ್ಧ ಬಿಜೆಪಿಯಿಂದ ಪ್ರತಿಭಟಿಸಲಾಗಿತ್ತು. ಈ ವೇಳೆ ಸ್ಪೀಕರ್‌ ಯು.ಟಿ.ಖಾದರ್‌ ಬಿಜೆಪಿಯ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಟೀಕಿಸಿದರು.

ದೇಶದಲ್ಲಿ ಕಾಂಗ್ರೆಸ್‌ ತುರ್ತು ಪರಿಸ್ಥಿತಿಯನ್ನು ತಂದಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಅಧಿವೇಶನದಲ್ಲಿ ಮಾತಾಡಿ ಎಂದೇ ಜನರು ನಮಗೆ ಮತ ನೀಡಿದ್ದಾರೆ. ನಿತ್ಯದ ಕೆಲಸಗಳಿಗೂ ಈ ಅಮಾನತು ಕ್ರಮ ಅಡ್ಡಿಯಾಗಿದೆ ಎಂದು ಕಿಡಿಕಾರಿದರು.

ಈ ಹಿಂದೆ ಕಾಂಗ್ರೆಸ್‌ ಶಾಸಕರು ಸ್ಪೀಕರ್‌ ಪೀಠಕ್ಕೆ ನುಗ್ಗಿದ್ದರು. ಆಗ ಪ್ರಜಾಪ್ರಭುತ್ವದ ಆಶಯದಂತೆಯೇ ಬಿಜೆಪಿ ಸರ್ಕಾರ ನಡೆದುಕೊಂಡಿತ್ತು. ಆಡಳಿತ ಪಕ್ಷದಂತೆ ವಿರೋಧ ಪಕ್ಷವೂ ಮುಖ್ಯ. ಕಾನೂನು ಸಚಿವರ ಜೊತೆಗೆ ಹಾಗೂ ಸ್ಪೀಕರ್‌ ಜೊತೆಗೆ ಮಾತಾಡಲಾಗಿದೆ. ಈ ಅಮಾನತು ಆದೇಶವನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಲಾಗಿದೆ. ಈ ಕುರಿತು ರಾಜ್ಯಪಾಲರ ಗಮನಕ್ಕೆ ತರಲಾಗಿದೆ. ರಾಜ್ಯಪಾಲರು ಸ್ಪೀಕರ್‌ ಜೊತೆ ಮಾತಾಡುತ್ತೇನೆ ಹಾಗೂ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು

ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರು, ಭಯೋತ್ಪಾದಕ ದಾಳಿಯ ಬಗ್ಗೆ ತಪ್ಪಾಗಿ ಹೇಳುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಕೇಳಿಯೇ ಉಗ್ರರು ಶೂಟ್‌ ಮಾಡಿದ್ದಾರೆ. ಸಚಿವ ಆರ್‌.ಬಿ.ತಿಮ್ಮಾಪುರ ಅವರ ಪ್ರಕಾರ, ಉಗ್ರರು ಬಹಳ ಅವಸರದಲ್ಲಿದ್ದು, ಕೂಡಲೇ ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಕುಟುಂಬದವರೇ ಘಟನೆಯನ್ನು ವಿವರಿಸಿದ್ದಾರೆ. ಇಷ್ಟಿದ್ದರೂ ಧರ್ಮದ ಆಧಾರದಲ್ಲಿ ಮಾಡಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ನಾಯಕರಿಗೆ ಓಟು ಮುಖ್ಯವೇ ಹೊರತು ರಾಷ್ಟ್ರ ಮುಖ್ಯವಲ್ಲ ಎಂದು ಅಶೋಕ ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿದರೆ ಅವರನ್ನು ರಥದಲ್ಲಿ ಮೆರವಣಿಗೆ ಮಾಡಿ ಆಹ್ವಾನ ಮಾಡುತ್ತಾರೆ. ಹಾಗೆಯೇ ಅವರಿಗೆ ಪಾಕಿಸ್ತಾನದ ಉನ್ನತ ನಾಗರಿಕ ಪ್ರಶಸ್ತಿ ಕೂಡ ದೊರೆಯುತ್ತದೆ. ಯುದ್ಧವನ್ನು ಸೇನೆ ಹಾಗೂ ಹಿರಿಯ ನಾಯಕರು ತೀರ್ಮಾನಿಸುತ್ತಾರೆ. ಈ ಸಮಯದಲ್ಲಿ ಈ ರೀತಿ ಹೇಳಿಕೆ ನೀಡಬಾರದು ಎಂದು ಗರಂ‌ಆಗಿ ನುಡಿದರು.

ರೈಲ್ವೆ ಇಲಾಖೆಯ ಪರೀಕ್ಷೆಯಲ್ಲಿ ತಾಳಿ, ಜನಿವಾರ ತೆಗೆಯಬೇಕು ಎಂಬ ಸೂಚನೆ ಬಂದಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಬಳಿ ಚರ್ಚಿಸಿದ್ದು, ಈ ರೀತಿ ನಿಯಮ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.

ಶಾಸಕರ ಅಮಾನತು, ರಾಜ್ಯಪಾಲರೊಂದಿಗೆ ಚರ್ಚೆ: ಆರ್‌.ಅಶೋಕ Read More